ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆ ಕಾಂಗ್ರೆಸ್ ಮಹತ್ವದ ಸಭೆ
ಬೆಂಗಳೂರು, ಸೆಪ್ಟೆಂಬರ್ 04: ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ನಿರೀಕ್ಷಿತ ತೀರ್ಪು ಬರದೆ, ಅವರು 10 ದಿನಗಳ ಕಾಲ ಇಡಿ ವಶಕ್ಕೆ ದೊರೆತ ಬೆನ್ನಲ್ಲೆ ಕೆಪಿಸಿಸಿ ಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಬಂಧನ ಕುರಿತ ತೀರ್ಪು ಹೊರಬಂದ ನಂತರ ಕೆಪಿಸಿಸಿ ಕಚೇರಿಯಲ್ಲಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಕಾಂಗ್ರೆಸ್ ನ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ್ ಪ್ರಕರಣ: ನ್ಯಾಯಾಲಯದಲ್ಲಿ ನಡೆದ ವಾದದ ಪೂರ್ಣ ವಿವರ
ಡಿ.ಕೆ.ಶಿವಕುಮಾರ್ ಬಂಧನ ಆದ ಕಾರಣ, ಕಾಂಗ್ರೆಸ್ ಪಕ್ಷವು ಹೋರಾಟದ ಮುಂದಿನ ರೂಪು ರೇಷೆಗಳನ್ನು ರೂಪಿಸಲು ಈ ಸಭೆ ಸೇರಲಾಗಿತ್ತು. ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಜಿ.ಪರಮೇಶ್ವರ್, ವೀರಪ್ಪ ಮೊಯ್ಲಿ, ಎಚ್.ಸಿ.ಮಹದೇವಪ್ಪ, ಎಂ.ಕೃಷ್ಣಪ್ಪ, ಶಿವಶಂಕರ ರೆಡ್ಡಿ, ಚೆಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಮೋಟಮ್ಮ ಇನ್ನೂ ಕೆಲವು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ದಿನೇಶ್ ಗುಂಡೂರಾವ್ ವಹಿಸಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಮತ್ತು ಪಿ.ಚಿದಂಬರಂ ಅವರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಇಂತಹಾ ದ್ವೇಷ ರಾಜಕಾರಣ ನಾವು ನೋಡಿರಲಿಲ್ಲ, ಇದರ ಬಗ್ಗೆಯೇ ನಾವು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
ಅಣ್ಣನ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಡಿ.ಕೆ.ಸುರೇಶ್
ನಮಗೆ ಇಡಿ, ಐಟಿ ತನಿಖೆ ಬಗ್ಗೆ ಆಕ್ಷೇಪ ಇಲ್ಲ, ಆದರೆ ಉದ್ದೇಶ ಕೆಟ್ಟದಾಗಿದ್ದಾಗ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಮೋದಿ ಪ್ರಧಾನಿ ಆದ ಬಳಿಕ ಕಾನೂನನ್ನು ಗಾಳಿಗೆ ತೂರಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಗಂಡಾಂತರ ಬಂದಿದೆ, ಬಿಜೆಪಿಯ ಷಡ್ಯಂತ್ರಕ್ಕೆ ತಕ್ಕ ಉತ್ತರ ನಾವು ಕೊಡುತ್ತೇವೆ ಎಂದು ಅವರು ಹೇಳಿದರು.