"ಹರ.. ಹರ.. ಮುಖ್ಯಮಂತ್ರಿ ಯಡಿಯೂರಪ್ಪರನ್ನೇ ಬೆದರಿಸುವುದೇ ಸ್ವಾಮೀಜಿ?"
ಬೆಂಗಳೂರು, ಜನವರಿ.15: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರಿನಲ್ಲೇ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳು ಹಾಗೆ ಮಾತನಾಡಬಾರದಿತ್ತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಗುರುವಿನ ಸ್ಥಾನದಲ್ಲಿರುವ ಸ್ವಾಮೀಜಿ ರಾಜಕಾರಣಿಗಳಿಗೆ ಸಲಹೆ ನೀಡಬೇಕೇ ವಿನಃ ಬೆದರಿಕೆ ಹಾಕಬಾರದು ಎನ್ನುವ ಮೂಲಕ ಬಿಎಸ್ ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?
ತುಂಬಿದ ಸಭೆಯಲ್ಲಿ ನೆರೆದ ಜನರನ್ನು ಉದ್ದೇಶಿಸಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯು ಒಂದು ಸಮುದಾಯವೇ ನಿಮ್ಮ ಕೈ ಬಿಡುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದು ತಪ್ಪು ಎಂದು ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀಗಳ ಹೇಳಿಕೆಯ ಖಂಡನಾರ್ಹ ಎಂದು ತಿಳಿಸಿದ್ದಾರೆ.
"ಬಿಜೆಪಿ ಹೈಕಮಾಂಡ್ ನಿಂದಲೂ ಸಿಎಂ ಮೇಲೆ ಒತ್ತಡ"
ಬಿಜೆಪಿ ಹೈಕಮಾಂಡ್ ನಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ಇದ್ದೇ ಇರುತ್ತದೆ. ಅವರೇ ಸಂಕಷ್ಟದಲ್ಲಿ ಇರುವಂತಾ ಸಂದರ್ಭದಲ್ಲಿ ಶ್ರೀಗಳ ಹೇಳಿಕೆಯಿಂದ ಸಹಜವಾಗಿ ಬಿಎಸ್ ವೈ ಅವರಿಗೆ ಕೋಪ ಬಂದಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಎಸ್ ವೈ ಪರ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.
ಬಿಜೆಪಿಯಿಂದ ಗೆದ್ದ ಹೊಸ ಶಾಸಕರಿಗೂ ಸ್ಥಾನ ನೀಡಬೇಕು
ಇನ್ನು, ಕಾಂಗ್ರೆಸ್ ನಿಂದ ಬಿಜೆಪಿಗೆ ತೆರಳಿ ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಎಸ್ ವೈ ಮಾತು ಕೊಟ್ಟಿದ್ದಾರೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಗೊಂದಲದಲ್ಲಿದ್ದಾರೆ. ಹೀಗಿರುವಾಗ ಶ್ರೀಗಳು ಇಂಥ ಮಾತನ್ನು ಆಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆದಷ್ಟು ಬೇಗ ಪೂರ್ಣ ಪ್ರಮಾಣದ ಬಜೆಟ್ ಅಧಿವೇಶನ ನಡೆಸಬೇಕಿದೆ "
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನಗಳು ಕಳೆದಿವೆ. ಈವರೆಗೂ ಸಚಿವ ಸಂಪುಟ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿಲ್ಲ. ಅದೆಷ್ಟೋ ಖಾತೆಗಳು ಸಿಎಂ ಬಳಿ ಇದ್ದಾವೆಯೇ ಹೊರತೂ ಇಂದಿಗೂ ಹಂಚಿಕೆಯಾಗಿಲ್ಲ. ಇನ್ನು, ಪೂರ್ಣ ಪ್ರಮಾಣದ ಬಜೆಟ್ ಅಧಿವೇಶನವೂ ನಡೆದಿಲ್ಲ ಎಂದು ಕಿಡಿ ಕಾರಿದರು.
ಸಿಎಂ ಎದುರಿನಲ್ಲೇ ವಚನಾನಂದ ಸ್ವಾಮೀಜಿ ಹೇಳಿದ್ದೇನು ಗೊತ್ತೆ?
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿಯಲ್ಲಿ ನಡೆದ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಮುರುಗೇಶ್ ನಿರಾಣಿ ಪರ ಬ್ಯಾಟಿಂಗ್ ಮಾಡಿದ್ದರು. ಮುರುಗೇಶ್ ನಿರಾಣಿ ನಿಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಪಂಚನಸಾಲಿ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಈ ಬಾರಿ ನೀವು ಸಮುದಾಯವನ್ನು ಕೈ ಬಿಟ್ಟರೆ, ಮುಂದಿನ ಬಾರಿ ಸಮುದಾಯವೇ ನಿಮ್ಮ ಕೈ ಬಿಡುತ್ತದೆ ಎನ್ನುವ ಥಾಟಿಯಲ್ಲಿ ಮಾತನಾಡಿದ್ದರು. ಇದರಿಂದ ಕೆರಳಿದ ಸಿಎಂ ಯಡಿಯೂರಪ್ಪ, ಹೀಗೆಲ್ಲ ಮಾತನಾಡಿದರೆ ವೇದಿಕೆಯಿಂದ ಹೊರಟು ಹೋಗುತ್ತೇನೆ ಎಂದು ಹೇಳಿದ್ದರು.