ಕಾರವಾರ ಪ್ರತಿಭಟನೆ; ಮಾಜಿ ಶಾಸಕ ಸತೀಶ್ ಸೈಲ್ ವಿರುದ್ಧ ಪೂಜಾರಿ ಕಿಡಿ
ಬೆಂಗಳೂರು, ಜನವರಿ 16: 'ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯಿಂದಾಗಿ ಟ್ಯಾಗೋರ್ ಕಡಲತೀರದ ಸೊಬಗಿಗೆ ಯಾವುದೇ ಹಾನಿ ಆಗುವುದಿಲ್ಲ. ಆದರೆ, ಅಂದು ಈ ಯೋಜನೆಯ ಶಿಲಾನ್ಯಾಸ ಸಮಯದಲ್ಲಿ ಶಾಸಕರಾಗಿದ್ದ ಸತೀಶ್ ಸೈಲ್ ಇಂದು ರಾಜಕೀಯಕ್ಕಾಗಿ ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ' ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ಕಾರವಾರ ಬಂದರು ವಿಸ್ತರಣೆ ವಿಚಾರವಾಗಿ ಮೀನುಗಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ವಾಣಿಜ್ಯ ಬಂದರು ನಿರ್ಮಾಣ ಮಾಡುವುದರಿಂದ ಸಮಸ್ಯೆ ಉಂಟಾಗಲಿದೆ ಎಂದು ಸ್ಥಳೀಯ ಮೀನುಗಾರರು ಹಾಗೂ ಮುಖಂಡರು ಹೇಳುತ್ತಿದ್ದಾರೆ. ರವೀಂದ್ರನಾಥ್ ಟ್ಯಾಗೋರ್ ಕಡಲತೀರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಆತಂಕಗೊಂಡಿದ್ದಾರೆ. ಆದರೆ, ನಾನು ಅಲ್ಲಿನ ಮೀನುಗಾರರಿಗೆ, ಸಾರ್ವಜನಿಕರಿಗೆ ತಿಳಿಸುತ್ತೇನೆ; ಯಾವುದೇ ರೀತಿಯ ಸಮಸ್ಯೆ ಆಗದ ರೀತಿ ಸರ್ಕಾರ ಕ್ರಮ ವಹಿಸುತ್ತದೆ' ಎಂದಿದ್ದಾರೆ.
ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್
'ಈ ಬಗ್ಗೆ ಮೀನುಗಾರರು, ಸ್ಥಳೀಯರನ್ನು ಕರೆದು ಸಭೆ ಮಾಡುತ್ತೇನೆ' ಎಂದ ಅವರು, 'ಕೇಂದ್ರದ ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಆಗಲಿದೆ. ಇದಕ್ಕೆ ಈ ಹಿಂದೆ ಶಿಲಾನ್ಯಾಸ ಮಾಡಿದ್ದವರು ಅಂದಿನ ಸಿಎಂ ಸಿದ್ದರಾಮಯ್ಯ. ಅವತ್ತು ಶಾಸಕರಾಗಿದ್ದವರು ಈಗ ವಿರೋಧ ಮಾಡುತ್ತಿರುವ ಮಾಜಿ ಶಾಸಕ ಸತೀಶ್ ಶೈಲ್. ಅವರೇ ಈ ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈಗ ಅವರೇ ಇಲ್ಲಸಲ್ಲದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ಬ್ಯಾರಿಕೇಡ್ ಮುರಿದು ಕಾಮಗಾರಿಗೆ ತಡೆವೊಡ್ಡಲು ಯತ್ನ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ
ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, 'ಕಾರವಾರದ ಶಾಂತಿ ಭಂಗ ತರಲು ಮಾಜಿ ಶಾಸಕ ಸತೀಶ್ ಸೈಲ್ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಮಗಾರಿ ಉದ್ಘಾಟನೆಗೆ ಅವರೇ ಸಹಕಾರ ಕೊಟ್ಟಿದ್ದರು. ಇದೀಗ ಅವರೇ ಸತೀಶ್ ಸೈಲ್ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಪ್ರತಿಭಟನೆ ಮೂಲಕ ಸ್ಥಳೀಯವಾಗಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ' ಎಂದು ಕಿಡಿಕಾರಿದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲ ಕೂಡ ಈ ವೇಳೆ ಇದ್ದರು.