ಕೋವಿಂದ್ ಭೇಟಿ ವೇಳೆ 'ಕೋಲಿ' ಸಮಾಜದವರಿಂದ ಲಿಂಬಾವಳಿ ಮೇಲೆ ಹಲ್ಲೆ ಯತ್ನ
ಬೆಂಗಳೂರು, ಜುಲೈ 5: ಮತಯಾಚನೆಗೆ ಬೆಂಗಳೂರಿಗೆ ಬಂದಿದ್ದ ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಭೇಟಿಗೆ ಅವಕಾಶ ನಿರಾಕರಿಸಿದ್ದಕ್ಕಾಗಿ ಕೋಲಿ ಸಮಾಜದ ಮುಖಂಡರು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಬುಧವಾರ ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಕೋವಿಂದ್ ಮತಯಾಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಕೋಲಿ ಸಮಾಜದ ಮುಖಂಡರು ತಮ್ಮದೇ ಸಮುದಾಯದ ಕೋವಿಂದ್ ಭೇಟಿಗಾಗಿ ಬಂದಿದ್ದರು.
ಬೆಳಿಗ್ಗೆಯಿಂದ ಕೋವಿಂದ್ ಭೇಟಿಗಾಗಿ ಕಾದಿದ್ದ ಇವರು, 'ತಮ್ಮ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದು, ಮೀಸಲಾತಿಗೆ ಮನವಿ,' ಹೀಗೆ ಒಂದಷ್ಟು ಬೇಡಿಕೆಗಳನ್ನು ಇಟ್ಟುಕೊಂಡಿದ್ದರು.
ಆದರೆ ಕೋಲಿ ಸಮಾಜದ ಮುಖಂಡರಿಗೆ ಭೇಟಿಗೆ ಅವಕಾಶ ನಿರಾಕರಿಸಿದರು ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ. ಇದರಿಂದ ಕೋಲಿ ಸಮಾಜದವರು ವ್ಯಗ್ರರಾದರು.
ಅರವಿಂದ ಲಿಂಬಾವಳಿ ವಿರುದ್ಧ ತಿರುಗಿ ಬಿದ್ದ ಮುಖಂಡರು, ಏರು ಧ್ವನಿಯಲ್ಲಿ ವಾಗ್ವಾದಕ್ಕಿಳಿದಿದ್ದಲ್ಲದೇ ನೇರವಾಗಿ ಅವರ ಮೇಲೆ ಧಾವಿಸಿ ಬಂದರು. ಈ ಸಂದರ್ಭ ಭದ್ರತಾ ಸಿಬ್ಬಂದಿಗಳು ಲಿಂಬಾವಳಿಯವರನ್ನು ರಕ್ಷಿಸಿ ಸ್ಥಳದಿಂದ ಕರೆದುಕೊಂಡು ಹೋದರು. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಇನ್ನು ಘಟನೆ ನಡೆಯುವುದಕ್ಕೆ ಕೆಲವೇ ನಿಮಿಷಕ್ಕೂ ಮೊದಲು ಮತಯಾಚನೆ ಮುಗಿಸಿ ಕೋವಿಂದ್ ಹೊಟೇಲಿನಿಂದ ನಿರ್ಗಮಿಸಿದ್ದರು.