ಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮ
ಬೆಂಗಳೂರು, ನವೆಂಬರ್ 12: ಸಂಕಷ್ಟಕ್ಕೊಳಗಾದ ಕೊಡಗಿನ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪೀಪಲ್ ಫಾರ್ ಪೀಪಲ್ ತಂಡ ಆಯೋಜಿಸಿರುವ ಕೊಡಗಿಗಾಗಿ ರಂಗ ಸಪ್ತಾಹ ಕಾರ್ಯಕ್ರಮ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಭಾನುವಾರದಂದು ಉದ್ಘಾಟನೆ ಆಯಿತು.
ರಂಗಸಪ್ತಾಹದ ಮೊದಲ ದಿನ ಇಡೀ ಸಭಾಂಗಣ ತುಂಬಿದ್ದರ ಜತೆಗೆ ಅನನ್ಯ ಭಟ್ ಮತ್ತು ತಂಡದವರ ಜನಪದಗೀತಜಾತ್ರೆ, ಮಂಡ್ಯ ರಮೇಶ್ ನಿರ್ದೇಶನದ ನಟನ ತಂಡದವರು ಅಭಿನಯಿಸಿದ ಚೋರಚರಣದಾಸ ಪ್ರೇಕ್ಷಕರ ಮನಸೂರೆಗೊಂಡಿತು.
ಕೊಡಗಿಗಾಗಿ ರಂಗಸಪ್ತಾಹ, ಬನ್ನಿ ಪಾಲ್ಗೊಳ್ಳಿ, ನೆರವು ನೀಡಿ
ನವೆಂಬರ್ 11ರಿಂದ ನವೆಂಬರ್ 16ರ ತನಕ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಗಾಯನ ಹಾಗೂ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಟಿಕೆಟ್ ಬೆಲೆ 100 ಹಾಗೂ 600ರು ಸೀಸನ್ ಪಾಸ್ ದರ ನಿಗದಿ ಮಾಡಲಾಗಿದೆ. ಹೆಚ್ಚಿನ ವಿವರಗಳನ್ನು people for people blr ಫೇಸ್ಬುಕ್ ಪುಟದಲ್ಲಿ ಪಡೆಯಬಹುದು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕೊಡಗಿನ ಅನಾಹುತಕ್ಕೆ ನೆರವಾಗಲು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಆರಂಭವಾದ ಪೀಪಲ್ ಫಾರ್ ಕೊಡಗು ತಂಡವು ರಂಗಸಪ್ತಾಹ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನವೆಂಬರ್ 12ರಂದು ಗಾಯಕಿ ಸ್ಪರ್ಶ ಆರ್. ಕೆ ಅವರಿಂದ ವಚನ ವಿಶೇಷ ಕಾರ್ಯಕ್ರಮ, ಬೆನಕ ತಂಡದಿಂದ ಹಯವದನ ನಾಟಕ ಪ್ರದರ್ಶನವಿದೆ.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೊಡಗು ತಲ್ಲಣಗೊಂಡಿದೆ, ನೊಂದಿದೆ. ನಮಗೆಲ್ಲವನ್ನೂ ಕೊಟ್ಟ ಕೊಡಗಿನ ದುಃಸ್ಥಿತಿಯನ್ನು ಮರೆಯಬಾರದು. ಅದಕ್ಕಾಗಿಯೇ ಈ ಕಾರ್ಯಕ್ರಮ. ಇದೊಂದು ಜಾಗೃತಿ ಕಾರ್ಯಕ್ರಮ. ಪರಿಸರ ಕಲುಷಿತಗೊಂಡಿರುವುದಕ್ಕೆ ಮನುಷ್ಯನ ಮನಸ್ಸು ಕಲುಷಿತಗೊಂಡಿರುವುದೇ ಕಾರಣ.
ಪರಿಸರ ನಮ್ಮ ತಾಯಿ. ತಾಯಿಯಂಥಾ ಪರಿಸರವನ್ನು ಇನ್ನಾದರೂ ರಕ್ಷಿಸಬೇಕು. ಸದ್ಯಕ್ಕೆ ಕೊಡಗಿನ ಪ್ರಾಕೃತಿಕ ಹಾನಿಯಿಂದ ಸಂತ್ರಸ್ತರಾಗಿರುವ ಕೊಡಗಿನ ಜನಕ್ಕೆ ಅಗತ್ಯವಾದ ಕೆಲಸವನ್ನು ನಾವೆಲ್ಲರೂ ಮಾಡೋಣ. ಪೀಪಲ್ ಫಾರ್ ಪೀಪಲ್ ತಂಡಕ್ಕೆ ಆದಿಚುಂಚನಗಿರಿ ಮಠದ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಕೊಡಗಿನ ಸಂತ್ರಸ್ತ ಕುಟುಂಬದವರೂ ಪಾಲ್ಗೊಂಡಿದ್ದರು
ಕೊಡಗಿನ ಸಂತ್ರಸ್ತ ಕುಟುಂಬದವರೂ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಖ್ಯಾತ ಪರಿಸರ ತಜ್ಞ ಡಾ. ಯಲ್ಲಪ್ಪರೆಡ್ಡಿ, ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಸಂಚಾರಿ ವಿಜಯ್, ಒರಟ ಪ್ರಶಾಂತ್ , ಕೊಡಗು ನಿವೃತ್ತ ಜಿಲ್ಲಾಧಿಕಾರಿ, ಕೆಎಂಎಫ್ ಮಾಜಿ ಅಧ್ಯಕ್ಷ ಪ್ರೇಮನಾಥ್, ಡಾ.ಸಿ.ಅಶ್ವತ್ಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಖ್ಯಾತ ಪರಿಸರತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ
ಖ್ಯಾತ ಪರಿಸರತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ದೇಶದ ಸಮಸ್ಯೆಗಳ ಬಗ್ಗೆ ಯುವಕರು ಚಿಂತನೆ ಮಾಡಿ ಪರಿಹಾರ ಕೈಗೊಳ್ಳಬೇಕೆಂಬ ಗಾಂಧೀಜಿಯವರ ಚಿಂತನೆ ಈಗಲೂ ಪ್ರಸ್ತುತ. ಈ ನಿಟ್ಟಿನಲ್ಲಿ ಪೀಪಲ್ ಫಾರ್ ಪೀಪಲ್ ತಂಡದ ಕಾರ್ಯ ಶ್ಲಾಘನೀಯ. ಪರಿಸರ ಸಂರಕ್ಷಣೆಯತ್ತ ನಾವು ಹೆಚ್ಚಿನ ಗಮನವಹಿಸಬೇಕಿದೆ. ಪರಿಸರ ಸಂರಕ್ಷಣೆಯಿಂದ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂದರು. ಡಾಲಿ ಧನಂಜಯ್ ಮಾತನಾಡಿ ಸಮಸ್ಯೆಗಳಿಗೆ ಆ ಕ್ಷಣಕ್ಕೆ ಸ್ಪಂದಿಸೋದು ಮಾತ್ರವಲ್ಲ, ಸಮಸ್ಯೆಯನ್ನು ಸಂಪೂರ್ಣ ಪರಿಹರಿಸುವತ್ತಲೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಪೀಪಲ್ ಫಾರ್ ಪೀಪಲ್ ತಂಡ ಸಕ್ರಿಯವಾಗಿ ಕಾರ್ಯನಿರತವಾಗಿದೆ ಎಂದರು.
ಕೊಡಗಿಗಾಗಿ ಸ್ಪಂದಿಸುತ್ತಿರುವ ಪೀಪಲ್ ಫಾರ್ ಪೀಪಲ್
ಪೀಪಲ್ ಫಾರ್ ಕೊಡಗು ತಂಡಕ್ಕೆ ರಾಜ್ಯದ ನಾನಾಭಾಗಗಳಿಂದ 3000ಕ್ಕೂ ಹೆಚ್ಚು ತಂಡಗಳು ಸ್ಪಂದಿಸಿ ಲಕ್ಷಾಂತರ ರೂಪಾಯಿಯ ಅವಶ್ಯಕ ವಸ್ತುಗಳನ್ನು ಒದಗಿಸಿ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ನೆರವಾದವು. ಪೀಪಲ್ ಫಾರ್ ಕೊಡಗು ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್ನೊಂದಿಗೆ, ಆಗಬೇಕಾಗಿರುವ ಒಟ್ಟು 19 ಅಂಶಗಳ ಪಟ್ಟಿಯನ್ನು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಲಾಗಿದೆ