ಕೊಡವರನ್ನು ನಾನು ಅಪಮಾನಿಸಿಲ್ಲ : ಕೋ.ಚ
ಬೆಂಗಳೂರು, ಜ.2: 'ಅಪ್ರತಿಮ ದೇಶ ಭಕ್ತ ಟಿಪ್ಪು ಸುಲ್ತಾನ್' ಕೃತಿಯಲ್ಲಿ ನಾನು ಕೊಡವ ಸಮಾಜದವರಿಗೆ ಅಪಮಾನ ವಾಗುವಂತೆ ಬರೆದಿಲ್ಲ. ಟಿಪ್ಪುವನ್ನು ಅತಿಯಾಗಿ ವೈಭವಿ ಕರಿಸಿಯೂ ಇಲ್ಲ ಎಂದು 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಕೊ.ಚನ್ನಬಸಪ್ಪ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರೀಟಿಷರು ಲಾಠಿ ಚಾರ್ಜ್ ಮಾಡಿದಾಗಲೂ ನಾನು ಬಗ್ಗಲಿಲ್ಲ.
ಏಕೀಕರಣ ಸಂದರ್ಭದಲ್ಲಿ ನನಗೆ ಬೆಂಕಿ ಇಡಲು ಬಂದಾಗಲೂ ಜಗ್ಗಲಿಲ್ಲ. ಈಗ ಯಾರೋ ಕೆಲವರು ಮಡಿಕೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ಬೆದರುವುದಿಲ್ಲ ಎಂದು ಹೇಳಿದರು.
ನಾನು ಬರೆದಿರುವ ಅಪ್ರತಿಮ ದೇಶಭಕ್ತ ಟಿಪ್ಪುಸುಲ್ತಾನ್ ಕೃತಿಯಲ್ಲಿ ಯಾವುದೇ ಸಮಾಜ ದವರಿಗೂ ನಾನು ಅಪಮಾನ ಮಾಡಿಲ್ಲ. ಮೈಸೂರು ರಾಜ್ಯದ ಅಧಿಸೂಚನೆಯಲ್ಲಿ ಕೂರ್ಗ್ ಡಿಸ್ಟ್ ಎಂಬ ಗ್ರಂಥವಿದೆ. ಅದನ್ನು ಸತ್ಯನ್ ಬರೆದಿದ್ದಾರೆ. ಆ ಗ್ರಂಥದಲ್ಲಿ ಕೊಡವರು ಭಾರತಕ್ಕೆ ಬಂದವರು ಎಂಬ ಉಲ್ಲೇಖವಿದೆ.
ಆಗಿನ ಸಲಹಾ ಮಂಡಳಿ ಯಲ್ಲಿದ್ದ ಬಿ.ಎನ್.ಕೃಷ್ಣಯ್ಯ ಅವರು ಸತ್ಯನ್ ಬರೆದಿರುವುದನ್ನು ಒಪ್ಪಿದ್ದಾರೆ. ನಾನು ಅದಷ್ಟನ್ನು ಮಾತ್ರ ನನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆಯೇ ಹೊರತು ಕೊಡವರಿಗೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಬೆದರಿಕೆ ಹಾಕುವುದು ಬೇಡ. ಮೊದಲು ಕೃತಿ ಹಾಗೂ ಇತಿಹಾಸವನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು ಎಂದು ಕೋ.ಚನ್ನಬಸಪ್ಪ ಮನವಿ ಮಾಡಿದರು.
ಪತ್ರಕರ್ತ ಜಿ.ರಾಮಕೃಷ್ಣ ಅವರು ಮಾತನಾಡಿ, ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್ ಪುಸ್ತಕವನ್ನು ಸರಿಯಾಗಿ ಓದದೆ ಕೆಲವರು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳು ತ್ತಿರುವುದು ಸರಿಯಲ್ಲ. ಮೊದಲು ಪುಸ್ತಕವನ್ನು ಓದಿ ಅರ್ಥಮಾಡಿ ಕೊಳ್ಳಲಿ. ಯಾವುದೇ ಕಾರಣಕ್ಕೂ ಕೋ.ಚನ್ನಬಸಪ್ಪ ಅವರನ್ನು ಕ್ಷಮೆಯಾಚಿಸುವಂತೆ ಒತ್ತಾಯ ಮಾಡಬಾರದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನವ ಕರ್ನಾಟಕ ಪಬ್ಲಿಕೇಷನ್ ವ್ಯವಸ್ಥಾಪಕ ನಿರ್ದೇಶಕ ರಾಜಾರಾವ್ ಉಪಸ್ಥಿತರಿದ್ದರು.