ಪಕ್ಷದ ನಿಷ್ಠಾವಂತ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ದಕ್ಕಲಿಲ್ಲವೇಕೆ?
ಬೆಂಗಳೂರು, ಆಗಸ್ಟ್ 20: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆಯ ಮೊದಲ ಹಂತದ ಪ್ರಕ್ರಿಯೆ ಮಂಗಳವಾರಕ್ಕೆ ಸಂಪನ್ನವಾಗಿದೆ. 17 ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗುವ ಅದೃಷ್ಟ ಪಡೆದುಕೊಂಡಿದ್ದಾರೆ. ಸಚಿವ ಸ್ಥಾನ ವಂಚಿತರು ಅಸಮಾಧಾನ ತೋಡಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ನೂತನ ಸಚಿವರ ಖಾತೆ ಹಂಚಿಕೆ ಬಗ್ಗೆ ಸಿಎಂ ಚಿಂತಿಸುತ್ತಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಇದೆಲ್ಲದರ ನಡುವೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದೇಕೆ? ಲಿಂಬಾವಳಿ ಅವರಿಗೆ ಉನ್ನತ ಸ್ಥಾನ ಭರವಸೆ ಸಿಕ್ಕಿದೆಯೇ? ಎಂಬ ಕುತೂಹಲ ಹುಟ್ಟಿಕೊಂಡಿದೆ. ಲಿಂಬಾವಳಿ ಅವರನ್ನು ಸಿಎಂ ಸ್ಥಾನದಲ್ಲಿ ಕಾಣಬೇಕು ಎಂಬ ಆಸೆ ಹೊತ್ತಿದ್ದ ಅಭಿಮಾನಿಗಳಿಗೆ, ಸಚಿವ ಸ್ಥಾನವೂ ದಕ್ಕಲಿಲ್ಲವಲ್ಲ ಏಕೆ ಎಂದು ತಲೆಕೆಡಿಸಿಕೊಂಡಿದ್ದಾರೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಲ್ಲದೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕೂಡಾ ತಮ್ಮದೇ ಆದ ಸಮೀಕ್ಷೆ ಮೂಲಕ ಸಚಿವ ಸ್ಥಾನಕ್ಕೆ ಸೂಕ್ತರಾದ ಶಾಸಕರ ಪಟ್ಟಿಯನ್ನು ತಯಾರಿಸಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ಪಟ್ಟಿಗಳಲ್ಲಿ ಅರವಿಂದ್ ಲಿಂಬಾವಳಿ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿತ್ತು.
ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರು
ಆದರೆ, ಸಂಪುಟಕ್ಕೆ ಸೇರ್ಪಡೆ ವಿಷ್ಯದಲ್ಲಿ ಲಿಂಬಾವಳಿ ಅವರಿಗೆ ಮೊದಲ ಪ್ರಾಶಸ್ತ್ಯ ಸಿಕ್ಕಿಲ್ಲ.
ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ
ಮುಂದಿನ ಹಂತದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ಹೆಸರು ಕೇಳಿ ಬಂದಿದ್ದು ಸುಳ್ಳಲ್ಲ. ಒಟ್ಟಾರೆ, ಲಿಂಬಾವಳಿ ಅವರಿಗೆ ಯಾವ ಸ್ಥಾನ ಸಿಗಲಿದೆ, ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೇಕೆ? ಇದರ ಹಿಂದೆ ಇತ್ತೀಚೆಗೆ ಹರಿದಾಡಿದ ವಿಡಿಯೋ ಕಾರಣವೇ? ಪಕ್ಷದ ನಿಷ್ಠಾವಂತರಿಗೆ ಬಿಜೆಪಿ ಹೈಕಮಾಂಡ್ ಸ್ಥಾನ ನೀಡಲಿದೆ ಎಂಬ ಮಾತು ಸುಳ್ಳಾಲಿದೆ ಎಂದೆಲ್ಲ ಪ್ರಶ್ನೆಗಳು ಎದ್ದಿವೆ. ಲಿಂಬಾವಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಮಹದೇವಪುರ ಕ್ಷೇತ್ರದ ಮತದಾರರು ಸಹಜವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಬಾವಳಿ ಹೆಸರು
ಚಿಕ್ಕಮಗಳೂರು ಶಾಸಕ ಸಿ. ಟಿ ರವಿ ಅವರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಸಿ.ಟಿ ರವಿ ಅವರು ಈಗ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಿದ್ದಾರೆ. ಹಾಗಾಗಿ, ಅರವಿಂದ ಲಿಂಬಾವಳಿ ಆಯ್ಕೆಯ ಬಗ್ಗೆ ಹೈಕಮಾಂಡ್ ಪರಿಶೀಲನೆ ನಡೆಸಿದ್ದು, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ದಲಿತರನ್ನು ಪಕ್ಷದತ್ತ ಕರೆದುಕೊಂಡು ಬರಲು ಲಿಂಬಾವಳಿ ಆಯ್ಕೆಯ ಬಗ್ಗೆ ಒಲವು ಮೂಡಿದೆ. ಈ ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅವರಿಗೆ ಪಕ್ಷ ಸಂಘಟನೆಯ ಅನುಭವವನ್ನು ಈಗ ಮೈಗೂಡಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎಬಿವಿಪಿ, ಆರೆಸ್ಸೆಸ್, ಬಿಜೆಪಿ ನಿಷ್ಠಾವಂತ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿದ್ದ ಲಿಂಬಾವಳಿ ಅವರು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿದವರು, ಆರೆಸ್ಸೆಸ್ ನಲ್ಲಿ 35ಕ್ಕೂ ಅಧಿಕ ಸೇವೆ, ಬಿಜೆಪಿ ಸೇರಿ ಮೇಲ್ಮನೆ ಸದಸ್ಯರಾಗಿದ್ದ ಲಿಂಬಾವಳಿ ಅವರು ಮೂರು ಬಾರಿ ವಿಧಾನಸಭೆಯೆ ಆಯ್ಕೆಯಾಗಿದ್ದಾರೆ. ಎಬಿವಿಪಿ ಸಂಘಟನೆಯ ಮೂಲಕ ಬೆಳೆದವರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆ ಕಟ್ಟಡ, ಅಂಗನವಾಡಿ, ಗ್ರಂಥಾಲಯ, ವ್ಯಾಯಾಮ ಶಾಲೆ, ಕ್ರೀಡಾಂಗಣ ಅಭಿವೃದ್ಧಿ ಇವರ ಸಾಧನೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನೆರವಾದರು
ಅಪರೇಷನ್ ಕಮಲ ನಡೆಸುವ ಮೂಲಕ ಕೈ ತೆನೆ ಮೈತ್ರಿ ಸರ್ಕಾರವನ್ನು ಉರುಳಿಸಿದರೂ ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಂಡು ಬಿಜೆಪಿ ಸದನದಲ್ಲಿ ಬಹುಮತ ಗೆಲ್ಲುವ ತನಕ ಅವರನ್ನು ಕಾಯುವ ಪಡೆಯಲ್ಲಿ ಅರವಿಂದ ಲಿಂಬಾವಳಿಯೂ ಇದ್ದರು. ಹೀಗಾಗಿ, ಈ ಸಚಿವ ಸಂಪುಟಕ್ಕೆ ಸುಲಭ ಸೇರ್ಪಡೆಯಾಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಸಂಭಾವ್ಯ ಸಚಿವರ ಪಟ್ಟಿಯಲ್ಲೂ ಹೆಸರು ಕಾಣಿಸಿಕೊಂಡಿತ್ತು. ಲೋಕಸಭೆ ಚುನಾವಣೆ 2019ರಲ್ಲಿ ಬೆಂಗಳೂರಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿದ್ದರು.
ವಿಡಿಯೋ ವೈರಲ್ ಆಗಿದ್ದು ಮುಳುವಾಯಿತೇ?
ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಸ್ಥಾಪನೆಗೆ ಮುಂದಾಗಿದ್ದ ಸಂದರ್ಭದಲ್ಲಿ ಲಿಂಬಾವಳಿ ಅವರದ್ದು ಎನ್ನಲಾದ ಒಂದು ಅಶ್ಲೀಲ ವಿಡಿಯೋ ಬಿಡುಗಡೆಯಾಗಿತ್ತು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. "ಇದು ನಕಲಿ ವಿಡಿಯೋ ಇದು ವಿರೋಧಿಗಳು ಮಾಡಿರುವ ಕೃತ್ಯ" ಎಂದು ಅರವಿಂದ್ ಸ್ಪಷ್ಟಪಡಿಸಿದ್ದರು. ಸದನದ ಕಲಾಪದ ವೇಳೆ ಇದೇ ವಿಡಿಯೋ ಬಗ್ಗೆ ಪ್ರಸ್ತಾಪ ಬಂದು ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದರು. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಸುಳ್ಳು ವಿಡಿಯೋ ಹಂಚುತ್ತಿರುವವರ ವಿರುದ್ಧ ಲಿಂಬಾವಳಿ ಅವರ ಆಪ್ತ ಸಹಾಯಕ ಗಿರೀಶ್ ಭಾರದ್ವಾಜ್ ಅವರು ದೂರು ನೀಡಿದ್ದರು. ಆದರೆ, ಇದೆಲ್ಲವೂ ಹೈಕಮಾಂಡ್ ಗೆ ಕಾಣಲಿಲ್ಲವೇ, ಸದನದಲ್ಲಿ ಅಶ್ಲೀಲ ವಿಡಿಯೋ ನೋಡಿದ ಸಿಸಿ ಪಾಟೀಲ, ಲಕ್ಷ್ಮಣ ಸವದಿ ಅವರಿಗೆ ಒಂದು ನ್ಯಾಯ, ಲಿಂಬಾವಳಿಗೆ ಒಂದು ನ್ಯಾಯವೇ ಎಂದು ಅವರ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ, ಸಚಿವ ಸ್ಥಾನ ತಪ್ಪಲು ಇದೇ ಕಾರಣ ಎಂದಾದರೆ, ಬಿಜೆಪಿ ಅಧ್ಯಕ್ಷ ಸ್ಥಾನವೂ ಕೈ ತಪ್ಪಲಿದೆ.