ಬೆಂಗಳೂರು ಡ್ರಗ್ ಪಾರ್ಟಿ ಕೇಸ್: ಠಾಣಾ ಜಾಮೀನು ಎಂದರೇನು?
ಬೆಂಗಳೂರು, ಜೂ. 14: ಖಾಸಗಿ ಹೋಟೆಲ್ನ ರೇವ್ ಪಾರ್ಟಿಯಲ್ಲಿ ಡ್ರಗ್ ಸೇವನೆ ಮಾಡಿದ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಗಳನ್ನು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿ ರಕ್ಷಣೆ ಮಾಡಿರುವ ಗಂಭೀರ ಆರೋಪ ಹಲಸೂರು ಠಾಣೆ ಪೊಲೀಸರ ಮೇಲೆ ಕೇಳಿ ಬಂದಿದೆ. ಸ್ಟಾರ್ ಹೋಟೆಲ್ನಲ್ಲಿ ನಡೆದಿದ್ದ ಪಾರ್ಟಿಯ ವೇಳೆಯಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದ ನಟ ಸಿದ್ದಾಂತ್ ಕಪೂರ್ ಠಾಣಾ ಜಾಮೀನಿನ ಮೇರೆಗೆ ಹಲಸೂರು ಪೊಲೀಸರು ಜೂನ್ 13ರ ರಾತ್ರಿಯೇ ಬಿಟ್ಟು ಕಳುಹಿಸಿದ್ದರು. ವಿಚಾರಣೆ ಹಾಜರಾಗುವಂತೆ ಇಂದು (ಜೂನ್ 14) ನೀಡಿದ್ದ ನೋಟಿಸ್ಗೆ ಕಪೂರ್ ಹಾಜರಾಗಿದ್ದಾನೆ.
ಎಂ.ಜಿ. ರಸ್ತೆಯ ದಿ ಪಾರ್ಕ್ ಹೋಟೆಲ್ ಮೇಲೆ ದಾಳಿ ಮಾಡಿದ್ದ ಹಲಸೂರು ಪೊಲೀಸರು, ಆರು ಆರೋಪಿಗಳನ್ನು ಬಂಧಿಸಿದ್ದರು. ಬಾಲಿವುಡ್ ನಟ, ಡಿಜೆ ಸಿದ್ದಾಂತ್ ಕಪೂರ್, ಅಕಿಲ್ ಸೋನಿ, ಹರ್ಪಿತ್ ಸಿಂಗ್, ಅಕಿಲ್, ಹನಿ, ಹಾಗೂ ಅಪರಿಚತಿನ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಪೊಲೀಸರು ದಾಖಲಿಸಿರುವ ಪ್ರಥಮ ವರ್ತಮಾನ ವರದಿ ಪ್ರಕಾರ, 30 ರಿಂದ 40 ಯುವಕ ಯುವತಿಯರಿದ್ದ ಪಾರ್ಟಿಯಲ್ಲಿ ಡಸ್ಟ್ ಬಿನ್ ಸಮೀಪ ಎರಡು ಪಾಕೆಟ್ ಸಿಕ್ಕಿದ್ದು, ಒಂದರಲ್ಲಿ ಏಳು ಟ್ಯಾಬ್ಲೆಟ್ (ಸಿಂಥೆಟಿಗ್ ಡ್ರಗ್ಸ್) ಹಾಗೂ ಇನ್ನೊಂದು ಪಾಕೆಟ್ನಲ್ಲಿ ಐದು ಗ್ರಾಂ ಗಾಂಜಾ ಸಿಕ್ಕಿದೆ. ಪಾರ್ಟಿಯಲ್ಲಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಐವರು ಮಾದಕ ವಸ್ತು ಸೇವನೆ ಮಾಡಿರೋದು ಸಾಬೀತಾಗಿದ್ದು, ಅರು ಮಂದಿಯ ವಿರುದ್ಧ ಎನ್ಡಿಪಿಎಸ್ ಆಕ್ಟ್ ಸೆಕ್ಷನ್ 20 (a) , 22 (b), ಹಾಗೂ ಸೆಕ್ಷನ್ 27 (b) ಅಡಿ ಕೇಸು ದಾಖಲಿಸಲಾಗಿದೆ.
ನಾನ್ ಬೇಲೆಬಲ್ ವರ್ಗಕ್ಕೆ ಸೇರುತ್ತದೆ
ಅಂದ್ರೆ, ಕೊಕೇನ್ ಮಾತ್ರೆ ಸಿಕ್ಕಿರುವುದಕ್ಕೆ ಎಫ್ಐಆರ್ನಲ್ಲಿ ಸೆಕ್ಷನ್ 22 (b) ಅಡಿ ಕೇಸು ದಾಖಲಿಸಲಾಗಿದ್ದು, ಸೆಕ್ಷನ್ ಅಡಿ ಆರೋಪ ಹೊರಿಸಿ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಈ ಸೆಕ್ಷನ್ ನಾನ್ ಬೇಲೆಬಲ್ ವರ್ಗಕ್ಕೆ ಸೇರುತ್ತದೆ. ಈ ಸೆಕ್ಷನ್ ಅಡಿ ಕೇಸು ದಾಖಲಿಸಿಯೂ ಐವರು ಆರೋಪಿಗಳನ್ನು ಬಿಟ್ಟು ಕಳಿಸಿರುವ ಹಲಸೂರು ಪೊಲೀಸರ ಕಾರ್ಯ ವೈಖರಿ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಠಾಣಾ ಜಾಮೀನಿನ ಮೇಲೆ ಆರೋಪಿ
ಮಾದಕ ವಸ್ತು ಸೇವನೆ ಸಂಬಂಧ ಸೆಕ್ಷನ್ 27 (b) ಅಡಿ ಕೇಸು ದಾಖಲಾದರೆ ಮಾತ್ರ ಠಾಣಾ ಜಾಮೀನಿನ ಮೇಲೆ ಆರೋಪಿಗಳನ್ನು ಬಿಟ್ಟು ಕಳಿಸಲು ಅವಕಾಶವಿದೆ. ಆದ್ರೆ ಇಲ್ಲಿ ರೇವ್ ಪಾರ್ಟಿಯಲ್ಲಿ ಐದು ಗ್ರಾಂ ಗಾಂಜಾ ಸಿಕ್ಕಿದೆ. ಜತೆಗೆ ಏಳು ಡ್ರಗ್ ಮಾತ್ರೆಗಳು (ಕೊಕೇನ್) ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸೆಕ್ಷನ್ 22(b) ಹಾಗೂ 20(a) ಅಡಿ ಆರೋಪ ಹೊರಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು.
ಠಾಣಾ ಜಾಮೀನಿನ ಮೇಲೆ ಬಿಡುಗಡೆ
ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಬೇಕಿತ್ತು. ಆದರೆ, ಪೊಲೀಸರು ಐವರು ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಅಪರಿಚಿತ ಆರೋಪಿ ಮೇಲೆ ನಾನ್ ಬೇಲೆಬಲ್ ಸೆಕ್ಷನ್ ವಿಧಿಸಿ ಹಲಸೂರು ಪೊಲೀಸರು ಎಡವಟ್ಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೊಲೀಸರ ನಡೆ ಬಗ್ಗೆ ಅನುಮಾನ ಮೂಡಿಸಿದೆ. ಪ್ರಭಾವಿಗಳ ಮಾತಿಗೆ ಮಣಿದು ಐವರನ್ನು ಪೊಲೀಸರು ಬಿಟ್ಟು ಕಳಿಸಿದರೇ ಎಂಬ ಪ್ರಶ್ನೆ ಇದೀಗ ಪೊಲೀಸ್ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಡಿಸಿಪಿ ಹೇಳಿದ್ದೇನು?:
ಈ ಕುರಿತು ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ್ ಅವರನ್ನು ಕೇಳಿದಾಗ, ಐವರು ಆರೋಪಿಗಳ ವಿರುದ್ಧ 27 (b) ಅಡಿ ಕೇಸು ದಾಖಲಿಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ. ಅಪರಿಚಿತ ಅರನೇ ಆರೋಪಿಯ ವಿರುದ್ಧ ಮಾದಕ ವಸ್ತು ಪತ್ತೆ ಮತ್ತು ಮಾರಾಟದ ಅರೋಪ ಹೊರಿಸಿ ಕೇಸು ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ವಾಸ್ತವದಲ್ಲಿ ಜಾಮೀನು ರಹಿತ ಅರೋಪ ಹೊರಿಸಿ ಕೇಸು ದಾಖಲಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.