ಬಿಇಎಂಎಲ್ ಸಿಬ್ಬಂದಿಗಳ ಪ್ರತಿಭಟನೆ ಏಕೆ? ಬಿಇಎಂಎಲ್ ಮಹತ್ವವೇನು?
ಬೆಂಗಳೂರು, ಅಕ್ಟೋಬರ್ 22: ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಂಸ್ಥೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(BEML) ಸಂಸ್ಥೆಯಲ್ಲಿ ಏನೆಲ್ಲ ಉತ್ಪಾದನೆಯಾಗುತ್ತದೆ, ಯಾವೆಲ್ಲ ಕ್ಷೇತ್ರಗಳಿಗೆ ಈ ಸಂಸ್ಥೆ ಆಸರೆಯಾಗಿದೆ ಎಂಬುದರ ಚಿತ್ರಣ ಇಲ್ಲಿದೆ.
ಖಾಸಗೀಕರಣಕ್ಕೆ ಸರ್ಕಾರದ ತೀರ್ಮಾನ: ಬೃಹತ್ ರಕ್ಷಣಾವಲಯದ ಉದ್ಯಮವನ್ನು ಕೇಂದ್ರ ಸರ್ಕಾರವು ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿತ್ತು ಈಗ ಶೇಕಡ 54.03 ಷೇರುಗಳನ್ನು ಮಾರಾಟ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದೆ, ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹಲವಾರು ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಖಾಸಗೀಕರಣ ವಿರೋಧಿಸಿ ಮೈಸೂರಿನಲ್ಲಿ ಬಿಇಎಂಎಲ್ ಕಾರ್ಮಿಕರ ತಮಟೆ ಚಳವಳಿ
ಬೆಂಗಳೂರು ಸಂಕೀರ್ಣದ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸರೆಡ್ಡಿಯವರು ಮಾತನಾಡಿ, "ಲಾಭದಾಯಕವಾಗಿರುವ ಹಾಗೂ ಸರ್ಕಾರದ ಯಾವುದೇ ಸಹಾಯ ಪಡೆಯದೆ ಸ್ವತಂತ್ರವಾಗಿ ನಾವುಗಳೆ ದುಡಿದು ಲಾಭ ಮಾಡುತ್ತಿರುವ ಬಿಇಎಂಎಲ್ ಸಂಸ್ಥೆಯನ್ನು ಮಾರಾಟ ಮಾಡುವುದು ಬೆಲೆಬಾಳುವ ವಜ್ರವನ್ನು ಕೇವಲ ಒಂದು ಹೊತ್ತಿನ ಊಟಕ್ಕೆ ಮಾರಿದ ಹಾಗೆ" ಎಂದಿದ್ದಾರೆ.
ಕರ್ನಾಟಕದಲ್ಲಿರುವ ಪ್ರಮುಖ ಕೇಂದ್ರೋದ್ಯಮ
ಕರ್ನಾಟಕದಲ್ಲಿರುವ ಪ್ರಮುಖ ಕೇಂದ್ರೋದ್ಯಮವಾಗಿದ್ದು, ಇಂದು ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿದ್ದು ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್ ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು ಸುಮಾರು 4 ಪ್ರಾದೇಶಿಕ ಕಛೇರಿ ಮತ್ತು ಸುಮಾರು 20 ಸೇವಾ ಕಛೇರಿಗಳನ್ನು ಹೊಂದಿರುವಂತಹ ಬೃಹತ್ ಸಂಸ್ಥೆಯಾಗಿರುತ್ತದೆ. ಇಲ್ಲಿ ರೈಲು ಮತ್ತು ಮೆಟ್ರೋ ರೈಲುಗಳನ್ನು ತಯಾರು ಮಾಡುತ್ತಿದ್ದು. ದೇಶದಲ್ಲಿರುವ ಏಕೈಕ ಮೆಟ್ರೋ ರೈಲು ಉತ್ಪಾದನೆ ಮಾಡುವ ಕಾರ್ಖಾನೆಯಾಗಿರುತ್ತದೆ.
ರಕ್ಷಣಾ ಇಲಾಖೆ ಸಲಕರಣೆ ಉತ್ಪಾದನೆ
ಅದೇ ರೀತಿ ರಕ್ಷಣಾ ಇಲಾಖೆಗೆ ಬೇಕಾಗಿರುವ ಸಲಕರಣೆಗಳಾದ ಟೆಟ್ರಾ ಟ್ರಕ್ಕುಗಳು, ಸರ್ವೋತ್ತರ ಬ್ರಿಡ್ಜ್, ಮಿಸ್ಕೆಲ್ ಲಾಂಚರಗಳು, ಬುಲ್ಡೋಜರ್ ಗಳು ಮತ್ತು ಯುದ್ಧಕ್ಕೆ ಬೇಕಾದ ಗ್ರೌಂಡ್ ಸಪೋರ್ಟ್ ವಾಹನಗಳನ್ನು ಮಾಡಿ ರಕ್ಷಣಾ ಇಲಾಖೆಗೆ ಸರಬರಾಜು ಮಾಡುತ್ತಿರುವ ಏಕೈಕ ದೇಶೀಯ ಸಂಸ್ಥೆಯಾಗಿರುತ್ತದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಬೇಕಾಗಿರುವ ಅತ್ಯಾಧುನಿಕ ವಿವಿಧ ಮಾದರಿಯ ಡಂಪ್ಟ್ರಕ್ಗಳು, ಎಸ್ಕವೇಟರಗಳು, ಲೋಡರಗಳು, ರೋಪ್ ಶಾವಲ್ಸ್ಗಳು ಹಾಗೂ ಮೋಟಾರ್ ಗ್ರೇಡರ್ ಗಳನ್ನು ತಯಾರು ಮಾಡಲಾಗುತ್ತಿದೆ.
ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿದೆ
ಇವಲ್ಲದೆ, ಡ್ರೆಡ್ಚಿಂಗ್ ಯಂತ್ರೋಪಕರಣಗಳನ್ನು ಹಾಗೂ ಈ ವಾಹನಗಳಲ್ಲಿ ಬಳಸುವ ಇಂಜಿನ್ಗಳಲ್ಲಿ ಬಳಸುವ ಇಂಜಿನಗಳ ಉತ್ಪಾದನೆಯನ್ನೂ ಮತ್ತು ಬಾಹ್ಯಾಕಾಶ ಯಂತ್ರಗಳಿಗೆ ಸಂಬಂಧಪಟ್ಟ ಉಪಕರಣಗಳನ್ನು ಕೂಡ ಉತ್ತಾದಿಸುತ್ತಿರುವ ಬೃಹತ್ ಉದ್ದಿಮೆಯಾಗಿದೆ.
ಇದರೊಂದಿಗೆ ಕೆ.ಜಿ.ಎಫ್ ಸಂಕೀರ್ಣದಲ್ಲಿ ಟ್ರಾನ್ಸ ಮಿಷನ್ಸ್ ಹಾಗೂ ಹೈಡ್ರಾಲಿಕ್ ಪಂಪಗಳನ್ನು ತಯಾರು ಮಾಡುವ ಘಟಕಗಳನ್ನು ಹೊಂದಿದ್ದು. ಏಷ್ಯಾದಲ್ಲಿಯೇ ಅತೀ ದೊಡ್ಡದಾದ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಹೊಂದಿರುವ ಬಿಇಎಂಎಲ್ ಸಂಸ್ಥೆ ವಾರ್ಷಿಕವಾಗಿ ಸುಮಾರು 3500 ಕೋಟಿಗಿಂತಲೂ ಮಿಗಿಲಾದ ವಹಿವಾಟನ್ನು ಮಾಡುತ್ತಿದ್ದು. ಸತತವಾಗಿ 1964 ರಿಂದ 2019ರವರೆಗೆ ಲಾಭ ಗಳಿಸುತ್ತಿರುವ ಸಾರ್ವಜನಿಕ ಕ್ಷೇತ್ರದಲ್ಲಿರುವ ಹೆಮ್ಮೆಯ ಸಂಸ್ಥೆಯಾಗಿರುತ್ತದೆ. ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್ ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.
ದ್ವಾರಸಭೆ, ಸರಣಿ ಧರಣಿಗೆ ನಿರ್ಧಾರ
ಇದರ ಭಾಗವಾಗಿ ಎಲ್ಲಾ ಸಂಕೀರ್ಣಗಳ ಮುಂಭಾಗದಲ್ಲಿ ದ್ವಾರಸಭೆಗಳನ್ನು ನಡೆಸಿ ಸರ್ಕಾರದ ನೀತಿಯನ್ನು ವಿರೋಧಿಸಲು ಬಿಇಎಂಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ತೀರ್ಮಾನಿಸಿ. ಜಂಟಿಯಾಗಿ ದ್ವಾರಸಭೆಗಳನ್ನು ನಡೆಸಿದ್ದಾರೆ. ಇದರ ಅಂಗವಾಗಿ ದಿನಾಂಕ 21-10-2019 ರಿಂದ 25-10-2019 ರವರೆಗೂ ಸರಣಿ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಬುಧವಾರ ಬೆಳಿಗ್ಗೆ 6-30ಕ್ಕೆ ಬಿಇಎಂಎಲ್. ಬೆಂಗಳೂರು ಸಂಕೀರ್ಣದ ಕಾರ್ಖಾನೆಯ ಮುಂಭಾಗದಲ್ಲಿ ಬೃಹತ್ ಕಾರ್ಮಿಕರ ಧರಣಿಯಲ್ಲಿ, ಅಧಿಕಾರಿಗಳ ಮತ್ತು ಗುತ್ತಿಗೆ ಕಾರ್ಮಿಕರ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಬೆಂಗಳೂರು ಸಂಕೀರ್ಣದ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸರೆಡ್ಡಿಯವರು, ಬೆಂಗಳೂರು ಕೇಂದ್ರ ಕಛೇರಿಯ ಅಧ್ಯಕ್ಷರಾದ ಜೆ. ಮುನ್ನಾಗಪ್ಪ, ಅಲ್ಲದೇ ಬೆಂಗಳೂರು ಸಂಕೀರ್ಣದ ಪದಾಧಿಕಾರಿಗಳು ಭಾಗವಹಿಸಿದ್ದರು.