ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ, ಬನ್ನಿ ಶೇಂಗಾ ತಿನ್ನಿ!
Recommended Video
ಬೆಂಗಳೂರು, ನವೆಂಬರ್ 12 : ಐತಿಹಾಸಿಕ ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಿದ್ಧವಾಗಿದೆ. ಸೋಮವಾರ ಕಡಲೆಕಾಯಿ ಪರಿಷೆಗೆ ಸಾಂಕೇತಿಕವಾಗಿ ಚಾಲನೆ ಸಿಗಲಿದೆ. ವರ್ಷಕ್ಕೊಮ್ಮೆ ಬೆಂಗಳೂರಿಗರನ್ನು ಒಂದೆಡೆ ಸೇರಿಸುವ ಹಬ್ಬವಿದಾಗಿದೆ.
ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ
ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುತ್ತದೆ. ಪಾರಂಪರಿಕ ಸೊಗಡಿನೊಂದಿಗೆ ಪರಿಷೆ ನಡೆಯುತ್ತದೆ. ಲಕ್ಷಾಂಕತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ.
ಬಸವನಗುಡಿಯಲ್ಲಿರುವ ದೇವಾಲಯದಲ್ಲಿ ಬೃಹತ್ ನಂದಿ ವಿಗ್ರಹಕ್ಕೆ ಕಡಲೆಕಾಯಿ ಅಭಿಷೇಕ ಮಾಡುಲಾಗುತ್ತದೆ. ನಂತರ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಸಾಂಕೇತಿಕವಾಗಿ ಎರಡು ದಿನಗಳ ಕಾಲ ಮಾತ್ರ ಪರಿಷೆ ಆಚರಣೆ ನಡೆಯುತ್ತದೆ. ಆದರೆ, ಒಂದು ವಾರಗಳ ಕಾಲ ಜನಜಂಗುಳಿ ಇರುತ್ತದೆ.
ಬುಲ್ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮದಿಂದ ಕಾಮತ್ ಬ್ಯೂಗಲ್ ರಾಕ್ ಹೋಟೆಲ್ ತನಕ ರಾಶಿ-ರಾಶಿ ಕಡಲೆಕಾಯಿಯ ವ್ಯಾಪಾರ ನಡೆಯುತ್ತದೆ. ನಗರದ ವಿವಿಧ ಭಾಗಗಳಿಂದ ಸಾವಿರಾರು ಜನರು ಪರಿಷೆಗೆ ಆಗಮಿಸುತ್ತಾರೆ.
ಬಸವ ಕಡಲೆಕಾಯಿ ತಿಂದ
ಬಸವನಗುಡಿಗೆ ಹಿಂದೆ ಸುಂಕೇನಹಳ್ಳಿ ಎಂಬ ಹೆಸರಿತ್ತು. ಇದರ ಸುತ್ತಮುತ್ತಲಿನ ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಹೊಸೆಕೆರೆಹಳ್ಳಿ ಭಾಗದಲ್ಲಿ ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು ಬಸವ ಬಂದು ಕಡಲೆಕಾಯಿಗಳನ್ನು ತಿಂದು ಹೋಗುತ್ತಿತ್ತು. ಒಂದು ದಿನ ಕಾವಲು ಇದ್ದ ರೈತರು ಬಸವನನ್ನು ಹಿಡಿಯಲು ಪ್ರಯತ್ನಿಸಿದರು.
ಕಲ್ಲಾದ ಬಸವನಿಗೆ ಅಭಿಷೇಕ
ಜನರಿಂದ ತಪ್ಪಿಸಿಕೊಂಡು ಓಡಿದ ಬಸವ ಗುಡ್ಡದ ಮೇಲೆ ಬಂದು ಕಲ್ಲಾಗಿ ನಿಂತಿತು. ನಂತರ ಅದು ಬೃಹದಾಕಾರವಾಗಿ ಬೆಳೆಯಿತು. ರೈತರು ಬಸವಣ್ಣ ಕಲ್ಲಾಗಿ ಹೋಗಿದ್ದನ್ನು ಕಂಡು ಆಶ್ಚರ್ಯಪಟ್ಟರು. ನಾವು ಬೆಳೆಯುವ ಬೆಳೆಗೆ ಬಸವಣ್ಣನೇ ಕಾವಲುಗಾರ ಎಂದು ಆತನಿಗೆ ಸುಂಕ ರೂಪದಲ್ಲಿ ಕಡಲೆಕಾಯಿ ನೀಡಲು ಆರಂಭಿಸಿದರು. ನಂತರ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು ದೊಡ್ಡ ಬಸವನಿಗೆ ದೇವಾಲಯ ನಿರ್ಮಿಸಿದರು. ನಂತರ ಕಾರ್ತೀಕ ಮಾಸದ ಕೊನೆಯ ಸೋಮವಾರ ಬಸವನಿಗೆ ಕಡೆಲೆಕಾಯಿ ಅಭಿಷೇಕ ಮಾಡಿ, ಜಾತ್ರೆ ನಡೆಸಲು ಆರಂಭಿಸಲಾಯಿತು.
ಕಡಲೆಕಾಯಿ ಪರಿಷೆ, ಜಾತ್ರೆ
ಕಡೆಲೆಕಾಯಿ ಪರಿಷೆ ಬೆಂಗಳೂರಿನ ಜನರನ್ನು ಒಂದು ಕಡೆ ಸೇರಿಸುವ ಜಾತ್ರೆ. ಕಡ್ಲೆಪುರಿ, ಬೆಂಡು-ಬತ್ತಾಸು, ಬಳೆ, ಓಲೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಪರಿಷೆಯಲ್ಲಿ ಹೆಚ್ಚಾಗಿ ನಡೆಯುತ್ತದೆ. ರಾಶಿ-ರಾಶಿ ಕಡಲೆಕಾಯಿಗಳು ಸಿಗುತ್ತವೆ. ಬೆಂಗಳೂರಿನ ಜನರನ್ನು ಒಂದು ಕಡೆ ಸೇರಿಸುವ ಜಾತ್ರೆ ಇದಾಗಿದೆ.
ಚಳಿಯ ಜೊತೆ ಶೇಂಗಾ ಸವಿಯಿರಿ
ಚಮು-ಚುಮು ಚಳಿಯಲ್ಲಿ ಶೇಂಗಾ ಸವಿಯುತ್ತಾ ಬಸವನಗುಡಿಯಲ್ಲಿ ಅಲೆದಾಡಬಹುದು. ಹಸಿ ಶೇಂಗಾ, ಹುರಿದ ಶೇಂಗಾ, ಬೇಯಿಸಿದ ಶೇಂಗಾ ಹೀಗೆ ವಿವಿಧ ಮಾದರಿಯ ಶೇಂಗಾ ಸವಿಯನ್ನು ಜನರು ಸವಿಯಬಹುದು. ರೈತರು ಮತ್ತು ಗ್ರಾಹಕರನ್ನು ಒಂದು ಕಡೆ ಸೇರಿಸುವ ವೇದಿಕೆ ಇದಾಗಿದೆ.
ಹೊರರಾಜ್ಯದಿಂದಲೂ ಬರುತ್ತಾರೆ
ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ ಮಾತ್ರವಲ್ಲ ಹೊಸ ರಾಜ್ಯಗಳ ರೈತರು ಪಾಲ್ಗೊಳ್ಳುತ್ತಾರೆ. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರೈತರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ.