ಹಾಲಷ್ಟೇ ಅಲ್ಲ, 'ವೆರೈಟಿ' ಪರಿಚಯಿಸಿದ ಕೆಎಂಎಫ್
ಬೆಂಗಳೂರು, ಜನವರಿ 16: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ(ಕೆಎಂಎಫ್)ಯು ನಂದಿನಿ ಹೆಸರಿನಲ್ಲಿ 4 ಹೊಸ ಉತ್ಪನ್ನಗಳನ್ನು ಇಂದು ಬಿಡುಗಡೆ ಮಾಡಿದೆ.
ನಂದಿನಿ ಚೀಸ್, ದೇಸಿ ಹಾಲು, ವಿವಿಧ ಮಾದರಿಯ ಯೋಗರ್ಟ್, ವಿವಿಧ ಶ್ರೇಣಿಯ ನ್ಯಾಚುರಲ್ ಐಸ್ಕ್ರೀಂಗಳು ಹಾಗೂ ಇತರೆ ನಂದಿನಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ.
ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ: ರೈತರಿಗೆ ಬಮೂಲ್ ಸಿಹಿ ಸುದ್ದಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಹಿಸಿದ್ದಾರೆ.
ನಂದಿನಿ ಉತ್ಪನ್ನಗಳು: ನಂದಿನಿ ತಾಜಾ ಹಾಲು, ಯುಎಚ್ಟಿ ಹಾಲು, ಫ್ಲೆಕ್ಸಿ ಪ್ಯಾಕ್ ಹಾಲು, ನಂದಿನಿ ಮೊಸರು, ನಂದಿನಿ ತುಪ್ಪ, ಬೆಣ್ಣೆ, ನಂದಿನಿ ಹಾಲಿನ ಪುಡಿ, ಐಸ್ಕ್ರೀಂ, ಚಾಕೊಲೆಟ್ಸ್, ಕೋಡುಬಳೆ, ನಂದಿನಿ ಪನೀರ್, ನಂದಿನಿ ಪೇಡಾ ಸೇರಿದಂತೆ ಹಲವು ಉತ್ಪನ್ನಗಳಿವೆ.
'ನಂದಿನಿ' ಬ್ರ್ಯಾಂಡ್ ಹೆಸರಿನಲ್ಲಿ ಹಾಲು, ಹಾಲುತ್ಪನ್ನ, ಸಿಹಿ ಪದಾರ್ಥಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ಬಿಟ್ಟಿರುವ ಕರ್ನಾಟಕ ಹಾಲು ಮಹಾಮಂಡಲವು ಸದ್ಯದಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ/ಸಹಕಾರಿ ಕುಡಿಯುವ ನೀರನ್ನು ಅಂದರೆ ಮಿನರಲ್ ವಾಟರ್ ಕೂಡಾ ಹೊರ ತಂದಿದೆ.
ನಮ್ಮ ನಿಮ್ಮೆಲ್ಲರ ನಿತ್ಯ ಸಂಜೀವಿನಿ ನಂದಿನಿ
ಹಾಲಿನ ದರ ಏರಿಕೆ ಸುದ್ದಿ ಇದ್ದರೂ ಈ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಾಲಿನ ದರದ ಜೊತೆಯಲ್ಲಿ ಸರ್ಕಾರ ತನ್ನ ಬಜೆಟ್ ನಿಂದ ಲೀಟರ್ ಗೆ 4 ರು ಪ್ರೋತ್ಸಾಹ ಹಣವನ್ನೂ ನೀಡುತ್ತಾ ಬಂದಿದೆ, ಇದನ್ನು ಮುಂದುವರೆಸಿ ಈ ಮೂಲಕ ಡೇರಿಗಳ ಮೇಲಿನ ಹೊರೆಯನ್ನು ತಗ್ಗಿಸಿ, ಬರುವ ಲಾಭವನ್ನೂ ನೇರವಾಗಿ ರೈತರಿಗೆ ವರ್ಗಾಯಿಸಬೇಕು ಎಂಬ ಆಗ್ರಹ ಕೂಡಾ ಕೇಳಿ ಬಂದಿದೆ.
ಗುಜರಾತಿನ ಅಮೂಲ್ ನಂತರ ನಂದಿನಿ ಎರಡನೇ ಸ್ಥಾನದಲ್ಲಿದೆ
ಗುಜರಾತಿನ ಅಮೂಲ್ ನಂತರ ನಂದಿನಿ ಎರಡನೇ ಸ್ಥಾನದಲ್ಲಿದೆ, ಕೆಎಂಎಫ್ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ, ರೈತರ ಆರ್ಥಿಕ ಮಟ್ಟ ಹೆಚ್ಚಿದೆ.ದಿನಕ್ಕೆ 80.43 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ.ಇದರಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮಟ್ಟ ಹೆಚ್ಚಿದೆ.ಕ್ಷೀರ ಯೋಜನೆ ಮೂಲಕ 2 ರೂ. ಪ್ರೋತ್ಸಾಹ ಧನವನ್ನು ಕೊಡಲಾಗಿತ್ತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರೋತ್ಸಾಹ ಧನ 6ಗೆ ಏರಿಸಲು ಮನವಿ
ಹಾಲಿಗೆ ಪ್ರೋತ್ಸಾಹ ಧನ 6 ರೂ ಗೆ ಯಡಿಯೂರಪ್ಪ ನವರು ಏರಿಸಲಿ, ಸಧ್ಯ ಹಾಲಿಗೆ 5 ರೂ ಪ್ರೋತ್ಸಾಹ ಧನ ಇದೆ, 2008 ರಲ್ಲಿ ಯಡಿಯೂರಪ್ಪ ನವರು ಹಾಲಿಗೆ 2 ರೂ ಪ್ರೋತ್ಸಾಹ ಧನ ಕೊಟ್ಟಿದ್ದರು, ಇವತ್ತಿಗೂ ರೈತರು ಯಡಿಯೂರಪ್ಪ ರನ್ನು ಸ್ಮರಿಸುತ್ತಾರೆ. ಕೆಎಂಎಫ್ ರೈತರಿಂದ ಆರಂಭವಾಗಿದೆ.
4 ಬಗೆಯ ನಂದಿನಿ ಉತ್ಪನ್ನಗಳ ಬಿಡುಗಡೆ
ನಂದಿನಿ ಚೀಸ್, ದೇಸಿ ಹಾಲು, ವಿವಿಧ ಮಾದರಿಯ ಯೋಗರ್ಟ್, ವಿವಿಧ ಶ್ರೇಣಿಯ ನ್ಯಾಚುರಲ್ ಐಸ್ಕ್ರೀಂಗಳು ಹಾಗೂ ಇತರೆ ನಂದಿನಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ. ಕೆಎಂಎಫ್ ತುಪ್ಪವನ್ನು ದುಬೈ ಸೇರಿದಂತೆ ಇತರೆಡೆಗಳಲ್ಲಿ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಪ್ರಭುಚವ್ಹಾಣ್ , ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮುಂತಾದವರು ಇದ್ದರು.
ಫೆಬ್ರವರಿ ತಿಂಗಳಲ್ಲಿ ಫುಡ್ ಫೆಸ್ಟಿವಲ್
ಫೆಬ್ರವರಿ ತಿಂಗಳಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ. ಫುಡ್ ಫೆಸ್ಟಿವಲ್ ನಲ್ಲಿ ಕೆಎಂಎಫ್ ಉತ್ಪನ್ನಗಳೂ ಇರಲಿವೆ, ರೈತರನ್ನ ಕಾಪಾಡೋ ಕೆಲ್ಸ ಕೆಎಂಎಫ್ ಮಾಡಬೇಕಿದೆ, ಇದಕ್ಕಾಗಿ ರಾಜ್ಯ ಸರ್ಕಾರ ಸಹಕಾರ ನೀಡಬೇಕು, ಬಜೆಟ್ ನಲ್ಲಿ ಕೆಎಂಎಫ್ ಗೆ ಹೆಚ್ಚು ಒತ್ತು ನೀಡಬೇಕೆಂದು ಮನವಿ ಮಾಡಿದರು.ತೆಂಗಿನ ಸಸಿಗೆ ನೀರು ಹಾಕುವ ಮೂಲಕ ನಂದಿನಿ ಉತ್ಪನ್ನಗಳ ಅನಾವರಣ ಮಾಡಿದರು.ಕೆಎಂಎಫ್ ಆವರಣದಲ್ಲಿ ತೆಂಗಿನ ಸಸಿ ನೆಡಲು ಕೆಎಂಎಫ್ ತೀರ್ಮಾನ ಮಾಡಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇಂದಿನಿಂದ ದೇಸಿ ತಳಿಯ ಹಾಲು ಲಭ್ಯ
ಇಂದಿನಿಂದ ಜನಸಾಮಾನ್ಯರಿಗೆ ದೇಸಿ ತಳಿಯ ಹಾಲು ದೊರೆಯಲಿದ್ದು, ಲೀಟರ್ಗೆ 75 ರೂ. ನಿಗದಿಪಡಿಸಲಾಗಿದೆ.
ಇದು ದೇಸಿ ಹಸುಗಳಿಂದ ಸಂಗ್ರಹಿಸಲಾಗಿರುವ ಹಾಲು. ಗುಜರಾತ್ನ ನಂತರ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದರು. ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಹಾಲು ಉತ್ಪಾದನೆ ಸಹಕಾರಿಯಾಗಿದೆ. ದೇಶದಲ್ಲೇ ಹೆಚ್ಚು ನಂದಿನಿ ಹಾಲು ಜನಪ್ರಿಯವಾಗಿದ್ದು, ಮತ್ತಷ್ಟು ಜನಪ್ರಿಯಗೊಳಿಸಬೇಕಾಗಿದೆ ಎಂದರು.