ಕೆಜೆಪಿಗೆ ನಾನೇ ಅಧ್ಯಕ್ಷ, ಪ್ರಸನ್ನ ಕುಮಾರ್ ಹೊಸ ವರಸೆ
ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಸನ್ನ ಕುಮಾರ್, ಬಿಜೆಪಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕ ಜನತಾ ಪಕ್ಷ ನಮ್ಮ ಸುರ್ಪದಿಯಲ್ಲೇ ಇದ್ದು, ಈ ಕುರಿತು ಚುನಾವಣಾ ಆಯೋಗಕ್ಕೂ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. [ಕೆಜೆಪಿ ಮುಗಿದ ಅಧ್ಯಾಯ : ಬಿಎಸ್ವೈ]
ಶುಕ್ರವಾರ ಕೆಜೆಪಿ ಪಕ್ಷದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಕೆಜೆಪಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದರು. [ಪ್ರಸನ್ನ ಕುಮಾರ್ ಅಪಹರಣದ ಕಥೆ]
ಕೆಜೆಪಿಯ ನಾಲ್ವರು ಶಾಸಕರು ಬಿಜೆಪಿ ಸೇರಿದ್ದಾರೆ. ಕೆಜೆಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದು, ಕೆಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನೇ ಕೆಜೆಪಿ ಅಧ್ಯಕ್ಷನಾಗಿದ್ದು, ಚುನಾವಣೆ ಎದುರಿಸಲಿದ್ದೇವೆ ಎಂದು ಪ್ರಸನ್ನ ಕುಮಾರ್ ಹೇಳಿದರು.
ಕೆಜೆಪಿ-ಬಿಜೆಪಿಗೆ ವಿಲೀನ ಸಾಧ್ಯವಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ಕೆಜೆಪಿ ಕುರಿತ ವಿವಾದದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನಾನೇ ಕೆಜೆಪಿ ಅಧಿಕೃತ ಅಧ್ಯಕ್ಷ ಎಂಬ ತೀರ್ಪು ಬರಲಿದೆ ಎಂದು ಪ್ರಸನ್ನ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.