ಸುಳ್ಳಿನ ಸರದಾರ ಕೇಂದ್ರ ಸರ್ಕಾರವನ್ನು ದೂರವಿಡಿ : ಕೃಷ್ಣ ಬೈರೇಗೌಡ
ಬೆಂಗಳೂರು, ಏಪ್ರಿಲ್ 15 : 'ಐದು ವರ್ಷ ಬಡವರ ಪರ ಯಾವುದೇ ಕೆಲಸ ಮಾಡದೆ ಬರೀ ಸುಳ್ಳು ಹೇಳಿಕೊಂಡು ಕಾಲ ಕಳೆದು ಈಗ ಮತ್ತೆ ಓಟು ಕೇಳಲು ಬಂದಿರುವ ಬಿಜೆಪಿ ನಾಯಕರನ್ನು ದೂರವಿಡಿ' ಎಂದು ಕೃಷ್ಣ ಬೈರೇಗೌಡ ಕರೆ ನೀಡಿದರು.
ಸೋಮವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಯಶವಂತಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಕೇಂದ್ರ ಬಿಜೆಪಿ ಸರಕಾರದ ಹುಸಿ ಭರವಸೆಗಳನ್ನು ಮತ್ತು ವೈಫಲ್ಯಗಳನ್ನು ಟೀಕಿಸಿದರು.
ಟ್ವಿಟರ್ನಲ್ಲಿ ಚುನಾವಣಾ ಕಾವು ಹೆಚ್ಚಿಸಿದ ಇಬ್ಬರು ಗೌಡರು!
'ಕೇಂದ್ರ ಸರಕಾರ ದೊಡ್ಡ ಉದ್ಯಮಿಗಳ ಪರ ಕೆಲಸ ಮಾಡಿಕೊಂಡು ಬಂದಿತೇ ವಿನಃ ಬಡವರ ಪರವಾಗಿ ಯಾವ ಯೋಜನೆ ಜಾರಿ ಮಾಡಲಿಲ್ಲ. ಬದಲಿಗೆ ನಿರಂತರವಾಗಿ ಸುಳ್ಳು ಹೇಳಿಕೊಂಡೇ ಬಂದರು. ಬೆಲೆ ನಿಯಂತ್ರಣ, ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾದರು' ಎಂದು ದೂರಿದರು.
ಚುನಾವಣಾ ಚಿತ್ರಣ : ಬೆಂಗಳೂರು ಉತ್ತರದಲ್ಲಿ ಯಾವ ಗೌಡರಿಗೆ ಗೆಲುವು?
ಏಪ್ರಿಲ್ 18ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಕೃಷ್ಣ ಬೈರೇಗೌಡ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣ ಬೈರೇಗೌಡ ಅವರು ಕಣದಲ್ಲಿದ್ದಾರೆ.
15 ಲಕ್ಷ ಎಲ್ಲಿ ಎಂದು ಕೇಳಿ
'ಬಿಜೆಪಿ ನಾಯಕರು ನಿಮ್ಮ ಮನೆಗೆ ಮತ ಕೇಳಲು ಬಂದಾಗ ಅವರು ಹಿಂದೆ ನೀಡಿದ್ದ ಭರವಸೆಯಂತೆ ಹದಿನೈದು ಲಕ್ಷ ಎಲ್ಲಿ ಎಂದು ಕೇಳಿ. ಅವರ ಎದುರಿಗೆ ಒಂದು ಚೀಲ ಹಿಡಿದು, ಮೊದಲು ಇದರಲ್ಲಿ ಹದಿನೈದು ಲಕ್ಷ ಹಾಕಿ, ಆಮೇಲೆ ಮತ ಕೇಳಲು ಸೂಚಿಸಿ' ಎಂದು ಕೃಷ್ಣ ಬೈರೇಗೌಡ ಹೇಳಿದರು.
ಬಿಜೆಪಿಗೆ ಬುದ್ಧಿ ಕಲಿಸಿ
'ಈ ಬಾರಿ ಮತದಾರರು ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸದೇ ಇದ್ದರೆ ಮುಂದೆಯೂ ಇಂತವೇ ಸುಳ್ಳುಗಳನ್ನು ಹೇಳಿಕೊಂಡು ಕಾಲ ಕಳೆದು ದೇಶದ ಬಡವರಿಗೆ ಇನ್ನಷ್ಟು ಅನ್ಯಾಯ ಮಾಡುತ್ತಾರೆ. ರಾಜ್ಯದ ಮೈತ್ರಿ ಸರಕಾರ ಬೀಳಿಸಲು ಪ್ರಯತ್ನ ನಡೆಸಿದ್ದಾರೆ' ಎಂದು ಕೃಷ್ಣ ಬೈರೇಗೌಡ ದೂರಿದರು.
ಮೈತ್ರಿ ಅಭ್ಯರ್ಥಿ ಗೆಲ್ಲಿಸಿ
'ರಾಜ್ಯದಲ್ಲಿರುವ ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಸರಕಾರ ಉರುಳಿ ಹೋಗುತ್ತದೆ ಎಂದು ಪುಕಾರು ಹಬ್ಬಿಸಿ ಅದನ್ನೇ ಸತ್ಯ ಮಾಡಲು ಕುತಂತ್ರ ನಡೆಸಿದ್ದಾರೆ. ರಾಜ್ಯದ ಮೈತ್ರಿ ಸರಕಾರ ಸುಭದ್ರವಾಗಿ ಇರಬೇಕಾದರೆ ಮತ್ತು ನಮ್ಮ ಸರಕಾರ ಬಡವರ ಪರ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಬೇಕಿದ್ದರೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ' ಎಂದು ಮನವಿ ಮಾಡಿದರು.
ಎಸ್.ಟಿ.ಸೋಮಶೇಖರ್ ಹೇಳಿಕೆ
'ಸ್ಥಳೀಯವಾಗಿ ಇಬ್ಬರೂ ನಾಯಕರ ನಡುವೆ ಪರಸ್ಪರ ಸ್ಪರ್ಧೆ ಇರಬಹುದು. ಆದರೆ ನಮ್ಮ ಎರಡೂ ಪಕ್ಷಗಳ ಹಿರಿಯ ನಾಯಕರು ಒಟ್ಟಾಗಿ ಕೃಷ್ಣ ಬೈರೇಗೌಡ ಅವರನ್ನು ಅಭ್ಯರ್ಥಿ ಆಗಿ ಕಣಕ್ಕೆ ಇಳಿಸಿದ್ದಾರೆ. ನಮ್ಮ ನಾಯಕರ ಸೂಚನೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಗೆಲ್ಲಿಸುವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ಮಿಗಿಲಾಗಿ ಓರ್ವ ಸಜ್ಜನ ರಾಜಕಾರಣಿ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಒಂದುಗೂಡಿ ದುಡಿಯಬೇಕು' ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಕರೆ ನೀಡಿದರು.
ಮೆಟ್ರೋ ರೈಲಿನಲ್ಲಿ ಪ್ರಯಾಣ
ಮುಂಜಾನೆ 6.30ಕ್ಕೆ ಚುನಾವಣಾ ಪ್ರಚಾರ ಆರಂಭಿಸಿದ ಕೃಷ್ಣ ಬೈರೇಗೌಡ ಅವರು ಮೊದಲಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪನಗರ ಉದ್ಯಾನಕ್ಕೆ ತೆರಳಿ, ವಾಯು ವಿಹಾರಕ್ಕೆ ಆಗಮಿಸಿದ್ದ ಜನರೊಂದಿಗೆ ಮಾತುಕತೆ ನಡೆಸಿದರು. ದಾಸರಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರಿಗೆ ಮತ ನೀಡುವಂತೆ ಮನವಿ ಮಾಡಿದರು. ನಂತರ ಮೇಯೋ ಹಾಲ್ ಕೋರ್ಟ್, ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್ ಆವರಣಗಳಲ್ಲಿ ಇರುವ ಬೆಂಗಳೂರು ವಕೀಲರ ಸಂಘದ ಸಭಾಂಗಣಗಳಿಗೆ ಭೇಟಿ ನೀಡಿ ವಕೀಲರ ಜೊತೆ ಚರ್ಚಿಸಿದರು.