ರಾಜ್ಯದ ಹಲವೆಡೆ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರ: ಸುಧಾಕರ್
ಬೆಂಗಳೂರು ಫೆಬ್ರವರಿ 23: ರಾಜ್ಯದಲ್ಲಿ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷತೆ ಹೊಂದಿರುವ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರಗಳನ್ನು ಬೆಳಗಾವಿ, ಮೈಸೂರು, ಗುಲ್ಗರ್ಗಾ ಮತ್ತು ಬೀದರ್ ನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ "ಸಂಕಲ್ಪ" ಚೇಸ್ ಕ್ಯಾನ್ಸರ್ ಪೌಂಡೇಷನ್ ಅಂಡ್ ರೀಸರ್ಚ್ ಟ್ರಸ್ಟ್, ನವೋದಯನ್ಸ್ (ನವೋದಯ ಹಳೆಯ ವಿದ್ಯಾರ್ಥಿಗಳ ಸಂಘ) ಜಂಟಿಯಾಗಿ ಆಯೋಜಿಸಿದ್ದ ಕ್ಯಾನ್ ವಾಕ್ -2020 ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದರು. ಕ್ಯಾನ್ಸರ್ ಮಾರಕ ರೋಗ.ಇದಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್
ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯವಿದೆ. ಇದಕ್ಕೆ ಚಿಕಿತ್ಸೆ ಇಲ್ಲವೇ ಇಲ್ಲ ಎನ್ನುವ ಕಾಯಿಲೆ ಅಲ್ಲ. ಆದರೆ ಈ ಕಾಯಿಲೆಯನ್ನು ಆದಷ್ಟು ಬೇಗ ಪತ್ತೆ ಹಚ್ಚುವ ಕಾರ್ಯ ಆಗಬೇಕಾಗಿದೆ. ಅದಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಬೇಕಾಗಿದೆ. ಈ ಕೆಲಸ ಸರಕಾರಗಳು ಹೆಚ್ಚಾಗಿ ಮಾಡುತ್ತಿವೆ.
ಪೌರಕಾರ್ಮಿಕರಿಗೋಸ್ಕರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಬಿಗ್ಬಾಸ್ ವಿಜೇತ ಶೈನ್ ಶೆಟ್ಟಿ, ನವೋದಯ ಹಳೆಯ ವಿದ್ಯಾರ್ಥಿಗಳು, ಬಿಬಿಎಂಪಿ ನೌಕರರು ಹಾಗೂ ಪೌರಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಈ ವಾಕಥಾನ್ ನಲ್ಲಿ ಭಾಗವಹಿಸಿದ್ದರು.
ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಚಟುವಟಿಕೆ
ಮಹಿಳೆಯರು, ವಯೋವೃದ್ದರು ಸೇರಿದಂತೆ ಎಲ್ಲರು ದೈಹಿಕವಾಗಿ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಚಟುವಟಿಕೆಯಲ್ಲಿ ಭಾಗಿಯಾದರೆ ಕ್ಯಾನ್ಸರ್ ನಿಂದ ದೂರವಾಗಬಹುದು. ದುಷ್ಚಟಗಳಿಂದ ಬಹಳಷ್ಟು ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಇವುಗಳನ್ನು ಬಹಳ ಬೇಗ ಪತ್ತೆ ಹಚ್ಚಿದರೆ ವಾಸಿ ಮಾಡುವುದು ಸಾಧ್ಯ. ಬಡತನ ರೇಖೆಗಿಂತ ಕೆಳಗೆ ಇರುವ ಜನರ ಕಷ್ಟವನ್ನು ನಾನು ಕಂಡಾರೆ ಕಂಡಿದ್ದೇನೆ. ಇಂತಹ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕು. ಕ್ಯಾನ್ಸರ್ ರೋಗಿಗಳ ಸಂಖ್ಯೆ ಕಡಿಮೆ ಆಗಲಿ ಎಂದು ಹೇಳಿದರು.
ರಾಜ್ಯ ಸರಕಾರದಿಂದ ವಿಶೇಷ ಯೋಜನೆ
ರಾಜ್ಯದಲ್ಲಿ ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡಲು ರಾಜ್ಯ ಸರಕಾರ ವಿಶೇಷ ಯೋಜನೆಯೊಂದನ್ನು ರೂಪಿಸುತ್ತಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಿಂದ ರಾಜ್ಯದ ಬೆಳಗಾವಿ, ಮೈಸೂರು, ಗುಲ್ಬರ್ಗಾ ಮತ್ತು ಬೀದರ್ ಗಳಲ್ಲಿ ವಿಭಾಗೀಯ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್
ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣ ನಗರದಲ್ಲಿ ಪ್ಯಾಸ್ಟಿಕ್ ನಿಷೇದ ಗೊಳಿಸಿರುವುದು ಬೆಂಗಳೂರು ನಗರದಲ್ಲಿ. ನಗರದ ಸ್ವಚ್ಚತೆಯ ಜವಾಬ್ದಾರಿ ಕೇವಲ ಬಿಬಿಎಂಪಿಯದಲ್ಲ. ಸಾರ್ವಜನಿಕರು ಬಿಬಿಎಂಪಿ ಯ ಕೈಜೋಡಿಸುವುದದರಿಂದ ನಮ್ಮ ನಗರ ಸ್ವಚ್ಚಗೊಳಿಸುವುದು ಸಾಧ್ಯ ಎಂದು ಹೇಳಿದರು. ಪ್ಲಾಸ್ಟಿಕ್ ನಿಯಂತ್ರಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. ಬಿಬಿಎಂಪಿಯ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದರು.
ಚೇಸ್ ಕ್ಯಾನ್ಸರ್ ಫೌಂಡೇಷನ್ ಅಂಡ್ ರೀಸರ್ಚ್ ಟ್ರಸ್ಟ್
"ಸಂಕಲ್ಪ" ಚೇಸ್ ಕ್ಯಾನ್ಸರ್ ಫೌಂಡೇಷನ್ ಅಂಡ್ ರೀಸರ್ಚ್ ಟ್ರಸ್ಟ್ ನ ಅಧ್ಯಕ್ಷ ಡಾ. ರಾಜಶೇಖರ್ ಸಿ. ಜಾಕಾ, ಕ್ಯಾನ್ಸರ್ ಇಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ 2018 ರಲ್ಲಿ 1.15 ದಶಲಕ್ಷ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಬರುವ 2040ರ ವೇಳೆಗೆ ಇದು ದ್ವಿಗುಣಗೊಳ್ಳುವ ಆತಂಕವಿದೆ. ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಂಚೂಣಿಯಲ್ಲಿರುವ ಬೆಂಗಳೂರು ನಗರ ಮತ್ತು ಇಲ್ಲಿ ವಾಸವಾಗಿರುವ 1.30 ಕೋಟಿ ಜನರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಚ್ಛತಾ ರೂವಾರಿಗಳು ಮತ್ತು ಸ್ವಚ್ಛತಾ ರಾಯಭಾರಿಗಳೂ ಆದ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಐದು ಕಿಲೋಮೀಟರ್ ''ಕ್ಯಾನ್ ವಾಕ್ - 2020" ವಾಕಥಾನ್ ಆಯೋಜಿಸಲಾಗಿತ್ತು ಎಂದು ಹೇಳಿದರು.