ಭವಿಷ್ಯ ಉಜ್ವಲವಾಗಬೇಕಾದರೆ ತಂಬಾಕು ಉತ್ಪನ್ನಗಳಿಂದ ದೂರವಿರಿ
ಬೆಂಗಳೂರು, ನವೆಂಬರ್ 23 : ಸದಾ ಪ್ರತಿಭಟನೆ, ಧರಣಿಗೆ ವೇದಿಕೆಯಾಗಿದ್ದ ನಗರದ ಸ್ವಾತಂತ್ರ್ಯ ಉದ್ಯಾನ ಗುರುವಾರ ವಿದ್ಯಾರ್ಥಿಗಳಿಂದ ತುಂಬಿತ್ತು. ತಂಬಾಕಿನಿಂದ ದೂರವಿದ್ದು ಮುಂದಿನ ಭವಿಷ್ಯವನ್ನು ಉಳಿಸಿಕೊಳ್ಳಿ ಎನ್ನುವ ಸಂದೇಶದೊಂದಿಗೆ "ತಂಬಾಕು ಮುಕ್ತ ಮಕ್ಕಳು' ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸಾರ್ವಜನಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಹಾಗೂ ಹಲವು ರಕ್ಷಣಾ ಸಂಸ್ಥೆಗಳು ಜತೆಗೆ ನಗರದ 20 ಶಾಲಾ-ಕಾಲೇಜುಗಳಿಂದ ಸುಮಾರು 700 ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವ ಮಾತನಾಡಿ, ಬೀಡಿ, ಸಿಗರೇಟು ಮತ್ತಿತರೆ ತಂಬಾಕು ಪದಾರ್ಥಗಳು ಬಿಡಿಯಾಗಿ ಸಿಗುವುದರಿಂದ ಯುವ ಜನಾಂಗಕ್ಕೆ ಅದು ಮಾದಕದೃವ್ಯಗಳ ಸೇವನೆಗೆ ರಹದಾರಿಯಂತೆ ಕೆಲಸ ಮಾಡುತ್ತದೆ ಎಂದರು.
ಲ್ಲಾ ಮಕ್ಕಳಿಗು ಧೂಮರಹಿತ ಪರಿಸರ ಹೊಂದುವ ಹಕ್ಕಿದೆ ಮತ್ತು ತಂಬಾಕು ಸೇರಿದಂತೆ ಯಾವುದೇ ಮಾದಕವಸ್ತುಗಳಿಂದ ಮಕ್ಕಳು ಮುಕ್ತವಾಗಿರಬೇಕು. ಹಾಗಾಗಿ ಆರೋಗ್ಯ ರಕ್ಷಣಾ ಸಂಸ್ಥೆಗಳು ಹಾಗೂ ನಾಗರಿಕ ಸೇವಾ ಸಂಘಟನೆಗಳ ಜತೆ ಸೇರಿ ಮಕ್ಕಳ ರಕ್ಷಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎದು ಹೇಳಿದರು.
ಅಂತಾರಾಷ್ಟ್ರೀಯ ಕ್ರೀಡಾ ಪಟು ಅರ್ಜುನ್ ದೇವಯ್ಯ ಮಾತನಾಡಿ, ಮಕ್ಕಳು ದೈಹಿಕ ಚಟುವಟಿಕೆಗಳು ಹಾಗೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯದಾಯಕ ಜೀವನ ನಡೆಸಬಹುದು. ಚಿಕ್ಕ ವಯಸ್ಸಿನಲ್ಲಿಯೇ ಧೂಮಪಾನಕ್ಕೆ ದಾಸರಾಗುವುದರಿಂದ ದೇಹ ಮತ್ತು ಮನಸ್ಸು ಬಲಹೀನವಾಗುತ್ತದೆ ಎಂದರು.