ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ
ಬೆಂಗಳೂರು, ಡಿಸೆಂಬರ್ 02 : ಕೋಲಾರದ ಮಾಜಿ ಶಾಸಕ, ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ತನಿಖೆಯನ್ನು ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಪಹರಣ ಪ್ರಕರಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಬುಧವಾರ ಬೆಂಗಳೂರಿನ ವೈಟ್ ಫೀಲ್ಡ್ ಡಿಸಿಪಿ ಡಿ. ದೇವರಾಜ್ ಅಪಹರಣ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. "ಮಂಗಳವಾರ ಬೆಳಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆ ದೂರವಾಣಿ ಕರೆ ಬಂದಿತ್ತು. ಕೆರೆಯ ಬಳಿ ಕಾರೊಂದು ನಿಂತಿರುವ ಕುರಿತು ಮಾಹಿತಿ ನೀಡಲಾಗಿತ್ತು" ಎಂದರು.
ನಾನು ಗನ್ ಪಾಯಿಂಟ್ ನಲ್ಲಿದ್ದೆ : ವರ್ತೂರು ಪ್ರಕಾಶ್ ಹೇಳಿಕೆ
"ಪೊಲೀಸರು ಕಾರಿನ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಖಾರದ ಪುಡಿ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಅಪರಾಧ ಪ್ರಕರಣಕ್ಕೆ ಕಾರನ್ನು ಬಳಕೆ ಮಾಡಿರುವುದು ತಿಳಿದುಬಂತು. ಮಧ್ಯಾಹ್ನ 3.30ಕ್ಕೆ ಕಾರು ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಯಿತು" ಎಂದು ಹೇಳಿದರು.
ಅಕ್ರಮ ಭೂಮಿ ಹಂಚಿಕೆ ಆರೋಪ; ಕೋಲಾರ ಮಾಜಿ ತಹಶೀಲ್ದಾರ್, ವರ್ತೂರು ಪ್ರಕಾಶ್ ಗೆ ಆತಂಕ
"ಬಳಿಕ ವರ್ತೂರು ಪ್ರಕಾಶ್ ನನ್ನ ಬಳಿ ಬಂದು ಘಟನೆಯ ಬಗ್ಗೆ ಮಾಹಿತಿ ನೀಡಿದರು. ಕೋಲಾರದಿಂದ ಮದುವೆಗೆ ಹೋಗುವಾಗ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದರು ಎಂಬ ಮಾಹಿತಿ ನೀಡಿದರು" ಎಂದು ದೇವರಾಜ್ ಘಟನೆ ವಿವರಿಸಿದರು.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ: ದೂರು ದಾಖಲು
"ಕಾರು ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲು ತಿಳಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಸಂಜೆ 7.30ಕ್ಕೆ ಅಪಹರಣ ನಡೆದಿದೆ" ಎಂದು ಪೊಲೀಸರು ವಿವರಿಸಿದರು.
"ಕೋಲಾರ, ಮುಳಬಾಗಿಲು , ಅಂತರಗಂಗೆ, ನರಸಾಪುರ, ಕೈವಾರ, ಮುರುಗುಮಲ್ಲ ಮುಂತಾದ ಕಡೆ ಗುರುವಾರ ರಾತ್ರಿ ಸುತ್ತಾಡಿಸಿದ್ದಾರೆ. ಶುಕ್ರವಾರ ರಾತ್ರಿ ಕೂಡಿ ಹಾಕಿದ್ದಾರೆ. ಮೊಣಕಾಲಿನಲ್ಲಿ ಎರಡು ಗಾಯವಾಗಿವೆ. ರಕ್ತ ಹೆಪ್ಪುಗಟ್ಟುವಂತಹ ಗಾಯವದು" ಎಂದು ಮಾಹಿತಿ ಕೊಟ್ಟರು.
"ಅಪಹರಣ ಮಾಡಿದವರು ಕನ್ನಡ, ತಮಿಳು ಮಾತನಾಡುತ್ತಿದ್ದರು. ಹಣ ಮಾಡಿದ್ದೀರಿ, ಹಣ ತರಿಸಿ ಎಂದು ಹೇಳಿದ್ದಾರೆ ಬಳಿಕ ನಂದಗುಡಿ ಸಮೀಪ ಶಿವನಾಪುರ ಬಳಿ ಬಿಟ್ಟು ಹೋಗಿದ್ದಾರೆ. ಇವರು ಕೆ. ಆರ್. ಪುರಂ ಮೂಲಕ ಮನೆ ತಲುಪಿದ್ದಾರೆ" ಎಂದರು.
"ಈ ಘಟನೆ ಸಂಪೂರ್ಣವಾಗಿ ಕೋಲಾರ ಸುತ್ತಮುತ್ತ ನಡೆದಿದೆ. ಆದ್ದರಿಂದ, ನ್ಯಾಯಾಲಯ ಅನುಮತಿ ಪಡೆದು ಕೋಲಾರ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡುತ್ತಿದ್ದೇವೆ" ಎಂದು ಡಿ. ದೇವರಾಜ್ ಹೇಳಿದರು.