ಬೆಂಗಳೂರಲ್ಲಿ ಪಂಜಾಬ್ ಪೊಲೀಸರ ಕೈಗೆ ಸಿಕ್ಕ ಖಲಿಸ್ತಾನದ ಉಗ್ರ ಓರ್ವ ಟೆಕ್ಕಿ
ಬೆಂಗಳೂರು, ಜನವರಿ 13: ಬೆಂಗಳೂರಲ್ಲಿ ಪಂಜಾಬ್ ಪೊಲೀಸರ ಕೈಗೆ ಸೆರೆ ಸಿಕ್ಕ ಶಂಕಿತ ಉಗ್ರ ಓರ್ವ ಟೆಕ್ಕಿ ಎಂದು ತಿಳಿದುಬಂದಿದೆ.
ಬೆಂಗಳೂರು ದಿನದಿಂದ ದಿನಕ್ಕೆ ಉಗ್ರರ ಅಡಗುತಾಣವಾಗುತ್ತಿದೆ. ಕಳೆದ ಒಂದು ವಾರದ ಹಿಂದಷ್ಟೇ ಗಣರಾಜ್ಯೋತ್ಸವದಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು.
ಕೋಲಾರಕ್ಕೂ ತಟ್ಟಿದ ಉಗ್ರಗಾಮಿಗಳ ಕರಿ ನೆರಳು; ಇಬ್ಬರ ಬಂಧನ
ಬೆಂಗಳೂರಲ್ಲಿ ನಗರಿಯಲ್ಲಿ ಮತ್ತೊಬ್ಬ ಪ್ರತ್ಯೇಕತಾವಾದಿ ಸೆರೆ ಸಿಕ್ಕಿದ್ದಾನೆ. ಬಂಧಿತ ಆರೋಪಿಯನ್ನು ಉತ್ತರ ಭಾರತ ಮೂಲದ ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್ ಸಿಂಗ್ ಸಿದ್ದು ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿ. ಈತ ಎಂಜಿನಿಯರ್ ಮಾಡಿಕೊಂಡು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ. ಜೊತೆಗೆ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ. ಸಿಖ್ ಧರ್ಮದವರಿಗಾಗಿಯೇ ಪ್ರತ್ಯೇಕ ದೇಶ ಬೇಕು ಎಂದು ಹೋರಾಟ ಮಾಡುತ್ತಿದ್ದ. ಪಂಜಾಬ್ನ್ನು ಪ್ರತ್ಯೇಕ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಸಂಪಿಗೆಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸಿದ್ದು ಕಳೆದ 6 ತಿಂಗಳಿಂದ ಬೆಂಗಳೂರಿನ ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರು ಆರೋಪಿಗಾಗಿ ನಿರಂತರ ಹುಡುಕಾಟ ನಡೆಸುತ್ತಲೇ ಇದ್ದರು. ಬಳಿಕ ಆತ ಬೆಂಗಳೂರಿಗೆ ಪರಾರಿಯಾಗಿರುವ ಸುಳಿವು ಪಡೆದ ಪಂಜಾಬ್ ಪೊಲೀಸರು, ಆರೋಪಿ ಪತ್ತೆ ಮಾಡುವಂತೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಮನವಿ ಮಾಡಿದ್ದರು.
ಆರೋಪಿಗಾಗಿ ಬಲೆ ಬೀಸಿದ್ದ ಬೆಂಗಳೂರು ಸಿಸಿಬಿ ಪೊಲೀಸರಿಗೆ ಭಾನುವಾರ ಜರ್ನಲ್ ಸಿಂಗ್ ಸಿಕ್ಕಿಬಿದ್ದಿದ್ದಾನೆ.ಸಿಖ್ ಧರ್ಮದ ವಿರುದ್ದ ಕೆಲಸ ಮಾಡುವವರ ವಿರುದ್ಧ ಜರ್ನಲ್ ಸಿಂಗ್ ಸಮರ ಸಾರಿದ್ದ.
ಈತನ ವಿರುದ್ದ ಪಂಜಾಬ್ನ ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್ಡಿ (ಆಂತರಿಕ ಭದ್ರತಾ ವಿಭಾಗ) ಪ್ರಕರಣ ದಾಖಲಿಸಿತ್ತು. ಮೊಹಾಲಿ ಸ್ಟೇಟ್ ಸ್ಪೆಷಲ್ ಆಪರೇಷನ್ ಸೆಲ್ ಪೊಲೀಸರು ಸಿಂಗ್ಗಾಗಿ ಹುಡಕಾಟ ನಡೆಸಿದ್ದರು.
ಸಿಸಿಬಿ ಡಿಸಿಪಿ ರವಿಕುಮರ್ ನೇತೃತ್ವದಲ್ಲಿ ಪೊಲೀಸರು ಹುಡಕಾಟ ನಡೆಸಿದ್ದರು. ಸಿಸಿಬಿಯ ಇನ್ಸ್ ಪೆಕ್ಟರ್ ಕೇಶವ್ ಮೂರ್ತಿ ಆರೋಪಿಯನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.