ವಿಮಾನಯಾನ ಸಂದರ್ಭದಲ್ಲಿ ಕನ್ನಡದಲ್ಲಿ ಘೋಷಣೆ ಕೇಳಿ ಬರಲಿ
ಬೆಂಗಳೂರು, ಸೆ. 25: ವಿಮಾನ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ, ಘೋಷಣೆ, ಭಿತ್ತಿ ಚಿತ್ರಗಳ ಹೆಚ್ಚಳಕ್ಕೆ ಕಾರಣವಾಗಿರುವ ಕನ್ನಡ ಗ್ರಾಹಕರ ಕೂಟ ಈಗ ಮತ್ತೊಂದು ಬೇಡಿಕೆ ಇಟ್ಟುಕೊಂಡು ಆನ್ ಲೈನ್ ಪಿಟೀಷನ್ ಹಾಕಿದೆ. ವಿಮಾನಯಾನ ಸಂದರ್ಭದಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಉದ್ಘೋಷಣೆ ಮಾಡಲು ಮನವಿ ಸಲ್ಲಿಸಲಾಗುತ್ತಿದೆ.
ಸಾವಿರಾರು ಕೋಟಿ ವ್ಯವಹಾರ ನಡೆಸುವ ವಿಮಾನಯಾನ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಬಳಕೆಯಲ್ಲಿರುವಂತೆ ವಿಮಾನ ಹೊರಡುವ ಮತ್ತು ತಲುಪುವ ಊರಿನ ಭಾಷೆಯನ್ನು ಬಳಕೆ ಮಾಡುವುದೇನು ದೊಡ್ಡ ವಿಷಯವಲ್ಲ.
ಹಿಂದಿಯೊಂದೇ ಈ ದೇಶದ ಭಾಷೆ ಎನ್ನುವ ಭ್ರಮೆಯಲ್ಲಿರುವ ಭಾರತದ ಕೇಂದ್ರ ಸರಕಾರದ ವಿಮಾನಯಾನ ಸಚಿವಾಲಯವೂ ವಿಮಾನಗಳಲ್ಲಿನ ಈ ಹುಳುಕು ಭಾಷಾ ನೀತಿಗೆ ಒಪ್ಪಿಗೆ ನೀಡಿದೆ.
ಭಾರತದೊಳಗಿನ ಯಾವುದೇ ಊರಿನಿಂದ ಹೊರಡಲಿ/ ತಲುಪಲಿ, ಹೊರಡುವ/ ತಲುಪುವ ಊರಿನ ಭಾಷೆ ಯಾವುದೇ ಇರಲಿ ವಿಮಾನದೊಳಗಿನ ಸುರಕ್ಷತೆ ಮತ್ತು ಇನ್ನಿತರ ಮಾಹಿತಿಗಳನ್ನು ಹಿಂದಿ/ಇಂಗ್ಲೀಶ್ ಭಾಷೆಯಲ್ಲಿ ನೀಡಲಾಗುತ್ತದೆ. ಈ ಎರಡು ಭಾಷೆ ತಿಳಿಯದವರಿಗೆ ಇದರಿಂದ ತೊಂದರೆ ಉಂಟಾಗುತ್ತದೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ವಿಮಾನಯಾನ ಮಾಡುವ ಜನರಿಗೆ ಇಲ್ಲಿನ ಭಾಷೆ ಬಳಕೆ ಮುಖ್ಯವಾಗಿದೆ.
ಜನಗಣತಿಯ ಆಧಾರದ ಮೇಲೆ ನೋಡಿದರೆ ಭಾರತದಲ್ಲಿ ಹಿಂದಿ ಮಾತೃಭಾಷೆಯನ್ನಾಗಿ ಹೊಂದಿರುವ ಜನರ ಸಂಖ್ಯೆ ಸುಮಾರು 25% ನಷ್ಟಿದೆ ಮತ್ತು ಇಂಗ್ಲೀಶದ ತಿಳಿದಿರುವವರ ಸಂಖ್ಯೆ ಸುಮಾರು 7% ಇದೆ. ವಿಮಾನಯಾನ ಸಚಿವಾಲಯದ ಒಪ್ಪಿಗೆ ಮೇರೆಗೆ ಬಳಸಲಾಗುತ್ತಿರುವ ಭಾಷಾ ನೀತಿಯು ಹಿಂದಿ/ಇಂಗ್ಲೀಶ್ ಗೊತ್ತಿಲ್ಲದ ಜನರಿಗೆ ತಮ್ಮ ಜೀವಕ್ಕೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿದೆ.
ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಈ ಬಗ್ಗೆ ಗಮನಹರಿಸಿ, ಹೊರಡುವ/ ತಲುಪುವ ಊರಿನ ಭಾಷೆಯನ್ನು ಒಳಗೊಂಡಂತೆ ಭಾಷಾ ನೀತಿ ರೂಪಿಸಬೇಕೆಂದು ಎಲ್ಲಾ ವಿಮಾನಯಾನ ಕಂಪನಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸೋಣ. ಇದಕ್ಕಾಗಿ ನೀವು ಆನ್ ಲೈನ್ ಪಿಟೀಷನ್ ಗೆ ಸಹಿ ಹಾಕಲು ಈ ಲಿಂಕ್ ಕ್ಲಿಕ್ ಮಾಡಿ.