ಬೆಂಗಳೂರು ಗಲಭೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 12: ಮಂಗಳವಾರ ರಾತ್ರಿ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ನಗರವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಇದು ತೀವ್ರ ಚರ್ಚೆಗೆ ಒಳಗಾಗಿದೆ.
Recommended Video
ಶಾಸಕರ ಮನೆ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿಯ ಕುಕೃತ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಅವರು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಘರ್ಷಣೆ: ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ
'ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಸಾರಾಸಗಟಾಗಿ ಖಂಡನೀಯ ಘಟನೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಇವರು ಸಮಾಜದ ಘಾತುಕರು. ಶಾಸಕರಾಗಿರಬಹುದು, ಯಾರೇ ಇರಬಹುದು ಆಸ್ತಿ ಪಾಸ್ತಿ ಹಾನಿ ಮಾಡುವ ಕೆಲಸವನ್ನು ಸಹಿಸುವುದಿಲ್ಲ. ಪೊಲೀಸ್ ಸ್ಟೇಷನ್ ಮೇಲೆಯೂ ದಾಳಿ ನಡೆದಿದೆ. ಕಾನೂನನ್ನು ಕೈಗೆ ತೆಗದುಕೊಳ್ಳುವ ಕೆಲಸ ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮುಂದೆ ಓದಿ...
ನಿಮ್ಮ ನಿಲುವು ತಿಳಿಸುತ್ತೇವೆ
ಈ ಘಟನೆಗೆ ಪ್ರಚೋದನಾಕಾರಿ ಟ್ವೀಟ್ ಮಾಡಿದ್ದು ಕಾರಣ ಎಂದು ಮಾಧ್ಯಮದ ಮೂಲಕ ತಿಳಿದಿದೆ. ಎಲ್ಲವೂ ತಪ್ಪೇ. ಯಾರು ಮಾಡಿದರೂ ತಪ್ಪೇ. ನಾನು 12 ಗಂಟೆಗೆ ತುರ್ತಾಗಿ ಬೆಂಗಳೂರು ನಗರ ಶಾಸಕರುಗಳ ಸಭೆಯನ್ನು ಕರೆದಿದ್ದೇನೆ. ಅಲ್ಲಿ ಚರ್ಚೆ ಮಾಡಿ ಮುಂದಕ್ಕೆ ಏನು ಮಾಡಬೇಕು, ನಮ್ಮ ನಿಲುವು ಏನು ಅನ್ನೋದನ್ನು ತಿಳಿಸುತ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಸಹಕಾರ
ನಮ್ಮ ಶಾಸಕರು ಹೋಗಿ ಗಲಭೆ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಯಾರೂ ಯಾರ ನಿಯಂತ್ರಣಕ್ಕೂ ಸಿಕ್ಕಿಲ್ಲ. ಘಟನೆಯಲ್ಲಿ ಬಹಳ ವ್ಯವಸ್ಥಿತ ಸಂಚು ಇದೆ ಎನ್ನುವುದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಸರ್ಕಾರ ಕಾನೂನು ಮೂಲಕ ಏನು ಕ್ರಮ ತೆಗೆದುಕೊಳ್ಳಬೇಕೋ ಕೈಗೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಅದಕ್ಕೆ ಸಹಕಾರ ನೀಡುತ್ತೇವೆ ಎಂದರು.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಕರ್ಫ್ಯೂ: 110 ಆರೋಪಿಗಳ ಬಂಧನ
ಈ ಸಂದರ್ಭದಲ್ಲಿ ರಾಜಕಾರಣ ಮಾಡೊಲ್ಲ
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದಿದ್ದರೂ ಕಾಂಗ್ರೆಸ್ ಮೌನ ವಹಿಸಿದೆ ಎಂದು ಟೀಕಿಸಿರುವ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಟೀಕೆಗೆ ಹಾಗೂ ಸಿ.ಟಿ. ರವಿ ಹೇಳಿಕೆಗೆ ನಾನು ಉತ್ತರ ನೀಡಲು ತಯಾರಿಲ್ಲ. ಮುಖ್ಯಮಂತ್ರಿಗಳ ಟ್ವೀಟ್ಅನ್ನೂ ಗಮನಿಸಿದ್ದೇನೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಬೇಕು. ಶಾಶಕರ ಮನೆಗೂ ಭೇಟಿ ನೀಡಿ ಚರ್ಚೆ ನಡೆಸಬೇಕಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದು, ಬೇರೆಯವರ ಬಗ್ಗೆ ಮಾತನಾಡಿ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ: ಬೆಂಗಳೂರಿನಲ್ಲಿ ಪೊಲೀಸರ ಹೈ ಅಲರ್ಟ್
'ದಾಳಿ ದುರದೃಷ್ಟಕರ'
ಪ್ರವಾದಿ ಪೈಗಂಬರ್ ಬಗ್ಗೆ ನಿಂದಾನಾತ್ಮಕವಾಗಿ ಯಾರೇ ಬರೆದಿದ್ದರೂ ಅದನ್ನು ನಾನು ಖಂಡಿಸುತ್ತೇನೆ. ಅದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲ ಕಿಡಿಗೇಡಿಗಳ ಕೆಲಸ. ಆದರೆ ಪುಲಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿ ದುರದೃಷ್ಟಕರ. ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಈ ನೆಲದ ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ಪ್ರಚೋದನೆಗೊಳಗಾಗಿ ಹಿಂಸಾಕೃತ್ಯದಲ್ಲಿ ತೊಡಗುವುದು ಅಕ್ಷಮ್ಯ. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.