ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಆಪ್ ಆಗ್ರಹ
ಬೆಂಗಳೂರು, ಅಕ್ಟೋಬರ್.17: ಸಿಲಿಕಾನ್ ಸಿಟಿಯಲ್ಲೇ ಸದ್ದು ಮಾಡಿದ್ದ ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಬಂಧಿಸುವಂತೆ ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಬ್ಬ ಮಾಜಿ ಮೇಯರ್ ಎನಿಸಿಕೊಂಡಿರುವ ಸಂಪತ್ ರಾಜ್ ಕೇವಲ ಎಂಎಲ್ಎ ಟಿಕೆಟ್ ಗಾಗಿ ಹಾಲಿ ಶಾಸಕರ ಮನೆ ಹಾಗೂ ಕುಟುಂಬವನ್ನು ಸುಟ್ಟು ಹಾಕಲು ಯೋಜಿಸಿದ್ದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಈ ವ್ಯಕ್ತಿ ಭಾರತದಲ್ಲೇ ಇರಲು ಅರ್ಹನಲ್ಲ ಎಂದು ಶರತ್ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದರು.
ಡಿ.ಜೆ ಹಳ್ಳಿ ಗಲಭೆ ಪ್ರಕರಣ: NIAಯಿಂದ 30 ಕಡೆ ದಾಳಿ, ಪ್ರಮುಖ ಆರೋಪಿ ಬಂಧನ
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ರೂವಾರಿ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಗಲಭೆಯಲ್ಲಿ ಭಾಗಿಯಾದ ಸುಮಾರು 250ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು ಶ್ಲಾಘನೀಯ. ಆದರೆ ಕಿಂಗ್ಪಿನ್ ಸಂಪತ್ ರಾಜ್ ರನ್ನು ಇಷ್ಟು ದಿನವಾದರೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಬೇಕು ಎಂದು ಕೇಳಿದ್ದಾರೆ.
"ಸಿಎಂ ಬಿಎಸ್ ವೈ ಮೇಲೆ ಡಿಕೆಶಿ ಒತ್ತಡವಿದೆಯೇ"?:
ತಮ್ಮ ಆಪ್ತನಾಗಿರುವ ಸಂಪತ್ ರಾಜ್ ರನ್ನು ಬಂಧಿಸದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆಯೇ ಎಂಬುದಕ್ಕೆ ಸ್ವತಃ ಸಿಎಂ ಅವರೇ ಉತ್ತರಿಸಬೇಕು. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಚಕಾರ ಎತ್ತುತ್ತಿಲ್ಲ. ಈ ವಿಚಾರದಲ್ಲಿ ಮೂರು ಪಕ್ಷಗಳು ಒಂದೇ ನಾಣ್ಯದ ಹಲವು ಮುಖಗಳಿದ್ದಂತೆ ಎಂದು ಆರೋಪಿಸಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಅವರಂತ ಸಮಾಜ ಘಾತುಕ ವ್ಯಕ್ತಿಯನ್ನು ಯಾವುದೇ ಒತ್ತಡಕ್ಕೆ ಒಳಗಾಗದೇ ಕೂಡಲೇ ಬಂಧಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಒತ್ತಾಯಿಸಿದರು. ಈ ವೇಳೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಇಕ್ಬಾಲ್, ಮುನೇಶ್ವರ ನಗರ ವಾರ್ಡ್ ಅಧ್ಯಕ್ಷ ರಕೀಬುಲ್ಲಾ ಹಾಜರಿದ್ದರು.



Click it and Unblock the Notifications























