ಯಶ್ ಅಲ್ಲದಿದ್ದರೆ, ಸ್ಲಂ ಭರತ್ ಗ್ಯಾಂಗ್ ಸ್ಕೆಚ್ ಹಾಕಿದ್ದು ಯಾರಿಗೆ?
Recommended Video
ಬೆಂಗಳೂರು, ಮಾರ್ಚ್ 10: 'ಚಂದನವನ(ಕನ್ನಡ ಚಿತ್ರರಂಗ)ದಲ್ಲಿ ಸುಪಾರಿ ಸಂಸ್ಕೃತಿ ಇಲ್ಲ, ಎಲ್ಲಾ ನನ್ನ ಅಣ್ತಮ್ಮಂದಿರು' ಎಂದು ರಾಕಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಯಶ್ ಅಲಿಯಾಸ್ ನವೀನ್ ಅವರು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕೂಡಾ, ಯಶ್ ಅವರ ಹೆಸರು ಸುಪಾರಿ ಕಿಲ್ಲಿಂಗ್ ಪ್ರಕರಣದಲ್ಲಿಲ್ಲ, ಅವರು ಟಾರ್ಗೆಟ್ ಆಗಿಲ್ಲ ಎಂದಿದ್ದಾರೆ. ಹಾಗಾದರೆ, ಟಾರ್ಗೆಟ್ ಆಗಿದ್ದು ಯಾರು? ಉತ್ತರ ಪೊಲೀಸರು ಹಾಗೂ ಸ್ಕೆಚ್ ಹಾಕಿದವರಿಗೆ ಮಾತ್ರ ಗೊತ್ತಿದೆ.
ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ
ರೌಡಿ ಸ್ಲಂ ಭರತ್ ಹಾಗೂ ಗ್ಯಾಂಗಿನವರು ಜೈಲಿನಲ್ಲಿದ್ದುಕೊಂಡೇ ಜನಪ್ರಿಯ ನಟನೊಬ್ಬನ ಕೊಲೆಗೆ ಸಂಚು ರೂಪಿಸಿದ್ದರು. ಭರತ್ ಗೆ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಆದರೆ, ನಟ ಯಶ್ ಗುರಿಯಾಗಿರಲಿಲ್ಲ ಎಂದರೆ, ಮತ್ತೆ ಯಾವ ನಟರ ಮೇಲೆ ಪಾತಕಿಗಳ ಕರಾಳ ನೆರಳು ಬಿದ್ದಿದೆ ಎಂಬುದು ಇನ್ನು ಸ್ಪಷ್ಟವಿಲ್ಲ.
ಸದ್ಯಕ್ಕೆ ಯಶ್ ಹೇಳಿರುವ ಮಾತುಗಳು ನಿಜವಾಗಲಿ, ಬಾಲಿವುಡ್ ನಲ್ಲಿ ಅನೇಕ ಸೆಲೆಬ್ರಿಟಿಗಳನ್ನು ಬೆಚ್ಚುವಂತೆ ಮಾಡುವ ಸುಪಾರಿ ಹತ್ಯೆ ಪ್ರಕರಣಗಳು ಎಂದೆಂದಿಗೂ ಕನ್ನಡ ಚಿತ್ರರಂಗಕ್ಕೆ ಕಾಲಿಡದಿರಲಿ ಎಂದು ಕನ್ನಡ ಸಿನಿರಸಿಕರು, ಅಭಿಮಾನಿಗಳು ಆಶಿಸಿದ್ದಾರೆ.
ನನಗೆ ಯಾವುದೇ ರೀತಿ ಜೀವಭಯವಿಲ್ಲ: ಯಶ್
'ರೌಡಿ ಶೀಟರ್ಗಳು ಅರೆಸ್ಟ್ ಆದಾಗಲೆಲ್ಲ ನನ್ನ ಹೆಸರು ಕೇಳಿ ಬರುತ್ತಿತ್ತು. ಎಲ್ಲವನ್ನೂ ಮೀರಿ ಒಬ್ಬ ನಟನನ್ನು ಕೊಲ್ಲಲು ಸಾಧ್ಯವಾ ಎಂದು ಪ್ರಶ್ನಿಸಿರುವ ಅವರು, ನನ್ನನ್ನು ಕೊಲ್ಲಲು ನಾನೇನು ಕುರಿಯೇ? ನಮ್ಮನ್ನು ರಕ್ಷಿಸಲು ಸರ್ಕಾರ ಇದೆ. ಪೊಲೀಸ್ ವ್ಯವಸ್ಥೆ ಇದೆ. ನನಗೆ ಯಾವುದೇ ರೀತಿಯ ಜೀವ ಭಯ ಇಲ್ಲ ಎಂದಿದ್ದಾರೆ.
ಅಭಿಮಾನಿಗಳ ಆತಂಕ ದೂರ ಮಾಡಿದ ಯಶ್
'ಅಭಿಮಾನಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ಊಹಾಪೋಹ ಸುದ್ದಿಗಳಿಗೆ ಕಿವಿಗೊಡಬೇಡಿ, ಸುಮ್ಮನೆ ಒಬ್ಬರ ಮೇಲೆ ಒಬ್ಬರಿಗೆ ದ್ವೇಷ ಹುಟ್ಟುತ್ತದೆ. ಈ ಘಟನೆ ಸಂಬಂಧಿಸಿದಂತೆ ಗೃಹ ಸಚಿವ ಎಂಬಿ ಪಾಟೀಲರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಯಶ್ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಟರೊಬ್ಬರ ಹತ್ಯೆ ಸಂಚು ಪ್ರಕರಣ
ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಮಾರ್ಚ್ 07ರಂದು ಬಂಧಿಸಿದ್ದರು. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಯಾವ ನಟನನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು ಎಂಬುದನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.
|
ರೌಡಿ ಶೀಟರ್ ಸ್ಲಂ ಭರತ್
ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿರುವ ಸ್ಲಂ ಭರತ್ ಮೇಲೆ, ಕೊಲೆ ಮತ್ತು ಕೊಲೆ ಯತ್ನ ಸೇರಿ ಸುಮಾರು 30ಕ್ಕೂ ಹೆಚ್ಚು ಕೇಸುಗಳಿವೆ. ಎಡರು ದಿನಗಳ ಹಿಂದೆ ಕೊಲೆಯಾದ ರೌಡಿ ಲಕ್ಷ್ಮಣನ ಶಿಷ್ಯನೇ ಈ ಸ್ಲಂ ಭರತ ಎನ್ನಬಹುದು. ಕನ್ನಡದ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಸ್ಲಂ ಭರತ ವಿಚಾರಣೆ ವೇಳೆ ಹೇಳಿಕೊಂಡಿದ್ದ. ಈ ಕುರಿತಂತೆ ಬಾರ್ ವೊಂದರಲ್ಲಿ ಮಾತುಕತೆ ನಡೆಸಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ಮುಂದುವರೆಸಲಾಗಿತ್ತು.