ಚಿತ್ರೀಕರಣ ಪ್ರಾರಂಭ, ಥಿಯೇಟರ್ ಆರಂಭಕ್ಕಾಗಿ ಸಿಎಂಗೆ ಚಿತ್ರರಂಗ ಮನವಿ
ಬೆಂಗಳೂರು, ಮೇ 29: ಕೊರೊನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಚಿತ್ರೋದ್ಯಮದ ಕೆಲಸಗಳನ್ನು ಮತ್ತೆ ಆರಂಭಿಸಲು ಅನುಮತಿ ನೀಡಲು ಚಿತ್ರರಂಗದ ಗಣ್ಯರು ಇಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಚಿತ್ರೀಕರಣ ಪ್ರಾರಂಭ, ಥಿಯೇಟರ್ ಆರಂಭಕ್ಕಾಗಿ ಮನವಿ ಮಾಡಿದರು.
Recommended Video
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕ ಕೆ ಮಂಜು, ಕೆವಿ ಚಂದ್ರಶೇಖರ್ ಸೇರಿದಂತೆ ಹಲವರ ನಿಯೋಗದಿಂದ ಮುಖ್ಯಮಂತ್ರಿಗಳು ಭೇಟಿ ಮಾಡಲಾಗಿತ್ತು.
ಸಿನಿಮಾ ಶೂಟಿಂಗ್ ಸದ್ಯಕ್ಕೆ ಅವಕಾಶವಿಲ್ಲ, ಡಬ್ಬಿಂಗ್ ಮಾಡಬಹುದು
ಪ್ರಮುಖವಾಗಿ ಚಿತ್ರೀಕರಣ ಪ್ರಾರಂಭಕ್ಕೆ ಅವಕಾಶ, ಥಿಯೇಟರ್ ಆರಂಭಕ್ಕೆ ಅನುಮತಿ ಹಾಗೂ ಚಿತ್ರರಂಗಕ್ಕೆ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಚಿತ್ರರಂಗದ ಮನವಿಗೆ ಸ್ಪಂದಿಸಿರುವ ಯಡಿಯೂರಪ್ಪ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಥಿಯೇಟರ್ ತೆರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಅನುದಾನ ನೀಡುವ ಕುರಿತು ಕೂಡ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ.
ಮುಖ್ಯಮಂತ್ರಿ ಭೇಟಿಯ ನಂತರ ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ''ಚಿತ್ರೀಕರಣ ಪ್ರಾರಂಭಕ್ಕೆ ಅವಕಾಶ, ಥಿಯೇಟರ್ ಆರಂಭ, ಚಿತ್ರರಂಗಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಥಿಯೇಟರ್ಗೆ ಅವಕಾಶ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ'' ಎಂದಿದ್ದಾರೆ.
''ಜೂನ್ ಒಂದರಿಂದ ಎಲ್ಲಾ ರೀತಿಯ ಚಟುವಟಿಕೆಗಳು ಆರಂಭವಾಗುತ್ತವೆ. ಹೀಗಾಗಿ, ನಮಗೂ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮಾರ್ಗಸೂಚಿಯ ಅನುಸಾರವಾಗಿಯೇ ಕೆಲಸ ಮಾಡುತ್ತೇವೆ ಎಂದು ಜೈರಾಜ್ ಹೇಳಿದ್ದಾರೆ.