ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರ: ಕೆಎಫ್ಸಿ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್, 26: ನಗರದ ಕೆಎಫ್ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ಮಹಿಳೆ ಹಾಗೂ ಕೆಎಫ್ಸಿ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಬಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ಕೆಎಫ್ಸಿ ಈ ಬಗ್ಗೆ ಸ್ಪಷ್ಟನೆ ವಕ್ತಾರರು ನೀಡಿದ್ದು, "ಈ ವಿಡಿಯೋ ಹಳೆಯದ್ದು, ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ," ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೆಎಫ್ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟ್ವಿಟ್ಟರ್ನಲ್ಲಿ #RejectKFC #KFCಕನ್ನಡಬೇಕು ಎಂಬ ಹ್ಯಾಷ್ಟ್ಯಾಗ್ಗಳು ಭಾರೀ ಟ್ರೆಂಡ್ ಆಗಿತ್ತು.
Reject KFC trending: ಟ್ವಿಟ್ಟರ್ನಲ್ಲಿ ಕರವೇ ಆಕ್ರೋಶ
ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್ಸಿಯಲ್ಲಿ ಕನ್ನಡ ಹಾಡು ಹಾಕದ ಕಾರಣದಿಂದಾಗಿ ಇದನ್ನು ಸಿಬ್ಬಂದಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದು ನೆಟ್ಟಿಗರು ಕೆಎಫ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ ಕರವೇ ಕಾರ್ಯಕರ್ತರು ಈ ವಿಚಾರದಲ್ಲಿ ಪ್ರತಿಭಟನೆಯನ್ನು ಕೂಡಾ ನಡೆಸಿದ್ದರು.
ಈ ಬಗ್ಗೆ ಈಗ ಸ್ಪಷ್ಟನೆ ನೀಡಿರುವ ಕೆಎಫ್ಸಿ ವಕ್ತಾರರು, "ಇದು ಹಳೆಯ ವಿಡಿಯೋ ಮತ್ತು ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ," ಎಂದು ತಿಳಿಸಿದ್ದಾರೆ. "ಹಾಗೆಯೇ ಕೆಎಫ್ಸಿ ಇಂಡಿಯಾ ಎಲ್ಲಾ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳ ಕುರಿತು ಅತ್ಯುನ್ನತ ಗೌರವ ಹೊಂದಿದೆ. ನಾವು ದೇಶಾದ್ಯಂತ ಬ್ರ್ಯಾಂಡ್ ಹೊಂದಿರುವುದರಿಂದ, ಗ್ರಾಹಕರು ದೇಶದ ಯಾವುದೇ ರೆಸ್ಟೊರೆಂಟ್ಗೆ ಆಗಮಿಸಿದರೂ, ಒಂದೇ ರೀತಿಯ ಕೆಎಫ್ಸಿ ಅನುಭವ ಪಡೆಯಬೇಕು ಎಂಬುದು ನಮ್ಮ ಗುರಿ," ಎಂದು ವಕ್ತಾರರು ಹೇಳಿದ್ದಾರೆ. ಹಾಗೆಯೇ, "ಈ ಉದ್ದೇಶದಿಂದಲೇ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಕೇಂದ್ರ ಕಚೇರಿಯಿಂದ ಪರವಾನಗಿ ದೊರೆತ ಹಾಗೂ ಖರೀದಿಸಿ ಗೀತೆಗಳ ಸಂಗ್ರಹ ಇರಿಸಲಾಗಿದೆ. ಮತ್ತು ದೇಶಾದ್ಯಂತ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಅವುಗಳನ್ನೇ ಪ್ರಸಾರ ಮಾಡಲಾಗುತ್ತದೆ," ಎಂದು ಸ್ಪಷ್ಟಪಡಿಸಿದ್ದಾರೆ.
'ಒಂದು ವಾರದೊಳಗೆ ಕೆಎಫ್ಸಿ ನಾಮಫಲಕ ಕನ್ನಡದಲ್ಲಿ ಹಾಕಬೇಕು': ಕರವೇ ಆಗ್ರಹ
ಇನ್ನು ವೈರಲ್ ವಿಡಿಯೋದಲ್ಲಿ "ನಾವು ಭಾರತದಲ್ಲಿ ಇರುವುದು. ನಾವು ಎಲ್ಲಿ ಬೇಕಾದರೂ ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್ಪೋರ್ಟ್ ಬೇಕಾ?," ಎಂದು ಸಿಬ್ಬಂದಿಗಳು ಮಹಿಳೆಯನ್ನು ಪ್ರಶ್ನೆ ಮಾಡಿದ್ದು, "ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ," ಎಂದು ಕೂಡಾ ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ನಡುವೆ ಕೆಎಫ್ಸಿಯ ಮಹಿಳಾ ಸಿಬ್ಬಂದಿಯೊಬ್ಬರು, "ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿರುವುದಾ? ಇದಕ್ಕೆ ಮುಂಚೆ ಬಂದವರೂ ಇದೇ ರೀತಿ ಕೇಳಿದ್ರು, ಆಗ ಆಫಿಸರ್ ಬಂದು ಕೂತು ಮಾತನಾಡಿದರು. ಆ ಬಳಿಕ ಅವರಿಂದ ಏನು ಮಾಡಲು ಆಗಲಿಲ್ಲ. ನೀವು ಸುಮ್ಮನೆ ಯಾಕೆ ಮಾತನಾಡುತ್ತೀರಿ. ಕಂಪನಿ ರೂಲ್ಸ್ ಏನಿದೆ ಅದನ್ನು ನಾವು ಫಾಲೋ ಮಾಡುತ್ತೇವೆ," ಎಂದಿದ್ದರು.
ಕರವೇ ಪ್ರತಿಭಟನೆ, ಕೆಎಫ್ಸಿ ನಾಮಫಕಲ ಕನ್ನಡದಲ್ಲಿ ಹಾಕಲು ಒತ್ತಾಯ
ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಕೆಎಫ್ಸಿ ಮಳಿಗೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರದಂದು ಕರವೇ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಎಸ್. ರಾಮೇಗೌಡರ ನೇತೃತ್ವದಲ್ಲಿ ಅನೇಕ ಮುಖಂಡರು ಕೆಎಫ್ಸಿ ಕನ್ನಡ ವಿರೋಧಿ ನಿಲುವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. "ಒಂದು ವಾರದೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದ ಹಾಡುಗಳನ್ನೇ ಹಾಕಬೇಕು," ಎಂದು ರಾಮೇಗೌಡರು ಆಗ್ರಹ ಮಾಡಿದರು. ಒಂದು ವೇಳೆ ಕೆಎಫ್ಸಿ ತನ್ನ ಈ ದುರಹಂಕಾರ ಮುಂದುವರೆಸಿದರೆ ರಾಜ್ಯದ ಎಲ್ಲ ಕೆಎಫ್ಸಿ ಮಳಿಗೆಗಳ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ಆ ಬಳಿಕ ಉಂಟಾಗುವ ಎಲ್ಲಾ ಅನಾಹುತಗಳಿಗೆ ನೀವೇ ಹೊಣೆಗಾರರು ಎಂದು ಕೆಎಫ್ಸಿ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.
Recommended Video
(ಒನ್ಇಂಡಿಯಾ ಸುದ್ದಿ)