ಕೌದೇನಹಳ್ಳಿ ಕೆರೆ ಆವರಣದಲ್ಲಿ ದೀಪೋತ್ಸವದ ಸಂಭ್ರಮ
ಬೆಂಗಳೂರು, ಅಕ್ಟೋಬರ್ 27: ಅದು ಸೊಗಸಾದ ಕಾರ್ಯಕ್ರಮ. ದೀಪಾವಳಿಯನ್ನು ಅದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುವಷ್ಟು ಚೆನ್ನಾಗಿ ನಡೆಯಿತು. ಕೆ.ಆರ್.ಪುರಂನ ಕೌದೇನಹಳ್ಳಿ ಕೆರೆ ಆವರಣದಲ್ಲಿ ಬುಧವಾರ ಯುನೈಟೆಡ್ ವೇ ಆಫ್ ಬೆಂಗಳೂರು, ಪರಿಸರ ಸಂರಕ್ಷಣಾ ಟ್ರಸ್ಟ್ ಮತ್ತು ಬಿಬಿಎಂಪಿ ಸಂಯುಕ್ತವಾಗಿ 'ಕೆರೆ ದೀಪೋತ್ಸವ' ಆಯೋಜಿಸಿದ್ದವು.
ಪರಿಸರಸ್ನೇಹಿ ದೀಪಾವಳಿ ಆಚರಿಸಲು ಪ್ರೇರಣೆ ನೀಡುವ ಕಾರಣಕ್ಕೆ ಅಕ್ಟೋಬರ್ 26ರಂದು ಸಂಜೆ 4ರಿಂದ 7ರವರೆಗೆ ನಡೆದ ದೀಪೋತ್ಸವದಲ್ಲಿ ಐನೂರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಕೆರೆ ಆವರಣದಲ್ಲಿ ಏಳು ಸಾವಿರಕ್ಕೂ ಹೆಚ್ಚು ದೀಪಗಳನ್ನು ಹೊತ್ತಿಸಲಾಗಿತ್ತು. ಇಡೀ ಆವರಣ ಐದು ಬಗೆಯ ಎಣ್ಣೆ ಹಾಗೂ ಸುಗಂಧದಿಂದ ಕೂಡಿ ಫಳಫಳಿಸುತ್ತಿತ್ತು.[26ಕ್ಕೆ ಕೌದೇನಹಳ್ಳಿ ಕೆರೆ ಆವರಣದಲ್ಲಿ 'ಕೆರೆ ದೀಪೋತ್ಸವ']
ಕೆ.ಆರ್.ಪುರಂನ ಶಾಸಕ ಬಿ.ಎ.ಬಸವರಾಜು ಮಾತನಾಡಿ, ದೀಪಾವಳಿಯನ್ನು ಹೀಗೂ ಆಚರಿಸಬಹುದು ಎಂದು ತೋರಿಸಿಕೊಟ್ಟವರು ಯುನೈಟೆಡ್ ವೇ ಬೆಂಗಳೂರು ಹಾಗೂ ಬಿಬಿಎಂಪಿ. ಇಂತಹ ಪರಿಸರಸ್ನೇಹಿ ಆಚರಣೆಯನ್ನು ನಾನು ಬೆಂಬಲಿಸ್ತೀನಿ. ದಯವಿಟ್ಟು ಯಾರೂ ಪಟಾಕಿ ಬಳಸಬೇಡಿ ಎಂದು ಮನವಿ ಮಾಡ್ತೀನಿ ಎಂದರು.
ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ ಪರಿಸರಸ್ನೇಹಿ ಹಬ್ಬದ ಆಚರಣೆಯ ಮಹತ್ವವನ್ನು ಹೇಳಿದರು. ಇಲ್ಲಿರುವ ಮರಗಳು ಮನಸಿನ ಉದ್ವಿಗ್ನತೆ ಕಡಿಮೆ ಮಾಡುತ್ತದೆ. ಈ ರೀತಿಯ ಎಣ್ಣೆಯನ್ನು ಬಳಸಿ ದೀಪ ಹಚ್ಚುವುದರಿಂದ ಬ್ಯಾಕ್ಟಿರಿಯಾ, ವೈರಸ್ ಗಳು ನಾಶವಾಗುತ್ತವೆ. ಶುದ್ಧ ಗಾಳಿ ದೊರೆಯುತ್ತದೆ ಎಂದು ಹೇಳಿದರು.[ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]
ಯುನೈಟೆಡ್ ವೇ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಮನೀಶ್ ಮೈಖೆಲ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಕೆರೆಗಳು ಸಮುದಾಯದ ಜಾಗಗಳಂತಾಗಿವೆ. ಕೆರೆ ದೀಪೋತ್ಸವ ಕಾರ್ಯಕ್ರಮ ಮಾಡಿರುವುದು ಜನರನ್ನು ಕೆರೆ ಬಳಿಗೆ ಕರೆದುಕೊಂಡು ಬರುವುದಕ್ಕೆ. ಆ ಉದ್ದೇಶ ಈಡೇರಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೋಳಿಗೆ ಹಂಚಲಾಯಿತು. ಬೆಂಗಳೂರು ಮೇಯರ್ ಪದ್ಮಾವತಿ, ಆರ್ ಜೆ ರಾಜ್ ಮತ್ತಿತರರು ಭಾಗವಹಿಸಿದ್ದರು.