ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಪ್ಪ ಶವ ಪತ್ತೆ
ಚನ್ನಪಟ್ಟಣ, ಫೆ.26: ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಮಂಗಳವಾರ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಪ್ಪ ಅವರ ಶವ ಚನ್ನಪಟ್ಟಣದ ಹೊರವಲಯದಲ್ಲಿ ಬುಧವಾರ ಪತ್ತೆಯಾಗಿದೆ.ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕೆಂಗೇರಿಯ ಕೊಟ್ಟಿಗೆಪಾಳ್ಯದ ನಿವಾಸಿಯಾಗಿದ್ದ 46 ವರ್ಷ ವಯಸ್ಸಿನ ಕೃಷ್ಣಪ್ಪ ಅವರ ಮೇಲೆ ಮಂಗಳವಾರ ಬೆಳಗ್ಗೆ ಜ್ಞಾನಭಾರತಿ ಕ್ಯಾಂಪಸಿನ ಹಿಂಭಾಗದ ದೀಪ ಕಾಂಪ್ಲೆಕ್ಸ್ ಬಳಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಬಳಿಕ ಇನ್ನೋವಾ ಕಾರಿನಲ್ಲಿ ಅವರನ್ನು ಅಪಹರಿಸಲಾಗಿತ್ತು.
ಬುಧವಾರ (ಫೆ.26) ಕುಂಬಳಗೋಡು ಸಮೀಪ ಅಪಹರಣಕ್ಕೆ ಬಳಸಲಾದ ಟಯೋಟಾ ಇನ್ನೋವಾ ಕಾರು ಪತ್ತೆ ಹಚ್ಚಲಾಗಿತ್ತು. ಕಾರಿನಲ್ಲಿ ರಕ್ತದ ಕಲೆ, ಮಾರಾಕಾಸ್ತ್ರ ಕಂಡು ಬಂದಿತ್ತು. ಅಲ್ಲಿಂದ ಸುಳಿವು ಪಡೆದು ಮುಂದುವರೆದ ತನಿಖಾ ತಂಡಕ್ಕೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಕೃಷ್ಣಪ್ಪ ಅವರ ಶವ ಪತ್ತೆಯಾಗಿದೆ.
ಪೊಲೀಸ್ ತನಿಖೆ ಎತ್ತ ಸಾಗಿದೆ: ಕೌಟುಂಬಿಕ ಕಲಹ, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರಬಹುದು ಎಂದು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಪಿ ಲಾಬೂರಾಮ್ ಅವರು ಶಂಕೆ ವ್ಯಕ್ತಪಡಿಸಿದ್ದರು. ಕೃಷ್ಣಪ್ಪ ಅವರಿಗೆ ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಸುನೀತಾ ಹಾಗೂ ಎರಡನೇ ಹೆಂಡತಿ ವೃಂದಾ. ಇಬ್ಬರನ್ನು ಸಂಭಾಳಿಸಿಕೊಂಡು ಕೃಷ್ಣಪ್ಪ ಸಂಸಾರ ಸಾಗಿಸುತ್ತಿದ್ದರು.
ಆದರೆ, ಎರಡನೇ ಪತ್ನಿಗೆ ಮದುವೆ ಸಂದರ್ಭದಲ್ಲಿ ನೈಸ್ ರಸ್ತೆ ಬಳಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ವರ್ಷಗಳು ಕಳೆದರೂ ಭರವಸೆ ಈಡೇರಿಸಿರಲಿಲ್ಲ. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಇತ್ತೀಚೆಗೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡನೆ ಪತ್ನಿಯ ಸೋದರ ಮಂಡ್ಯದಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಯೇ ತನ್ನ ಇಬ್ಬರು-ಮೂವರು ಜನರ ತಂಡವನ್ನು ಕಟ್ಟಿಕೊಂಡು ಕಿಡ್ನಾಪ್ ಮಾಡಿ ಕೊಲೆಗೈದಿದ್ದಾನೆ ಎಂದು ಅನುಮಾನಪಡಲಾಗಿದೆ.
ಬೆಂಗಳೂರು, ಮಂಡ್ಯ ತುಮಕೂರು, ರಾಮನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಿದ ಜ್ಞಾನಭಾರತಿ ಠಾಣೆ ಪೊಲೀಸರು ಬುಧವಾರ ಇನ್ನೋವಾ ಕಾರು ಪತ್ತೆ ಹಚ್ಚಿದರೂ ಕೃಷ್ಣಪ್ಪ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ಇನ್ನೋವಾ ಕಾರನ್ನು ಬೆಂಗಳೂರಿನ ಹೊರ ವಲಯದಲ್ಲಿ ಬಿಟ್ಟು ಮತ್ತೊಂದು ಕಾರಿನಲ್ಲಿ ಚನ್ನಪಟ್ಟಣ ಕಡೆಗೆ ಕೃಷ್ಣಪ್ಪ ಅವರನ್ನು ಕರೆದೊಯ್ದು ಹತ್ಯೆಗೈಯಲಾಗಿದೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.ಕೃಷ್ಣಪ್ಪ ಅವರ ಕೊಲೆಗೈದವರು ಯಾರು? ಕೊಲೆ ಮಾಡಿರುವ ಉದ್ದೇಶವೇನು? ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.