ಮಲ್ಲೇಶ್ವರದ ನಿಜವಾದ ಅಭಿವೃದ್ಧಿಗೆ ಬದ್ಧ: ಕೆಂಗಲ್ ರೇಣು ಭರವಸೆ
ಬೆಂಗಳೂರು ಮೇ 9: ನಗರದ ಹೃದಯ ಭಾಗದಲ್ಲಿರುವ ಹಾಗೂ ನಗರದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿರುವ ಮಲ್ಲೇಶ್ವರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನಾನು ಹಗಲಿರುಳು ಶ್ರಮಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆಂಗಲ್ ಶ್ರೀಪಾದ ರೇಣು ಹೇಳಿದರು.
ಮತ್ತಿಕೆರೆಯ ನೇತಾಜಿ ಸರ್ಕಲ್ ನಿಂದ ಪ್ರಾರಂಭವಾದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರ ವಂಶಸ್ಥ ನಾನು. ಬೆಂಗಳೂರು ಅಭಿವೃದ್ದಿಗೆ ಕೆಂಗಲ್ ಹನುಮಂತಯ್ಯ ಅವರು ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆಗಳು ನನ್ನ ಕಾಪಾಡಲಿವೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ನನಗೆ ಇದರ ಪ್ರತ್ಯಕ್ಷ ದರ್ಶನವಾಗಿದೆ ಎಂದರು.
ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದು ಕಾಣುವ ಈ ಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರು ದೊರಕುತ್ತಿಲ್ಲ. ಮೇಲ್ವರ್ಗದ ಜನರು ವಾಸಿಸುವ ಸ್ಥಳಗಳ ಸುಂದರೀಕರಣ ಗೊಳಿಸಿರುವ ಶಾಸಕರು ಕೆಳ ವರ್ಗದ ಜನರ ಸಮಸ್ಯೆಗಳ ಬಗ್ಗೆ ಜಾಣ ಕಿವುಡುತನ ತೋರಿಸಿದ್ದಾರೆ. ಕ್ಷೇತ್ರದ ಪ್ರಜ್ಞಾವಂತ ಮತದಾರ ಇದನ್ನು ಗಮನಿಸಿದ್ದು ಕಾಂಗ್ರೆಸ್ ಪಕ್ಷದ ಆಡಳಿತ ಬಗ್ಗೆ ಒಲವು ತೋರಿಸುತ್ತಿದ್ದಾನೆ.
ಇಂತಹ ಸುಸಮಯದಲ್ಲಿ ತಾವು ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಹಳ ಸಂತಸ ತಂದಿದೆ. ಪ್ರಜ್ಞಾವಂತ ಮತದಾರರ ಕ್ಷೇತ್ರ ಎಂದೇ ಕರೆಯಲ್ಪಡುವ ಮಲ್ಲೇಶ್ವರಂ ನಲ್ಲಿ ಕಾಂಗ್ರೆಸ್ ವತಿಯಿಂದ ಟಿಕೆಟ್ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರುಗಳಿಗೆ ಅಭಿನಂದನೆ ಸಲ್ಲಿಸಿದರು.
ಜನರ ಆಶೋತ್ತರಗಳಿಗೆ ದನಿಯಾಗಿದ್ದು ನನಗೆ ಬಹುಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ಇದೇ ಸಂಧರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಬೈಕ್ ರ್ಯಾಲಿಯಲ್ಲಿ 400 ಕ್ಕೂ ಹೆಚ್ಚು ಬೈಕ್ ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ರೋಡ್ ಶೋ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.