ಬೆಂಗಳೂರು ವಿಮಾನ ನಿಲ್ದಾಣದಲ್ಲಿ 'ಕೆಂಪೇಗೌಡ'ರ ಪ್ರತಿಮೆ; ನಾಡಪ್ರಭುವಿನ ಕೈಯಲ್ಲಿ 4000 ಕೆಜಿ ತೂಕದ ಖಡ್ಗ
ಬೆಂಗಳೂರು, ಮೇ 2: ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಆಗಲಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯ ಭಾಗವಾದ 4,000 ಕೆ.ಜಿ. ತೂಕದ ಖಡ್ಗವು ದೆಹಲಿಯಿಂದ ಬೆಂಗಳೂರಿಗೆ ತಲುಪಿದೆ.
ಸೋಮವಾರ ವಿಶೇಷ ಟ್ರಕ್ನಲ್ಲಿ ಬಂದ ಈ ಖಡ್ಗವನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಬರಮಾಡಿಕೊಂಡರು. ಈ ವೇಳೆ ಸಚಿವರ ನೇತೃತ್ವದಲ್ಲಿ ಖಡ್ಗಕ್ಕೆ ನೆರೆದಿದ್ದ ಪುರೋಹಿತರು ಸಾಂಪ್ರದಾಯಿಕ ಶಕ್ತಿಪೂಜೆಯನ್ನು ನೆರವೇರಿಸಿದರು.
ಮೊದಲೇ ಹಂಚಿಕೆಯಾಗಿದ್ದ ಹಣದಲ್ಲಿ ಕೆಂಪೇಗೌಡ ಪ್ರತಿಮೆ: ಡಾ.ಅಶ್ವತ್ಥನಾರಾಯಣ
ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾನ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ಕಾರ್ಮಿಕ ಸಿಬ್ಬಂದಿಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23 ಎಕರೆ ವಿಸ್ತಾರದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇಲ್ಲಿ ತಲೆ ಎತ್ತಲಿರುವ ಕೆಂಪೇಗೌಡರ ಭವ್ಯ ಪ್ರತಿಮೆಗೆ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನೋಯ್ಡಾದ ಪದ್ಮಭೂಷಣ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಈ ಪ್ರತಿಮೆಯನ್ನು ಮಾಡಿಕೊಡುತ್ತಿದ್ದಾರೆ' ಎಂದರು.
ಕೆಂಪೇಗೌಡರ ಕೈಯಲ್ಲಿ 4000 ಕೆಜಿ ತೂಕ ಖಡ್ಗ:
ಸೋಮವಾರದಂದು ಬೆಂಗಳೂರನ್ನು ತಲುಪಿದ ಕೆಂಪೇಗೌಡರ ಪ್ರತಿಮೆಯ 4000 ಕೆಜಿ ತೂಕದ ಖಡ್ಗಕ್ಕೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಾಂಪ್ರದಾಯಿಕವಾಗಿ ಶಕ್ತಿಪೂಜೆಯನ್ನು ನೆರವೇರಿಸಿದರು
"ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಖಡ್ಗವು ಕ್ಷಾತ್ರಬಲವನ್ನು ಪ್ರತಿನಿಧಿಸುತ್ತಿದ್ದು, ನವಭಾರತಕ್ಕೊಂದು ಸಂಕೇತವಾಗಿದೆ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರು ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟದಿಂದ ಒಂದು ದಿವ್ಯ ಅನುಭೂತಿಯನ್ನು ಪಡೆದುಕೊಳ್ಳುವಂತಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ," ಎಂದು ಸಚಿವ ಅಶ್ವತ್ಥ ನಾರಾಯಣ ಬಣ್ಣಿಸಿದರು.
ಈ ಸಂದರ್ಭದಲ್ಲಿ ಅಮೆರಿಕದ ಅಕ್ಕ' ಕನ್ನಡ ಕೂಟಗಳ ಮುಖ್ಯಸ್ಥ ಡಾ. ಅಮರನಾಥ್ ಗೌಡ, ಪ್ರಾಧಿಕಾರದ ಆಯುಕ್ತ ವಿನಯ್ ದೀಪ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಪ್ರಾಧಿಕಾರದ ನಿರ್ದೇಶಕರು ಉಪಸ್ಥಿತರಿದ್ದರು.