ಕೀಟಗಳ ವಿಸ್ಮಯದ ಪ್ರಪಂಚದಲ್ಲಿ ಸುತ್ತಾಡಬೇಕೆ: ನಿಮಗೊಂದು ಅವಕಾಶ!
ಬೆಂಗಳೂರು, ನವೆಂಬರ್.27: ಈಗಿನ ಕಾಲದಲ್ಲಿ ಯುವ ಸಮೂಹ ಕೃಷಿಯಿಂದ ವಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯವಸಾಯ ಹಾಗೂ ವಿನೂತನ ಜಗತ್ತಿನ ಕುರಿತು ಪರಿಚಯಿಸುವ ದೃಷ್ಟಿಯಿಂದ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ.
ಯುವಕರನ್ನು ಕೃಷಿಯತ್ತ ಸೆಳೆಯುವುದು ಹಾಗೂ ನಿಸರ್ಗದಲ್ಲಿ ಕೀಟಗಳ ಮಹತ್ವ, ನಿಸರ್ಗದ ಬಗ್ಗೆ ಆಸಕ್ತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೀಟ ವಿಸ್ಮಯ ಶೀರ್ಷಿಕೆ ಅಡಿ ಕೀಟ ಲೋದಚ್ಚರಿಯ ಸುತ್ತ ಒಂದು ಪಯಣ ಎಂಬ ಪ್ರದರ್ಶನವನ್ನು ಹಮ್ಮಿಕೊಂಡಿದೆ. ದಿನಾಂಕ ನವೆಂಬರ್.29 ರ ಶುಕ್ರವಾರ ಹಾಗೂ ನವೆಂಬರ್.30ರ ಶನಿವಾರ ಮತ್ತು ಡಿಸೆಂಬರ್.01ರ ಬಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಕೀಟ ವಿಸ್ಮಯ ಎಂಬ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ದೇಶದ ಏಕಮಾತ್ರ ಕೀಟ ಪ್ರದರ್ಶನ
ಅಚ್ಚರಿ ಎನಿಸಿದರೂ ಇದು ಸತ್ಯ. ದೇಶದ ಏಕಮಾತ್ರ ಕೀಟ ಪ್ರದರ್ಶನವನ್ನು ಕೃಷಿ ವಿಶ್ವವಿದ್ಯಾನಿಲಯದ ಬೆಂಗಳೂರು ಕೀಟಶಾಸ್ತ್ರ ವಿಭಾಗವು ಹಮ್ಮಿಕೊಂಡಿದೆ. ಈ ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಕೀಟಗಳ ಛಾಯಾಚಿತ್ರಗಳು, ಪರೋಪಕಾರಿ ಹಾಗೂ ಬಹುಪಯೋಕಿ ಕೀಟಗಳು, ವೈವಿಧ್ಯತೆಯಿಂದ ಕೂಡಿದ ಸುಂದರ ಕೀಟಗಳು, ಪ್ರೇಕ್ಷಣಿಯ ಕೀಟಗಳು, 5 ಸಾವಿರಕ್ಕೂ ಹೆಚ್ಚು ನೈಜ ಕೀಟಗಳ ನಿದರ್ಶನ, ಕೀಟಗಳ ಸಂಪರ್ಕ ವ್ಯವಸ್ಥೆ, ಅನುಪಕಾರಿ ಮತ್ತು ಕಪಟ ವೇಷಧಾರಿ ಕೀಟಗಳು, ಅಂಚೆ ಚೀಟಿಗಳಲ್ಲಿರುವ ಕೀಟಗಳು, ಕೀಟಗಳಿಂದ ಸಿದ್ಧಪಡಿಸಿದ ಆಭರಣಗಳು, ಕೀಟಗಳ ಕಿರುಚಿತ್ರಗಳು ಮತ್ತು ಇನ್ನಿತರ ಕೀಟ ಪ್ರಪಂಚದ ವಿಸ್ಮಯಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
ಸಿಲಿಕಾನ್ ಸಿಟಿಯಲ್ಲೇ ಮೂರು ದಿನಗಳ ಕಾಲ ನಡೆಯಲಿರುವ ವಿನೂತನ ಪ್ರದರ್ಶನಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು. ನೀವು ನೋಡಿರದ ಕೀಟಗಳ ಪರಿಚಯ ಆಗಲಿದೆ. ಹಾಗಿದ್ದರೆ ಇನ್ನೇಕೆ ತಡ ಒಮ್ಮೆ ಕೀಟ ವಿಸ್ಮಯದ ಪ್ರಪಂಚದಲ್ಲಿ ಸುತ್ತಾಡಿ ಬನ್ನಿ.