ವಿಜಯ್ ಭಾಸ್ಕರ್ ಗೆ ಪ್ರೊ. ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?
ಬೆಂಗಳೂರು, ಸೆಪ್ಟೆಂಬರ್ 3: ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಮಹತ್ವದ ಹೆಜ್ಜೆಯನ್ನು ಇರಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಟುಎಂ ವಿಜಯ್ ಭಾಸ್ಕರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಪತ್ರ ಬರೆದಿದ್ದು, ಆಡಳಿತದಲ್ಲಿ ಪ್ರಮುಖವಾಗಿ ಪ್ರಮುಖವಾಗಿ ಅನುಷ್ಠಾನಗೊಳ್ಳಬೇಕಾದ 7ಅಂಶಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಕನ್ನಡ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮುಂದಾಗಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ನವೆಂಬರ್ನಲ್ಲಿ ದಕ್ಷಿಣ ಭಾರತ ಭಾಷೆಗಳ 'ದ್ರಾವಿಡ ಭಾಷಾ ಸಮಾವೇಶ'
ಸರ್ಕಾರದ ಮುಖ್ಯ ಕಾರ್ಯದರ್ಶಿಯೊಬ್ಬರು ಅಧಿಕಾರಿಗಳನ್ನು ಕನ್ನಡದಲ್ಲೇ ಮಾತನಾಡುವಂತೆ, ಕನ್ನಡದಲ್ಲೇ ಕಡತ ಮಂಡಿಸುವಂತೆ ಆಗ್ರಹಿಸುವುದರಿಂದ ಭಾಷೆಯ ಬಗೆಗಿನ ಕೀಳರಿಮೆ ಹೊಡೆದೋಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ನಿಟ್ಟಿನಲ್ಲಿ ನೈತಿಕವಾಗಿ, ಭಾವನಾತ್ಮಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಮ್ಮ ಜೊತೆ ಇರುತ್ತದೆ ಎಂದು ವಿಜಯ್ ಭಾಸ್ಕರ್ ಅವರನ್ನು ಸಿದ್ದರಾಮಯ್ಯ ಪ್ರಶಂಸಿಸಿದ್ದಾರೆ.
ಇದೇ ವೇಳೆ ಏಳು ಮಹತ್ವದ ವಿಷಯಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಸರ್ಕಾರದ ಸಚಿವಾಲಯದ ಹಂತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ರಚಿಸಿರುವ ಅನುಷ್ಠಾನ ಸಮಿತಿಯ ಚಟುವಟಿಕೆಗಳನ್ನು ಮುಖ್ಯ ಕಾರ್ಯದರ್ಶಿಗಳ ಕಾಲಕಾಲಕ್ಕೆ ಪರಾಮರ್ಶಿಸಬೇಕು, ಖಾಸಗಿ ಕ್ಷೇತ್ರಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಕಾಯ್ದೆ ರೂಪಿಸಲು 2017ರ ಬಜೆಟ್ ನಲ್ಲೇ ಘೋಷಣೆಯಾಗಿದ್ದರೂ ಅದನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಬೇಕು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅನುಷ್ಠಾನಕ್ಕೆ ಮುಂದಾಗಬೇಕು, 2017ರ ಕನ್ನಡ ಭಾಷಾ ಕಾಯ್ದೆ ಅನುಷ್ಠಾನಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಾತ್ಸಾರ ತೋರುತ್ತಿದ್ದು, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
6 ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಕರ್ತವ್ಯದಿಂದ ಬಿಡುಗಡೆ
ಅಲ್ಲದೇ ಕನ್ನಡ ನಾಮಲಕ ಅಳವಡಿಕೆಗಾಗಿ ಭಾಷಾ ನೀತಿ ಜಾತಿಗೆ ಕ್ರಮಕೈಗೊಳ್ಳಬೇಕು, ಉನ್ನತ ಶಿಕ್ಷಣದಲ್ಲಿ ಒಂದು ಭಾಷೆಯನ್ನಾಗಿ ಕನ್ನಡ ಕಲಿಕೆ, ಸರ್ಕಾರದ ಜಾಲತಾಣಗಳು ಕನ್ನಡದಲ್ಲಿರುವಂತೆ ಕ್ರಮಕೈಗೊಂಡು ಇ-ಆಡಳಿತ ಇಲಾಖೆ ಮುಖಾಂತರ ಹೆಚ್ಚು ಕನ್ನಡ ಭಾಷೆಯ ಅನುಷ್ಠಾನಕ್ಕೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.