ಬಸನಗೌಡ ಪಾಟೀಲ್ ಯತ್ನಾಳ್ಗೆ ತಿರುಗೇಟು ಕೊಟ್ಟ ಕಟ್ಟಾ ಸುಬ್ರಹ್ಮಣ್ಯ ನಾಯ್ಡು!
ಬೆಂಗಳೂರು, ಡಿ. 26: ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ. ಬಿಜೆಪಿ ಹೈಕಮಾಂಡ್ಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಕಾಗಿದ್ದಾರೆ. ಶೀಘ್ರ ನಾಯಕತ್ವ ಬದಲಾವಣೆ ಆಗುತ್ತದೆ. ರಾಜ್ಯದಲ್ಲಿ ಬೇರೆಯವರು ಸಿಎಂ ಆಗುತ್ತಾರೆಂದು ಬಹಿರಂಗವಾಗಿ ಹೇಳುವ ಮೂಲಕ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂಚಲನ ಮೂಡಿಸಿದ್ದರು. ಅವರ ಹೇಳಿಕೆ ಬಳಿಕ ಬಿಜೆಪಿಯಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿದ್ದವು. ಬಿಜೆಪಿ ಹಿರಿಯ ಶಾಸಕ ಯತ್ನಾಳ್ ಅವರ ಬಹಿರಂಗ ಹೇಳಿಕೆ ವಿರೋಧ ಪಕ್ಷಗಳ ನಾಯಕರಿಗೂ ಆರೋಪ ಮಾಡಲು ಅಸ್ತ್ರ ಕೊಟ್ಟಂತಾಗಿತ್ತು.
Recommended Video
ಇದೀಗ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತಂತೆ ಕಟ್ಟಾ ಮಹತ್ವದ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಶುರುವಾದಂತಾಗಿದೆ.
ತರಾಟೆಗೆ ತೆಗೆದುಕೊಂಡ ಕಟ್ಟಾ
ಭಾರತೀಯ ಜನತಾ ಪಕ್ಷವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಹಲವು ಸಿದ್ಧಾಂತಗಳ ಆಧಾರದಲ್ಲಿ ಇಂದಿಗೂ ಮುನ್ನೆಡೆಯುತ್ತಿದೆ. ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತ ಬಿಜೆಪಿಯಲ್ಲಿದೆ. ಈಗೀರುವಾಗ ಇಂತಹ ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ್ರೋಹದ ಕೆಲಸ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮಿತ್ ಶಾ ಕರ್ನಾಟಕ ಭೇಟಿ ಮತ್ತು ಯತ್ನಾಳ್ 'ರಾಜಕೀಯ ಸಂಕ್ರಮಣದ' ಹೇಳಿಕೆ
ಇಷ್ಟು ದಿನಗಳ ಬಳಿಕ ಕಟ್ಟಾ ನಾಯ್ಡು ಅವರು ಮತ್ತೆ ಈ ಚರ್ಚೆಗೆ ಯಾಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಜೆಪಿಯಲ್ಲಿ ಚರ್ಚೆ ಶುರುವಾಗಿದೆ.
ಕೆಟ್ಟ ಬುದ್ದಿಯ ಯತ್ನಾಳ್
ಬಸವರಾಜ ಯತ್ನಾಳ್ ಅವರು ತಮ್ಮ ವೈಯಕ್ತಿಕ ಹಿತಕ್ಕಾಗಿ ಬೀದಿಯಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಹಾಗೂ ಸ್ವಂತ ಲಾಭಕ್ಕಾಗಿ ಈ ರೀತಿಯ ಹೇಳಿಕೆಯನ್ನ ನೀಡುತ್ತಿದ್ದಾರೆ. ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಕಂಡ ಕಂಡಲ್ಲಿ ಹೇಳಿಕೆ ನೀಡುವುದು ಭಾರತೀಯ ಜನತಾ ಪಾರ್ಟಿಯ ಸಂಸ್ಕೃತಿ ಅಲ್ಲ. ಈಗಾಗಲೇ ಯತ್ನಾಳ್ ರವರು ನೀಡುತ್ತಿರುವ ಪಕ್ಷ ದ್ರೋಹದ ಹೇಳಿಕೆಗಳನ್ನ ಸದಾನಂದಗೌಡರವರು, ಈಶ್ವರಪ್ಪ ಸೇರಿದ್ದಂತೆ ಹಲವು ಬಿಜೆಪಿ ಪಕ್ಷದ ಹಿರಿಯ ನಾಯಕರು ವಿರೋಧಿಸಿದ್ದಾರೆ. ಈಗಿದ್ದರೂ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿರುವುದು ಅವರ ಕೆಟ್ಟ ಬುದ್ದಿಯನ್ನು ತೋರಿಸುತ್ತದೆ ಎಂದು ಕಟ್ಟಾ ನಾಯ್ಡು ಹೇಳಿದ್ದಾರೆ.
ಪಕ್ಷ ದ್ರೋಹದ ಕೆಲಸ
ಬಿಜೆಪಿ ಪಕ್ಷಕ್ಕಾಗಿ ಹಾಗೂ ಪಕ್ಷದ ಏಳಿಗೆಗಾಗಿ ನಾನು ಸೇರಿದಂತೆ ಹಲವು ನಾಯಕರು ಕಳೆದ ಮೂವತ್ತು ವರ್ಷಗಳಿಂದ ಶಿಸ್ತಿನ ಸಿಪಾಯಿಗಳಾಗಿ ಕೆಲಸ ನಿರ್ವಹಿಸಿದ್ದೇವೆ. ಇಂತಹ ಪಕ್ಷದ ನಾಯಕರ ವಿರುದ್ಧ 30 ವರ್ಷದಲ್ಲಿ ಎಂದಾದರೂ ನಾವು ಈ ರೀತಿಯ ಹೇಳಿಕೆ ನೀಡಿದ್ದೇವಾ? ಬಿಜೆಪಿ ಪಕ್ಷ ನಮಗೆ ಒಂದು ಕುಟುಂಬವಿದ್ದಂತೆ. ವಯಕ್ತಿಕ ಹಾಗೂ ಆಂತರಿಕವಾಗಿ ಏನೇ ಸಮಸ್ಯೆಗಳು ಇದ್ದರೆ ಪಕ್ಷದ ವರಿಷ್ಠರು ಹಾಗೂ ಪಕ್ಷದ ಚೌಕಟ್ಟಿನ ಒಳಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದ್ದನ್ನ ಬಿಟ್ಟು ದಿನ ನಿತ್ಯ ಬೀದಿ ಬೀದಿಯಲ್ಲಿ ಪಕ್ಷದ ವಿರುದ್ದ ಮಾತನಾಡುವುದು ಪಕ್ಷ ದ್ರೋಹದ ಕೆಲಸ ಎಂದಿದ್ದಾರೆ ಕಟ್ಟಾ ನಾಯ್ಡು.
ಮುಂದಿನ ಚುನಾವಣೆಗೂ ಬಿಎಸ್ವೈ ನಾಯಕತ್ವ
ಈ ರೀತಿಯ ಹೇಳಿಕೆಗಳು ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಮೊದಲೇ ಹೇಳಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೆ ನಮ್ಮ ಪ್ರಶ್ನಾತೀತ ನಾಯಕರು. ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಅವಧಿಗೂ ಯಡಿಯೂರಪ್ಪ ಅವರ ನೈತ್ರತ್ವದಲ್ಲೇ ಚುನಾವಣೆ ನಡೆಯಲಿದೆ. ಯತ್ನಾಳ್ ಅವರ ಅಸಹಾಯಕ ಸ್ಥಿತಿ ಎದ್ದು ಕಾಣುತ್ತಿದೆ, ಆದ್ದರಿಂದ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯತ್ನಾಳ್ ಅವರಂತಹ ಪ್ರಯೋಜನವಿಲ್ಲದ ಹೇಳಿಕೆಗಳಿಗೆ ಮಾಧ್ಯಮದವರು ನಯಾಪೈಸೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ.
ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ಅವರ ಬಗ್ಗೆ ನಿರ್ಧಾರ ತಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಶ್ನೆಯೇ ಇಲ್ಲ. ನಮ್ಮ ನಾಯಕ ಬಿ.ಎಸ್ ಯಡಿಯೂರಪ್ಪ ಅವರೇ 5 ವರ್ಷ ಅಧಿಕಾರ ಪೂರ್ಣಗೊಳಿಸಲಿದ್ದಾರೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ ನೀಡಿದ್ದಾರೆ.