ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಭವನ ಉದ್ಘಾಟನೆಗೆ ಸಿದ್ಧ
ಬೆಂಗಳೂರು, ಜನವರಿ 11: ಕನ್ನಡ ಭಾಷೆ, ಕಲೆ, ಜಾನಪದ ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.
ಕನ್ನಡಿಗರ ಆಶೋತ್ತರಗಳಿಗೆ ಪೂರಕವಾಗಿ ಉದಯವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಪೂರೈಸಿದ ಪೂರೈಸಿದ ಹಿನ್ನೆಲೆಯಲ್ಲಿ, ಅದರ ಸವಿ ನೆನಪಿಗಾಗಿ ನಿರ್ಮಿಸುತ್ತಿರುವ ಶತಮಾನೋತ್ಸವ ಭವನದ ಕಾಮಗಾರಿ ಮುಕ್ತಾಯಗೊಂಡಿದ್ದು, ಜನವರಿ 22 ರಂದು ಸಿಎಂ ಉದ್ಘಾಟಿಸಲಿದ್ದಾರೆ.
ಕನ್ನಡಿಗರೇ ಉದ್ಯೋಗ ಬೇಕೆ? ಕಸಾಪ ವೆಬ್ ತಾಣಕ್ಕೆ ಭೇಟಿ ಕೊಡಿ
ರಾಜ್ಯ ಸರ್ಕಾರದ ಅನುದಾನದಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂಭಾಗದಲ್ಲಿ ಮೂರು ಅಂತಸ್ತಿನಲ್ಲಿ ಈ ಸ್ಮಾರಕ ಭವನ ನಿರ್ಮಾಣಗೊಂಡಿದೆ. ಈ ಕಟ್ಟಡದ 3 ನೇ ಮಹಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಭಾಂಗಣಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಲು ಪರಿಷತ್ತಿನ ಸದಸ್ಯರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗಿದೆ.
ಪುಂಡಲೀಕ ಹಾಲಂಬಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆ 13,398 ಚದರ ಅಡಿಯ ಈ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆದಿತ್ತು. 2014 ಜೂನ್17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡು ವರ್ಷದೊಳಗೆ ಕಾಮಗಾರಿ ಮುಕ್ತಾಯವಾಗಿ ಕಟ್ಟಡ ಉದ್ಘಾಟನೆ ಆಗಲು ಯೋಜನೆ ರೂಪಿಸಲಾಗಿತ್ತು.
ಆದರೆ ಸಭಾಂಗಣದ ವಿನ್ಯಾಸ ಸೇರಿದಂತೆ ಕಟ್ಟಡದ ಕೆಲ ಭಾಗದ ವಿನ್ಯಾಸದಲ್ಲಿ ಬದಲಾವಣೆ ಆದ ಕಾರಣ, ಕಾಮಗಾರಿಯನ್ನು ಮತ್ತಷ್ಟು ಮುಂದೂಡಲಾಗಿತ್ತು. 2017 ರ ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವೇಳೆಯೇ ಈ ಶತಮಾನೋತ್ಸವ ಭವನ ಉದ್ಘಾಟನೆಗೆ ಪರಿಷತ್ತು ಅಗತ್ಯ ಸಿದ್ಧತೆ ನಡೆಸಿತ್ತು.ಆದರೆ ಉದ್ಘಾಟನೆಗೆ ಮುಖ್ಯಮಂತ್ರಿ ಅವರ ದಿನಾಂಕ ಸಿಗದೆ ಎರಡು ತಿಂಗಳುಗಳ ಕಾಲ ಮುಂದೂಡಲಾಯಿತು.
ಏನೇನು ಸೌಲಭ್ಯ: ನೆಲಮಹಡಿಯಲ್ಲಿ ಗ್ರಂಥಾಲಯ, ಕಚೇರಿ, ಒಂದನೇ ಮಹಡಿಯಲ್ಲಿ 6 ಅತಿಥಿ ಗೃಹ, 2 ನೇ ಮಹಡಿಯಲ್ಲಿ ಕ್ಯಾಂಟೀನ್, ಪ್ರಸಾದನ ಕೊಠಡಿ, ಮೂರನೇ ಮಹಡಿಯಲ್ಲಿ ಅಕ್ಕಮಹಾದೇವಿ ಸಭಾಂಗಣ ಗ್ರೀನ್ ರೂಂ, ಮಂದಿ ಸಾಗುವ 2 ಲಿಫ್ಟ್, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ, ಕೂರಲು ಹೊರಗೆ ಬೆಂಚ್ ಗಳ ಸೌಲಭ್ಯ ಕಲ್ಪಿಸಲಾಗಿದೆ.