ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ: ಸಿಎಂಗೆ ಪತ್ರಕರ್ತರ ಸಂಘ ಪತ್ರ
Recommended Video
ಬೆಂಗಳೂರು, ಮೇ 28: ಕನ್ನಡ ದಿನ ಪತ್ರಿಕೆ 'ವಿಶ್ವವಾಣಿ'ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಖಂಡಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದೆ.
ವಿಶ್ವವಾಣಿ ಪತ್ರಿಕೆಯಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಕುರಿತು ವರದಿಯೊಂದು ಪ್ರಕಟಿತವಾಗಿತ್ತು. ಇದು ಸುಳ್ಳು ಸುದ್ದಿ, ಉದ್ದೇಶಪೂರಿತವಾಗಿ ತೇಜೋವಧೆಗೆಂದು ಮಾಡಿದ ಸುದ್ದಿ ಎಂದು ಆರೋಪಿಸಿ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಪ್ರದೀಪ್ ಕುಮಾರ್ ಅವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಜೆಡಿಎಸ್ ಮಾಧ್ಯಮದ ಮೇಲೆ ಸಿಟ್ಟು ತೀರಿಸಿಕೊಳ್ಳುವುದು ದುರದೃಷ್ಟಕರ
ಈ ಕುರಿತು ಪತ್ರ ಬರೆದಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು, ದೂರು ದಾಖಲಿಸಿರುವುದನ್ನು ಖಂಡಿಸಿದ್ದು, 'ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ, ಈ ಬಗ್ಗೆ ಪುನಃ ಪರಿಶೀಲನೆ ಮಾಡಬೇಕು' ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದೆ. ಈ ಬೆಳವಣಿಗೆ ಕುರಿತಂತೆ ರಾಜಕೀಯ, ಸಾಮಾಜಿಕ ಮತ್ತು ಸಾರ್ವಜನಿಕ ವಲಯದಲ್ಲಿಯೂ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿದೆ. ತುರ್ತು ಪರಿಸ್ಥಿತಿ ಹೇರಿದಂತಾಗಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.
'ದ್ವೇಷದ ಕಿಚ್ಚಿನ ನಡೆ ಒಳ್ಳೆಯದಲ್ಲ'
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷದ, ಕಿಚ್ಚಿನ ನಡೆ ಒಳ್ಳೆಯದಲ್ಲ. ಮಾಧ್ಯಮ ಮತ್ತು ಸರ್ಕಾರದ ನಡುವೆ ಸೌಹಾರ್ದ ವಾತಾವರಣ ಇರುವಂತಾಗಲು ನಾಡಿನ ಮುಖ್ಯಮಂತ್ರಿಯಾಗಿ ತಾವು ಪ್ರಜ್ಞಾಪೂರ್ವಕವಾಗಿ ಸಂಯಮದ ಹೆಜ್ಜೆ ಇಡಬೇಕು ಎಂದು ಆಶಿಸುತ್ತೇನೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಸಿಎಂಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಸಂವಾದಕ್ಕೂ ಸಿದ್ಧವಿದ್ದೇವೆಂದ ಸಂಘ
ಈ ಪ್ರಕರಣದಿಂದಾಗಿ ಕದಡಿದ ವಾತಾವಾರಣ ತಿಳಿಗೊಳಿಸಲು, ತಾವು ಇಚ್ಚಿಸಿದಲ್ಲಿ ಸಂವಾದಕ್ಕೂ ಸಿದ್ಧವಿದ್ದೇವೆ ಎಂದು ಪತ್ರಕರ್ತರ ಸಂಘವು ಸಂಧಾನದ ಬೇಡಿಕೆಯನ್ನು ಮುಂದಿಟ್ಟಿದೆ.
ಪಕ್ಷದ ಶಾಸಕರು, ಮುಖಂಡರಿಗೆ ಜೆಡಿಎಸ್ ಕಟ್ಟನಿಟ್ಟಿನ ಆದೇಶ
|
ರಾಜ್ಯ ಬಿಜೆಪಿಯಿಂದ ಖಂಡನೆ
ವಿಶ್ವೇಶ್ವರ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ರಾಜ್ಯ ಬಿಜೆಪಿ ಖಂಡಿಸಿದ್ದು, ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಸಿಟಿ ರವಿ, ತೇಜಸ್ವಿನಿ ಅನಂತ್ಕುಮಾರ್ ಅವರುಗಳು ಈ ಬಗ್ಗೆ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರ ಭಟ್ ಮೇಲೆ ಹೊರಿಸಿರುವ ಆರೋಪಗಳು
ವಿಶ್ವೇಶ್ವರ ಭಟ್ ಅವರ ವಿರುದ್ಧ, ಮಾನಹಾನಿಗೆ ಶಿಕ್ಷೆ (ಐಪಿಸಿ 500) ಸಂಬಂಧಿಸಿದ ವಿಷಯಗಳ ಮುದ್ರಣ (ಐಪಿಸಿ 501) ಜೀವ ಬೆದರಿಕೆ (506), ಉದ್ದೇಶಪೂರ್ವಕ ಶಾಂತಿ ಕದಡುವುದು (504), ನಂಬಿಕೆ ದ್ರೋಹ ಹಾಗೂ ವಂಚನೆ (406,420), ನಕಲಿ ದಾಖಲೆ ಸೃಷ್ಟಿ (468), ಮಾನಹಾನಿ (499) ಪ್ರಕರಣಗಳನ್ನು ದಾಖಲಿಸಲಾಗಿದೆ.