'ದಲಿತ ಸಿಎಂ' ಕನಸು ಕಾಣುವವರು ಹುಚ್ಚರು: ಎ.ನಾರಾಯಣ ಸ್ವಾಮಿ
ಬೆಂಗಳೂರು, ಮೇ 16: ರಾಜ್ಯದಲ್ಲಿ ಕೇವಲ ರಾಜಕೀಯ ಕಾರಣಗಳಿಗಾಗಿ ಮಾತ್ರ ದಲಿತ ಮುಖ್ಯಮಂತ್ರಿಯ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಈ ಕುರಿತು ಕನಸು ಕಾಣುವವರು ಹುಚ್ಚರು ಎಂದು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ದಲಿತ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಬೇಸರವಿದೆ. ರಾಜ್ಯದಲ್ಲಿ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ದಲಿತರ ಬೇಡಿಕೆ ಬಗ್ಗೆ ಯಾವುದೇ ಪಕ್ಷದಲ್ಲಿ ಗಂಭೀರವಾದ ಚಿಂತನೆ ನಡೆದಿಲ್ಲ,'' ಎಂದರು.
"ಯಾವುದೇ ಪಕ್ಷದವರು ದಲಿತ ನಾಯಕನನ್ನು ಸಿಎಂ ಮಾಡಲಿದ್ದಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿಲ್ಲ. ಕರ್ನಾಟಕಕ್ಕೆ ದಲಿತ ಮುಖ್ಯಮಂತ್ರಿ ಎಂಬುದು ಕನಸಿನ ಮಾತು,'' ಎಂದು ನಾರಾಯಣ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
"ಈಗಾಗಲೇ ನಮಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಸ್ಥಿತಿ ಏನಾಯಿತು ಎಂಬುದು ತಿಳಿದಿದೆ. ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದಾಗ ಯಾರು ಕೂಡ ಅವರನ್ನು ತಡೆಯಲಿಲ್ಲ. ಅಲ್ಲದೇ ರಾಜೀನಾಮೆ ವಾಪಸು ಪಡೆದು, ಸರಕಾರದಲ್ಲಿ ಸಚಿವರಾಗಿ ಮುಂದುವರಿಯುವಂತೆ ಯಾರು ಅವರ ಮನವೊಲಿಸುವ ಯತ್ನಕ್ಕೂ ಹೋಗಲಿಲ್ಲ,'' ಎಂದು ಹೇಳಿದರು.
"ರಾಜ್ಯದಲ್ಲಿ ದಲಿತ ನಾಯಕರನ್ನು ಯಾವ ರೀತಿ ಮೂಲೆಗುಂಪು ಮಾಡಲಾಗುತ್ತಿದ್ದೆ ಎಂಬುದಕ್ಕೆ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕ ಜಿ.ಪರಮೇಶ್ವರ್ ಅವರೇ ಉದಾಹರಣೆ. ಮಲ್ಲಿಕಾರ್ಜುನ ಖರ್ಗೆ ಅವರು ಒಂಬತ್ತು ಬಾರಿ ಸಂಸದ, ಶಾಸಕ ಆಗಿದ್ದವರು. ಜತೆಗೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೂ ಕೂಡ ಅವರನ್ನು ಸಿಎಂ ಸ್ಥಾನ ಹೊಂದದಂತೆ ತಪ್ಪಿಸಲಾಯಿತು. ಜಿ. ಪರಮೇಶ್ವರ್ ಅವರು ಎಲ್ಲಿ ಮುಂದೆ ಸಿಎಂ ಆಗಬಹುದೋ ಎಂದು 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲೇ ಅವರು ಸೋಲುವಂತೆ ತಂತ್ರ ಹೆಣೆಯಲಾಯಿತು. ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಪರಿಸ್ಥಿತಿ ಹೀಗಿರುವಾಗ, ದಲಿತ ಸಿಎಂ ಎಂದು ಕನಸು ಕಾಣುವವರು ಹುಚ್ಚರು ಎಂದು ನನಗೆ ತೋರುತ್ತದೆ,'' ಎಂದು ಹತಾಶೆ ವ್ಯಕ್ತಪಡಿಸಿದರು.
Recommended Video