ಭ್ರಷ್ಟ ಅಧಿಕಾರಿಗಳ ಹಿಂದೆ ಮಹಿಳಾ ಬ್ಯಾಂಕರ್ ಕೈವಾಡ?
ಈ 'ಪ್ರಭಾವಿ' ಮಹಿಳೆಯ ಸಹಾಯದಿಂದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರಿಗೆ ಸೇರಿದ ಕೋಟ್ಯಂತರ ಹಳೆ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾಯಿಸಲಾಯಿತು. ಅಂದ ಹಾಗೆ, ಆ ಮಹಿಳೆ ಯಾರು? ಯಾವ ಐಪಿಎಸ್ ಅಧಿಕಾರಿಯ ಪತ್ನಿ?
ಬೆಂಗಳೂರು, ಡಿಸೆಂಬರ್ 21 : ಆದಾಯ ತೆರಿಗೆ ಇಲಾಖೆಯಿಂದ ದಾಳಿಗೊಳಗಾಗಿ ಕಾನೂನಿನ ಬಲೆಯಲ್ಲಿ ಸಿಲುಕಿರುವ ಇಬ್ಬರು ತಿಮಿಂಗಲುಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಎಂಬ 'ಭ್ರಷ್ಟ' ಸರಕಾರಿ ಅಧಿಕಾರಿಗಳ ವಿಚಾರಣೆ ಇದೀಗ ರೋಚಕ ತಿರುವನ್ನು ಪಡೆದಿದೆ.
ಡೆಪ್ಯುಟೇಷನ್ ಮೇಲಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಹಿಳಾ ಅಧಿಕಾರಿಯೊಬ್ಬರು ಈ ಸರಕಾರಿ ಅಧಿಕಾರಿಗಳಿಬ್ಬರು ಎರಡು ಸಾವಿರ ಹೊಸ ನೋಟುಗಳನ್ನು ಬ್ಯಾಂಕಿನಿಂದ ಪಡೆದುಕೊಳ್ಳಲು ನೇರವಾಗಿ ಸಹಾಯ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯ ಹೆಂಡತಿಯಾಗಿರುವ ಇವರನ್ನು ಸಿಬಿಐ ವಿಚಾರಣೆಗೆ ಗುರಿಯಾಗಿಸುವ ಸಾಧ್ಯತೆಯಿದೆ. ಇವರ ವಿರುದ್ಧ ಖಾಸಗಿ ಆನ್ ಲೈನ್ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಈ ಮಹಿಳಾ ಬ್ಯಾಂಕರ್ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್! [ನೋಟು ನಿಷೇಧ ನಂತರದ 9 ಮಹತ್ವದ ಬದಲಾವಣೆಗಳು!]
ಈ 'ಪ್ರಭಾವಿ' ಮಹಿಳೆಯ ಸಹಾಯದಿಂದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರಿಗೆ ಸೇರಿದ ಕೋಟ್ಯಂತರ ಹಳೆ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾಯಿಸಲಾಯಿತು. ಇದು ಗಮನಕ್ಕೆ ಬಂದ ನಂತರವೇ ಈ ಭ್ರಷ್ಟರಿಬ್ಬರ ಮೇಲೆ ಐಟಿ ದಾಳಿ ನಡೆದಿದ್ದು.
ಅಪನಗದೀಕರಣ ನಡೆದ ನಂತರ ಕರ್ನಾಟಕದಲ್ಲಿ ನಡೆದ ಮೊಟ್ಟಮೊದಲ ಅತೀದೊಡ್ಡ ಐಟಿ ದಾಳಿಯಿದು. ಐಪಿಎಸ್ ಅಧಿಕಾರಿಯ ಹೆಂಡತಿಯ ಸಂಪೂರ್ಣ ಸಹಕಾರದಿಂದ ಹಳೆ ಹಣವನ್ನು ಬದಲಾಯಿಸಲಾಗಿದೆ. ಆಘಾತದ ಸಂಗತಿಯೆಂದರೆ, ಇದಕ್ಕೆ ಯಾವುದೇ ದಾಖಲೆಯಿಲ್ಲ. ಅಲ್ಲದೆ, ಕಮಿಷನ್ ಆಧಾರದ ಮೇಲೆ ಹಣ ಬದಲಾವಣೆ ನಡೆದಿದೆ. [ನೋಟ್ ಬ್ಯಾನ್ ನಂತರ, ಕರ್ನಾಟಕದಲ್ಲಿ 600 ಕೋಟಿ ರು ವಶ]
ನಾಲ್ವರು ಐಪಿಎಸ್, ಇಬ್ಬರು ಐಎಸ್ ಅಧಿಕಾರಿಗಳ ಮೇಲೆ ಕಣ್ಣು
ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ಆಸ್ತಿ ಗಳಿಸಿರುವ ಆರೋಪ ಹೊತ್ತಿರುವ ನಾಲ್ವರು ಐಪಿಎಸ್ ಅಧಿಕಾರಿಗಳು ಮತ್ತು ಇಬ್ಬರು ಐಎಎಸ್ ಅಧಿಕಾರಿಗಳಿಗೆ ಸಿಬಿಐ ಈಗಾಗಲೆ ನೋಟೀಸ್ ಜಾರಿ ಮಾಡಿದ್ದು, ಇಬ್ಬರು ಕಾಂಟ್ರಾಕ್ಟರ್ ಗಳ ಸಿಕ್ಕ ಭಾರೀ ಮೊತ್ತದ ಹಣಕ್ಕೂ ಇವರಿಗೂ ಸಂಬಂಧವಿದೆ ಎಂದು ಶಂಕಿಸಲಾಗಿದೆ.