ಬೆಳಗಾವಿಯ ವಿಟಿಯು ವಿಭಜನೆಗೆ ಶಿಕ್ಷಣ ತಜ್ಞರಿಂದ ಒಕ್ಕೊರಲ ವಿರೋಧ
ಬೆಂಗಳೂರು, ಫೆಬ್ರವರಿ 14 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಗುರುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ರಾಜ್ಯ ಸರಕಾರದ ನಿಲುವಿನ ಕುರಿತು ಸಮಾಲೋಚನಾ ಸಭೆ ಆಯೋಜಿಸಲಾಗಿತು.
ಶಿಕ್ಷಣ ತಜ್ಞರಾದ ಸಂಜೀವ ಕುಬಕಡ್ಡಿ ಈ ವಿಷಯವನ್ನು ಪ್ರಸ್ತಾಪಿಸಿದರು. ವಿಟಿಯುನ ಪ್ರಥಮ ಉಪಕುಲಪತಿಗಳಾದ ಪ್ರೊ. ರಾಜಶೇಖರಯ್ಯರವರು ಮಾತನಾಡಿ ಈ ವಿಭಜನೆ ಒಂದು ಅವೈಜ್ಞಾನಿಕ ನಿಲುವು. ವಿಟಿಯು ರಾಜ್ಯದ ತಾಂತ್ರಿಕ ಶಿಕ್ಷಣದಲ್ಲಿ ಒಳ್ಳೆಯ ಹೆಸರು ಮಾಡಿದೆ. ಅಲ್ಲದೇ ರಾಜ್ಯದಲ್ಲಿ 5 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳಾಗುತ್ತಿಲ್ಲ. ಬೇಡಿಕೆ ಇಲ್ಲದ ಮತ್ತು ಅನಾವಶ್ಯಕವಾಗಿ ವಿಟಿಯುವನ್ನು ವಿಭಜಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.
ಕುಮಾರಸ್ವಾಮಿ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?
ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ ಅವರು ಮಾತನಾಡಿ, ಸರ್ಕಾರ ಶಿಕ್ಷಣವನ್ನು ರಾಜಕೀಯ ದೃಷ್ಟಿಕೋನದಿಂದ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಇದು ದೌರ್ಭಾಗ್ಯ, ಇಂದು ಶಿಕ್ಷಣದ ಬಗ್ಗೆ ತಿರ್ಮಾನ ತೆಗೆದುಕೊಳ್ಳಬೇಕಿರುವ ಅಧ್ಯಾಪಕ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಜೊತೆ ಯಾವುದೇ ಚರ್ಚೆ ನಡೆಸದೇ ವಿಟಿಯು ವಿಭಜಿಸುವ ಘೋಷಣೆ ಮಾಡಿರುವುದರ ಹಿಂದೆ ಯಾವುದೋ ಕೈವಾಡವಿರಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಭೆಯಲ್ಲಿ ವಿಧಾನ ಪರಿಷತ್ನ ಸದಸ್ಯರುಗಳಾದ ಹನುಮಂತ ನಿರಾಣಿ ಅವರು, ಹಾಸನಕ್ಕೆ ಹೆಚ್ಚು ಸೌಲಭ್ಯ ಕೋಡುವುದಾದರೆ ಬೇರೆಡೆ ಏಕೆ ಕೇಳಿಲ್ಲ ಎಂದು ಪ್ರಶ್ನಿಸಿದರು. ಪ್ರೋ. ಎಸ್.ವಿ. ಸಂಕನೂರ ಅವರು ಇದಕ್ಕೆ ಧ್ವನಿಗೂಡಿಸಿ ಯಾವುದೇ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸದೆ, ದಿಢೀರ್ ಘೋಷಣೆ ಮಾಡಿರುವುದು ಏಕೆ? ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುವ ಮೊದಲು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಇಲಿ ಹಿಡಿಯುತ್ತಿದ್ದ ಸಮುದಾಯದ ಬದುಕನ್ನು ಬಿಲದಿಂದ ಎತ್ತಿದ ನಿವೃತ್ತ ಅಧಿಕಾರಿ
ಪ್ರಾಧ್ಯಾಪಕರ ಪ್ರತಿನಿಧಿಗಳಾಗಿ ಆಗಮಿಸಿದ್ದ ಡಾ. ಶ್ರೀನಿವಾಸ ಬಳ್ಳಿ ಅವರು ಈ ವಿಭಜನೆ ಮಾಡಲು ಯಾವ ಸಮಿತಿಯ ಶಿಫಾರಸ್ಸಿದೆ ಮತ್ತು ಇದು ಉತ್ತರ ಕರ್ನಾಟಕದಲ್ಲಿರುವ ಒಂದು ವ್ಯವಸ್ಥಿತ ವಿಶ್ವವಿದ್ಯಾಲಯವನ್ನು ವಿಭಜಿಸಿ ಅಲ್ಲಿನ ಜನರಿಗೆ ಅನ್ಯಾಯ ವೆಸಗುವಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ವಿಟಿಯು ಸಿಂಡಿಕೇಟ್ ಸದಸ್ಯರಾದ ಸುರೇಶರವರು ಮಾತನಾಡಿ, ಈಗಾಗಲೇ ಹಾಸನದಲ್ಲಿ ಒಂದು ಅನುದಾನಿತ ಮತ್ತು ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿವೆ. ಇನ್ನು ಅಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಅದರ ಗತಿ ಏನಾಗಬಹುದೆಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂಜರಿಕೆ:ಕಾರಣ
ಇದರ ಜೊತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೃಷ್ಣ ವೆಂಕಟೇಶ್, ಡಾ. ಕಿವಡಿ ಅವರು ಇದಕ್ಕೆ ದ್ವನಿಗೂಡಿಸಿದರು. ಹಾಗೂ ವಿಧಾನಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಅವರು ಮಾತನಾಡಿ, ಉತ್ತರ ಕರ್ನಾಟಕದ ಬಹಳ ಒಳ್ಳೆಯ ಸಂಸ್ಥೆ ವಿಟಿಯು. ಇದನ್ನು ಪೂರ್ವಾಪರ ಚಿಂತನೆ ಇಲ್ಲದೆ ವಿಭಜಿಸುತ್ತಿರುವುದು ಖಂಡನೀಯ. ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆಯ ತಿರ್ಮಾನಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ವಿಟಿಯು ಬೆಳಗಾವಿಯಲ್ಲಿ ಸ್ಥಾಪನೆ ಆಗುವುದರ ಹಿಂದೆ ಬಾಳೆಕುಂದ್ರಿ ಸಮಿತಿಯ ವರದಿ ಇದೆ. ಅನೇಕ ತಿಂಗಳುಗಳ ಚರ್ಚೆಯ ಫಲವಾಗಿ ವಿಟಿಯು 1994ರಲ್ಲಿ ಸ್ಥಾಪನೆಯಾಯಿತು. ಆದರೆ ಇಂದು ಕೇವಲ ತಮ್ಮ ಇಚ್ಛೆಯಂತೆ ಯಾರನ್ನು ಕೇಳದೇ ವಿಶ್ವವಿದ್ಯಾಲಯವನ್ನು ವಿಭಜಿಸುವುದು ಸರಿಯಲ್ಲ ಎಂದು ತಿಳಿಸಿದರು.
ಈ ಸಭೆಯಲ್ಲಿ ಅನೇಕ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು ಹಾಗೂ ಯಾವುದೇ ಕಾರಣಕ್ಕೂ ಸರ್ಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡಬಾರದು ಎಂಬ ಒಮ್ಮತದ ತೀರ್ಮಾನಕ್ಕೆ ಬಂದಿತು. ಅಂತ್ಯದಲ್ಲಿ ರಾಜ್ಯ ಕಾರ್ಯದರ್ಶಿ ಈ ನಿರ್ಣಯವನ್ನು ಪರಿಗಣಿಸಿ ರಾಜ್ಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಆಂದೋಲನ ರೂಪಿಸುವುದಾಗಿ ತಿಳಿಸಿ ಎಲ್ಲರಿಗೂ ವಂದಿಸಿದರು.