'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'
ಬೆಂಗಳೂರು, ಜುಲೈ.23: ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ವೆಂಟಿಲೇಟರ್ ಖರೀದಿಸಿದರೆ ಸರ್ಕಾರ ಅದರಲ್ಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Recommended Video
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಕ್ಷಿ ಕೊಡಿ ಅಭಿಯಾನ ಆರಂಭಿಸಿದ್ದು, ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
'ಕೊವಿಡ್ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರದ ಸುವಾಸನೆ'
ಸರ್ಕಾರದಿಂದ ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಪ್ರಧಾನಮಂತ್ರಿ ಸಹಾಯ ನಿಧಿಯಿಂದ ಇಡೀ ದೇಶಕ್ಕೆ 50,000 ವೆಂಟಿಲೇಟರ್ ಗಳನ್ನು 2,000 ಕೋಟಿ ರೂಪಾಯಿ ಖರ್ಚು ಮಾಡಿ ಖರೀದಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ದುಬಾರಿ ಹಣವನ್ನು ನೀಡಿ ವೆಂಟಿಲೇಟರ್ ಖರೀದಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
4 ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿದ ಕೇಂದ್ರ ಸರ್ಕಾರ:
ಕೇಂದ್ರ ಸರ್ಕಾರವು ಒಂದೊಂದು ವೆಂಟಿಲೇಟರ್ ಗೆ 4 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರವು 100 ವೆಂಟಿಲೇಟರ್ ಗಳನ್ನು ಖರೀದಿಸಿದ್ದು, ಒಂದು ವೆಂಟಿಲೇಟರ್ ಗೆ 4.78 ಲಕ್ಷ ರೂಪಾಯಿ ನೀಡಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್.22ರಂದು ಒಂದು ವೆಂಟಿಲೇಟರ್ ಗೆ 5.60ಲಕ್ಷ ನೀಡಿದ್ದಾರೆ. ಎರಡನೇ ಬಾರಿ ಒಂದು ವೆಂಟಿಲೇಟರ್ ತಲಾ 12.36 ಲಕ್ಷ ನೀಡಿದ್ದಾರೆ. ಮೂರನೇ ಬಾರಿ 18.23 ಲಕ್ಷ ರೂಪಾಯಿ ನೀಡಿ ವೆಂಟಿಲೇಟರ್ ಖರೀದಿಸಿದ್ದಾರೆ. ಹೀಗೆ ಇರುವಾಗ ಕರ್ನಾಟಕದಲ್ಲಿ ವೆಂಟಿಲೇಟರ್ ಗಳ ಖರೀದಿ ಪಾರದರ್ಶಕವಾಗಿ ನಡೆದಿದೆ ಎಂದು ನಿಮಗೆ ಅನ್ನಿಸುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
'330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು'
ಬೇರೆ ರಾಜ್ಯಗಳಲ್ಲಿ ಖರೀದಿಸಿದ ವೆಂಟಿಲೇಟರ್ ಬೆಲೆಗೂ ರಾಜ್ಯದಲ್ಲಿ ಖರೀದಿಸಿದ ವೆಂಟಿಲೇಟರ್ ಗಳ ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸವಿದೆ. ಇದನ್ನು ಭ್ರಷ್ಟಾಚಾರ ಎಂದು ಕರೆಯದೇ ಏನು ಎನ್ನಬೇಕು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.