ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ರಾಜ್ಯದಲ್ಲಿ ಬಸ್ ಸಂಚಾರ ಸ್ಥಗಿತ
ಬೆಂಗಳೂರು,ಡಿಸೆಂಬರ್ 12: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಎರಡನೇ ದಿನ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡನೇ ದಿನವೂ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೋರಾಟದ ಹಾದಿ ಮತ್ತಷ್ಟು ತೀವ್ರ ಗೊಳಿಸಲು ಸಾರಿಗೆ ನೌಕರರು ಸಭೆ ಸೇರಿ ಚರ್ಚೆ ನಡೆಸುತ್ತಿದ್ದಾರೆ. ಬಸ್ ಸೇವೆ ಆರಂಭಿಸಲು ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ.
ಸಾರಿಗೆ ನೌಕರರು ಕೆಲಸ ಬಹಿಷ್ಕರಿಸುವ ಮೂಲಕ ಕೈಗೊಂಡಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು ಪರದಾಡುತ್ತಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಸಲಾಗೇ ಜನ ಸಾಮಾನ್ಯರು ಪರದಾಡುವಂತಾಗಿದೆ. ಸಾರಿಗೆ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸದ ಹೊರತು ಹೋರಾಟ ಕೈ ಬಿಡಲ್ಲ ಎಂದು ತೀರ್ಮಾನಿಸಿರುವ ಕಾರ್ಮಿಕ ಮುಖಂಡರು ರೈತ ಮುಖಂಡ ಕೋಡಿಹಳ್ಳಿ ಚಂಧ್ರಶೇಖರ್ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಮುಂದಿನ ಹೋರಾಟದ ರೂಪರೇಷಗಳ ಬಗ್ಗೆ ಚರ್ಚೆ ನಡೆಯಲಿದ್ದು, ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಬಗ್ಗೆ ಚರ್ಚ ನಡೆಯಲಿದೆ.
ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ,ಕೆಲವು ಬಸ್ಗಳ ಸಂಚಾರ
ಬಲವಂತ ಬಿಎಂಟಿಸಿ ಬಸ್ ಸಂಚಾರ:
ಬಿಎಂಟಿಸಿ ಬಸ್ ಸಂಚಾರ ವಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇಂದು ಬೆಳಗ್ಗೆ ಪೊಲೀಸರ ಬಿಗಿ ಭದ್ರತೆಯಲ್ಲಿ ಮೂರು ಬಿಎಂಟಿಸಿ ಬಸ್ ಗಳನ್ನು ಮೆಜೆಸ್ಟಿಕ್ ನಿಲ್ದಾಣದಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೆಜೆಸ್ಟಿಕ್ ನಿಂದ ಸುಮ್ಮನಹಳ್ಳಿಗೆ ಎರಡು ಬಸ್ ಹಾಗೂ ಜಂಬು ಸವಾರಿ ದಿನ್ನೆಗೆ ಒಂದು ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಅಧಿಕಾರಿಗಳೇ ಬಸ್ ಚಾಲನೆ ಮಾಡುತ್ತಿದ್ದಾರೆ. ಖಾಸಗಿ ಚಾಲಕರ ನೆರವು ಪಡೆದು ಬಿಎಂಟಿಸಿ ಬಸ್ ಸಂಚಾರ ಆರಂಭಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.
ಕಾರ್ಮಿಕರ ಆಕ್ರೋಶ:
ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಸಾರಿಗೆ ಅಧಿಕಾರಿಗಳ ಬಗ್ಗೆ ಕಾರ್ಮಿಕರು ಮೆಜೆಸ್ಟಿಕ್ ಬಳಿ ಆಕ್ರೋಶ ವ್ಯಕ್ತಪಡಿಸಿದರು. ಒತ್ತಾಯ ಪೂರ್ವಕವಾಗಿ ಬಸ್ ಸಂಚಾರ ಮಾಡುತ್ತಿದ್ದಾರೆ. ನಮ್ಮ ಸಾರಿಗೆ ಯಾವ ಕಾರ್ಮಿಕ ಕೂಡ ಬಸ್ ಚಾಲನೆಗೆ ಬಂದಿಲ್ಲ. ಟಿಟಿಎಂಸಿ ಹಾಗೂ ಡಿಪೋಗಳಲ್ಲಿರುವ ಅಧಿಕಾರಿಗಳೇ ಬಸ್ ಚಾಲನೆ ಮಾಡುತ್ತಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಸ್ ಚಾಲನೆ ಮಾಡುತ್ತಿದ್ದು, ನಮ್ಮ ಬೇಡಿಕೆ ಈಡೇರುವ ವರೆಗೂ ಯಾರೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಾರಿಗೆ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ವರೆಗೂ ಅನಿರ್ಧಿಷ್ಟ ಅವಧಿ ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾತಿಗೆ ಕಾದು ಕುಳಿತ ಸಚಿವರು:
ಇನ್ನು ರಾಜ್ಯದಲ್ಲಿ ಬಿಎಂಟಿಸಿ ಹಾಗೂ ಕೆಎಸ್ ಆರ್ಟಿಸಿ ನಿಗಮಗಳ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸಮಸ್ಯೆ ಇತ್ಯರ್ಥ ಪಡಿಸಲು ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಮುಖಂಡರನ್ನು ಸಚಿವ ಲಕ್ಷ್ಮಣ ಸವದಿ ಮಾತುಕತೆಗೆ ಆಹ್ವಾನಿಸಿದ್ದಾರೆ. ಹೀಗಾಗಿ ತನ್ನೆಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಖಾಸಗಿ ನಿವಾಸದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಿನ್ನೆ ನಿಗದಿಯಂತೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಸಾರಿಗೆ ನೌಕರರ ಮುಷ್ಕರ ತಾರಕ್ಕೇರಿವ ಕಾರಣ ಸಭೆ ರದ್ದು ಗೊಳಿಸಿ ನೌಕರರ ಮುಖಂಡರ ಜತೆ ಮಾತುಕತೆಗೆ ಕಾದು ಕುಳಿತಿದ್ದಾರೆ. ಇನ್ನು ಅನಿರ್ಧಿಷ್ಟ ಅವಧಿ ಮುಷ್ಕರಕ್ಕೆ ನೌಕರರು ಮುಂದಾದರೆ ಎಸ್ಮಾ ಜಾರಿ ಹಾಗೂ ಖಾಸಗಿ ಚಾಲಕರನ್ನು ಬಳಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸವದಿ ಚರ್ಚೆ ಯಲ್ಲಿ ತೊಡಗಿದ್ದಾರೆ.
ಹೆಚ್ಚುವರಿ ಮೆಟ್ರೋ ಸಂಚಾರ:
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಮೆಟ್ರೋ ನಿಗಮ ಹೆಚ್ಚುವರಿ ಮೆಟ್ರೊ ರೈಲು ಸಂಚಾರ ಆರಂಭಿಸಿದೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಐವತ್ತು ರೈಲು ಸಂಚಾರ ಆರಂಭಿಸಿದೆ. ನಿತ್ಯ ಜನ ದಟ್ಟಣೆ ಸಮಯದಲ್ಲಿ ಎರಡು ನಿಮಿಷಕ್ಕೆ ಒಂದು ಮೆಟ್ರೋ ರೈಲು ಓಡಿಸುತ್ತಿತ್ತು. ಉಳಿದ ಸಮಯದಲ್ಲಿ ಪ್ರತಿ ಐದ ರಿಂದ ಏಳು ನಿಮಿಷಕ್ಕೆ ರೈಲು ಸಂಚಾರ ಮಾಡಲಾಗುತ್ತಿತ್ತು. ಪ್ರತಿ ನಿತ್ಯ ಎರಡು ಮಾರ್ಗದಲ್ಲಿ 238 ಟ್ರಿಪ್ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.