ಸಬರ್ಬನ್ ರೈಲು ಯೋಜನೆ: ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ
ಬೆಂಗಳೂರು, ನವೆಂಬರ್ 13: ಬೆಂಗಳೂರು ಉಪನಗರ ಯೋಜನೆಯ ಮೊದಲ ಹಂತದ ಮೂರು ಮಾರ್ಗ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ 7,438 ಕೋಟಿ ರೂ. ಮೊತ್ತವನ್ನು ದೇಶೀಯ ಹಾಗೂ ವಿದೇಶಿ ಅಭಿವೃದ್ಧಿ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಹಾಗೂ ಮೂರು ಹಂತದ ಮೂರು ಮಾರ್ಗ ನಿರ್ಮಾಣಕ್ಕೆಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಬರ್ಬನ್ ರೈಲು ಯೋಜನೆ: ಬರಲಿವೆ ಕೇವಲ 57 ನಿಲ್ದಾಣಗಳು
ಮೊದಲ ಹಂತದಲ್ಲಿ ಬೆಂಗಳೂರು-ದೇವನಹಳ್ಳಿ, ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಹಾಗೂ ಕೆಂಗೇರಿ-ವೈಟ್ಫೀಲ್ಡ್ ಮಾರ್ಗಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
18,621 ಕೋಟಿ ರೂ ವೆಚ್ಚದಲ್ಲಿ ಯೋಜನೆ ಜಾರಿ
ಸಂಪುಟ ಸಭೆಯ ಬಳಿಕ ಮಾತನಾಡಿದ ಮಾಧುಸ್ವಾಮಿ ಕೇಂದ್ರ ಸರ್ಕಾರವು ಈ ಸಾಲಿನ ಬಜೆಟ್ನಲ್ಲಿ 18,621 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿದೆ. ಬಳಿಕ ಪಿಪಿಪಿ ಮಾದರಿಯಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ.
ಶೇ.60ರಷ್ಟು ಕೇಂದ್ರ-ರಾಜ್ಯ ಸರ್ಕಾರದ ಪಾಲು
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಒಟ್ಟು ಯೋಜನಾ ವೆಚ್ಚ ಶೇ.60ರಷ್ಟು ಭಾಗವಾಗಿರುವ 7,438 ಕೋಟಿ ರೂ,ಗಳನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಯೋಜನೆ ಸಲುವಾಗಿ ವಿಶೇಷ ಉದ್ದೇಶವಾಹಕವಾಗಿ ಸೂಚಿಸಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೂಲಕ 7438 ಕೋಟಿ ರೂ. ಸಾಲ ಪಡೆಯಲು ಸಂಪುಟ ಒಪ್ಪಿಗೆ ನೀಡಿದೆ.
ಮಾವಳ್ಳಿಪುರ ಕಸದ ಘಟಕ
ಬಿಬಿಎಂಪಿ ವತಿಯಿಂದ ಮಾವಳ್ಳಿಪುರದಲ್ಲಿ ತ್ಯಾಜ್ಯದಿಂದ ಸಿಎನ್ಜಿ ಅನಿಲ ತಯಾರಿಸುವ 1 ಸಾವಿರ ಟನ್ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯದ ಘಟಕ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಒಟ್ಟು 13 ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಘಟಕವನ್ನು ಸ್ಟರ್ಮ್ ಗ್ರೀನಿಂಗ್ ಎಂಬ ಖಾಸಗಿ ಸಂಸ್ಥೆಯೇ ನಿರ್ಮಿಸಿ, ನಿರ್ವಹಿಸುವ ರೀತಿಯಲ್ಲಿ 25 ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ.
ಶೇ.50ರಷ್ಟು ಬಡ್ಡಿ ರಿಯಾಯಿತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿ ಪಡೆದಿರುವವರು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಶೇ.50ರಷ್ಟು ಬಡ್ಡಿ ರಿಯಾಯಿತಿಯೊಂದಿಗೆ ಪಾವತಿಸಲು ಅವಕಾಶ ಮಾಡಿಕೊಟ್ಟು ಸಂಪುಟ ಒಪ್ಪಿಗೆ ನೀಡಿದೆ.
Recommended Video
ಜ್ಞಾನಭಾರತಿಯಲ್ಲಿ ಕಾಲೇಜು ನಿರ್ಮಾಣಕ್ಕೆ ಅಸ್ತು
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಜ್ಞಾನಭಾರತಿ ಆವರಣದಲ್ಲಿ ಮರ ಕಡಿದು ಕಾಲೇಜುಗಳ ನಿರ್ಮಾಣಕ್ಕೆ ಅಲ್ಲಿನ ನಡಿಗೆದಾರರ ಸಂಘ ಹಾಗೂ ಸಾರ್ವಜನಿಕರು ವಿರೋಧಿಸಿದ್ದರು.