ನೂತನ ಶಿಕ್ಷಣ ನೀತಿ ಒಪ್ಪಿದ ಮೊದಲ ರಾಜ್ಯ ಕರ್ನಾಟಕ
ಬೆಂಗಳೂರು, ಆ. 25: ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ, "ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ" ಬಗ್ಗೆ ಹಮ್ಮಿಕೊಂಡಿದ್ದ ಐದು ದಿನಗಳ ಆನ್ಲೈನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಡೀ ದೇಶದಲ್ಲೇ ಈ ನೀತಿಯನ್ನು ಮೊತ್ತ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಲಿದೆ ಎಂದರು.
ನೂತನ ಶಿಕ್ಷಣ ನೀತಿ ಕಾರ್ಯಾಗಾರ: ನೀವೂ ಭಾಗವಹಿಸಬಹುದು!
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಜ್ಯವು ಮೊದಲಿನಿಂದಲೂ ಉತ್ಸುಕತೆಯನ್ನು ಹೊಂದಿದೆ. ನೀತಿಯ ಕರಡು ಪ್ರತಿ ಕೈಸೇರುತ್ತಿದ್ದಂತೆ, ನೀತಿಯ ಜಾರಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಯಿತು ಎಂದ ಉಪ ಮುಖ್ಯಮಂತ್ರಿಗಳು, ನೀತಿ ಪ್ರಕಟವಾಗುವುದಕ್ಕೂ ಮೊದಲು, ಪ್ರಕಟವಾದ ನಂತರ ಕಾರ್ಯಪಡೆ ಜತೆ ಹತ್ತು ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಕರ್ನಾಟಕವೇ ಮೊದಲು
ನೂತನ ರಾಷ್ಟ್ರೀಯ ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡುವ ಬಗ್ಗೆ ಈಗಾಗಲೇ ಕಾರ್ಯಪಡೆ ಸಲಹೆಗಳನ್ನು ನೀಡಿದೆ. ಇನ್ನು ಅಂತಿಮ ಹಂತದ ಶಿಫಾರಸುಗಳನ್ನಷ್ಟೇ ನೀಡುವುದು ಬಾಕಿ ಇದೆ. ಆ ಶಿಫಾರಸುಗಳು ಬಂದ ಕೂಡಲೇ ಸರಕಾರ ನೀತಿಯ ಜಾರಿಯತ್ತ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಇಡಲಿದೆ. ಇನ್ನೊಂದು ವರ್ಷದ ಅವಧಿಯಲ್ಲಿ ಇಡೀ ನೀತಿಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು ಹಾಗೂ ಆಂದೋಲನದಂಥ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದರು.
ರಾಜ್ಯದ ದಿಕ್ಕು ಬದಲಾಗಲಿದೆ
ನೂತನ ಶಿಕ್ಷಣ ನೀತಿ ಜಾರಿಯ ನಂತರ ನಮ್ಮ ರಾಜ್ಯದ ದಿಕ್ಕೇ ಬದಲಾಗಲಿದೆ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಗುರುತರವಾಗಿ ತರಬಲ್ಲ ಈ ನೀತಿಯಿಂದ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶದ ಸ್ವರೂಪವೇ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಬೋಧನೆ ಸಿಗುವುದರಿಂದ ಇಡೀ ವ್ಯವಸ್ಥೆಯೇ ಸುಧಾರಿಸಲಿದೆ. ಅತ್ಯುತ್ತಮ ಶಿಕ್ಷಣದಿಂದ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು.
ಶಿಕ್ಷಣ ಸಂಸ್ಥೆಗಳ ಗುಣಮಟ್ಟ
ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವೂ ಸುಧಾರಿಸುತ್ತದೆ. ಇನ್ಸ್ ಪೆಕ್ಟರ್ ರಾಜ್ ವಾತಾವರಣ ಪೂರ್ಣವಾಗಿ ತೊಲಗಿ ಬದಲಾವಣೆಯ ಶಖೆ ಆರಂಭವಾಗಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್, ಉಪಾಧ್ಯಕ್ಷ ಡಾ. ಭೂಷಣ್ ಪಟವರ್ಧನ್, ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಭಾಗವಹಿಸಿದ್ದರು.
ಇನ್ನೂ ನಾಲ್ಕು ದಿನಗಳ ಕಾರ್ಯಾಗಾರ
ನೂತನ ಶಿಕ್ಷಣ ನೀತಿಯಡಿ ಕಾರ್ಯಾಗಾರ ಇನ್ನು ನಾಲ್ಕು ದಿನ ನಡೆಯಲಿದೆ. ಆಸಕ್ತರು ಜೂಮ್ ಐಡಿ 8710528 4169 ಹಾಗೂ ಪಾಸ್ವರ್ಡ್ BUB123 ಬಳಸಿ ಭಾಗವಹಿಸಬಹುದು. ಅಥವಾ ಡಾ. ವಾಹಿನಿ ಹಾಗೂ ಡಾ. ಎನ್. ಸತೀಶ್ ಗೌಡ ಅವರನ್ನು 94822 18980/9916007211 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಐದು ದಿನಗಳ ಕಾರ್ಯಕ್ರಮಕ್ಕೆ ಈಗಾಗಲೇ ಹತ್ತು ಸಾವಿರ ಜನ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಹಾಗೂ ಪೋಷಕರು, ಸಾರ್ವಜನಿಕರೆಲ್ಲರೂ ದೇಶದ ವಿವಿಧ ಭಾಗಗಳಿಂದ ಭಾಗವಹಿಸುತ್ತಿದ್ದಾರೆ.