ಮಿಡತೆ ದಾಳಿ ಎದುರಿಸಲು ರಾಜ್ಯ ಸಜ್ಜಾಗಿದೆ: ಸಚಿವ ಬಿ.ಸಿ ಪಾಟೀಲ್
ಬೆಂಗಳೂರು, ಮೇ 28: ಬೆಳೆ ನಾಶಮಾಡುವ ಮರುಭೂಮಿ ಮಿಡತೆ ರಾಜ್ಯವನ್ನು ಪ್ರವೇಶ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಿಡತೆಗಳು ದಕ್ಷಿಣ ಆಫ್ರಿಕಾದಿಂದ ಬಲೂಚಿಸ್ತಾನ, ಪಾಕಿಸ್ತಾನ್ ಮೂಲಕ ರಾಜಸ್ಥಾನ, ಗುರಾಜತ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ಬಂದಿರುವ ವರದಿ ಇದೆ ಎಂದು ತಿಳಿಸಿದರು.
ಶಾಕಿಂಗ್: 'ವಿನಾಶಕಾರಿ ಮಿಡತೆಗಳು ಕರ್ನಾಟಕಕ್ಕೂ ಬರಬಹುದು'
ಮೇ 25 ರಂದು ಅಮರಾವತಿಯಲ್ಲಿದ್ದ ಮಿಡತೆಗಳು, ಮೇ 28 ರಂದು ಬೋಂಡ್ಯಾಕ್ಕೆ ಬಂದಿವೆ. 150-200 ಕಿಲೋಮೀಟರ್ ಪ್ರತಿದಿನ ಗಾಳಿ ಬೀಸುವ ಕಡೆ ಪ್ರಯಾಣಿಸಲಿದೆ ಎಂದರು. ಕೀಟವೊಂದು 1 ರಿಂದ 2 ಗ್ರಾಂ ನಷ್ಟು ಹಸಿರು ತಿನ್ನಲಿದೆ. ಆದರೂ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯಾಗಲಿದೆ. ಸಂಜೆ 4 ರಿಂದ 7 ಗಂಟೆ ವೇಳೆ ಮಾತ್ರ ತಿನ್ನಲಿದ್ದು, ಬಾಕಿ ಸಮಯ ಗಿಡದಲ್ಲೇ ಇರಲಿವೆ ಎಂದು ಹೇಳಿದರು.
ಒಂದು ಲಕ್ಷ ಲೀಟರ್ ದಾಸ್ತಾನು ಇದೆ
ಮಿಡತೆಗಳನ್ನು ನಿಯಂತ್ರಣ ಮಾಡಲು ಕ್ಲೋರೋಫೈರಿಪಾಸ್ ಎನ್ನುವ ಔಷಧಿ ಸಿಂಪಡಣೆ ಮಾಡಬೇಕು. ಈ ಔಷಧಿ ಅಗತ್ಯವಾಗಿ ಬೇಕಿದ್ದು, 1 ಲಕ್ಷ ಲೀಟರ್ ದಾಸ್ತಾನು ಇದೆ, ಬೀದರ್, ಯಾದಗಿರಿ, ಕೊಪ್ಪಳ ಭಾಗಕ್ಕೆ ದಾಳಿ ಸಾಧ್ಯತೆ ಇದೆ ಎನ್ನಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ಮಿಡತೆಗಳ ನಿಯಂತ್ರಣಕ್ಕಾಗಿ ಹಣ ಬಿಡುಗಡೆ ಮಾಡಿದೆ. ಪ್ರಕೃತಿ ವಿಕೋಪ ನಿಧಿಯಿಂದ ಶೇ. 25 ರಷ್ಟು ಹಣವನ್ನು ಬಳಕೆ ಮಾಡಬಹುದಾಗಿದ್ದು, 200 ಕೋಟಿ ರೂ. ಹಣ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚನೆಯಾಗಿದೆ
ಗಾಳಿ ಕರ್ನಾಟಕ ರಾಜ್ಯದ ಕಡೆ ಬರುತ್ತಿಲ್ಲ ಅದು ಸಂತೋಷದ ವಿಷಯ. ಮಹಾರಾಷ್ಟ್ರದಿಂದ ರಾಜ್ಯದ ಕಡೆ ಗಾಳಿ ಬರುತ್ತಿಲ್ಲ, ನೈರುತ್ಯದಿಂದ ಈಶಾನ್ಯದ ಕಡೆ ಗಾಳಿ ಬೀಸುತ್ತಿದೆ. ಇನ್ನೂ 8 ದಿನ ಗಾಳಿ ಇದೇ ರೀತಿ ಇರಲಿದೆ ಹಾಗಾಗಿ ರಾಜ್ಯಕ್ಕೆ ಕೀಟಗಳು ಬರುವುದು ತೀರಾ ಕಡಿಮೆ, ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ
ರಾಜ್ಯದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳಿವೆ. ಜಿಲ್ಲಾಧಿಕಾರಿ, ಸಿಇಒ, ಜಿಡಿ ಕೃಷಿ ಇಲಾಖೆ, ಅಗ್ನಿ ಶಾಮಕ ಒಳಗೊಂಡ ತಂಡ ಇದೆ. ತುರ್ತು ಸಂದರ್ಭ ಬಂದರೆ ಎದುರಿಸಲು ಈ ತಂಡ ಕೆಲಸ ಮಾಡಲಿದೆ. ಡ್ರೋಣ್ ಮೂಲಕ ಕೀಟನಾಶಕ ಸಿಂಪಡಿಸಬಹುದು. ಅಗ್ನಿಶಾಮಕವನ್ನೂ ಬಳಸಬಹುದಾಗಿದೆ ಎಂದು ಹೇಳಿದರು.
ನಿಯಂತ್ರಣಕ್ಕೆ ಸರ್ಕಾರದ ಹಣ ಬಳಕೆ
ಕೋಲಾರದಲ್ಲಿ ಕಂಡುಬಂದಿರುವ ಮಿಡತೆಗಳು ಬೇರೆ ಇವೆ, ಗಾಬರಿ ಅಗತ್ಯವಿಲ್ಲ. ರಾಜಸ್ಥಾನದಲ್ಲಿ ಒಳ್ಳೆಯ ಮಳೆಯಾಗಿದ್ದು, ಮರಳುಗಾಡಿನಲ್ಲಿ ಇದು ಹುಟ್ಟಿದೆ ಎನ್ನುವುದು ತಜ್ಞರ ಅಭಿಪ್ರಾಯ. ಗಾಳಿಗೆ ವಿರುದ್ಧವಾಗಿ ಬರಲು ಸಾಧ್ಯವಿಲ್ಲವೆಂದರು.
ಮಿಡತೆ ದಾಳಿ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಔಷಧವನ್ನು ಗಡಿಯಲ್ಲಿ ದಾಸ್ತಾನು ಮಾಡಲಿದ್ದೇವೆ, ಸರ್ಕಾರದ ಹಣದಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದ್ದು, ರೈತರಿಂದ ಹಣ ಖರ್ಚು ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಮಿಡತೆ 500 ಮೊಟ್ಟೆ ಇಡಲಿದೆ
ಮಹಾರಾಷ್ಟ್ರ ಕೃಷಿ ಆಯುಕ್ತರ ಜೊತೆ ನಿರಂತರ ಸಂಪರ್ಕದಲ್ಲದ್ದೇವೆ. ಪ್ರತಿ ಗಂಟೆಗೊಮ್ಮೆ ಮಾಹಿತಿ ಪಡೆಯಲಾಗುತ್ತಿದೆ. ಒಂದು ಮಿಡತೆ ಗುಂಪು 10 ಕಿಲೋಟಮೀಟರ್ ಉದ್ದ, 2 ಕಿಲೋಮೀಟರ್ ಅಗಲ ಇರಲಿದೆ. ಈಗ 6-1 ಕಿಲೋಮೀಟರ್ ಅಳತೆಗೆ ಬಂದಿದ್ದು, ಒಂದು ಮಿಡತೆ 500 ಮೊಟ್ಟೆ ಇಡಲಿದೆ ಎಂಬ ಮಾಹಿತಿ ನೀಡಿದರು. ಕಳೆದ ಬಾರಿ ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ಹೋಗಿದ್ದವು, ಆದರೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದರು.