'ಮಾಧುಸ್ವಾಮಿ ರೀತಿ ಸಚಿವರು ನಡೆದುಕೊಂಡರೆ ಸುಮ್ಮನಿರಲ್ಲ'
ಬೆಂಗಳೂರು, ಮೇ 21: ರೈತ ಮಹಿಳೆಯೊಬ್ಬರಿಗೆ ಅವಮಾನಕಾರಿಯಾಗಿ ಮಾತನಾಡಿರುವ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ
ಮಾಧುಸ್ವಾಮಿ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ, ಸಮಾಜವಾದದ ಹಿನ್ನೆಲೆಯಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದ ಸಚಿವರಾದ ಮಾಧುಸ್ವಾಮಿ ಅವರಿಂದ ಇಂತಹ ನಡತೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮಹಿಳೆಯನ್ನು ನಿಂದಿಸಿದರೆ ಕ್ಷಮಿಸಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ ವಿರುದ್ಧ ಸಿಎಂ ಗರಂ
ಹೋರಾಟ ಮಾಡುತ್ತಿದ್ದ ರೈತ ಯುವತಿ ನಳಿನಿಯವರ ಜೊತೆ ಸಚಿವರು ನಡೆದುಕೊಂಡ ಸಂಯಮ ರಹಿತ ನಡೆ ನೋವಿನ ಸಂಗತಿ ಅಷ್ಟೇ ಅಲ್ಲ ಪ್ರಭುತ್ವಕ್ಕೆ ನಾಚಿಕೆಯ ಸಂಗತಿ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕ ಖಂಡಿಸುವುದಷ್ಟೇ ಅಲ್ಲದೆ ಸಚಿವರು ಕೇಳಿರುವ ಕ್ಷಮೆಗೆ ಗೌರವ ಕೊಡುತ್ತಿದ್ದೇವೆ ಎಂದು ಹೇಳಿದೆ.
ಯಾವುದೇ ಸಂಪುಟ ಸದಸ್ಯರಿಂದಲೂ ಇಂತಹವು ಪುನರಾವರ್ತನೆ ಆಗಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಪರವಾಗಿ ಚುಕ್ಕಿ ನಂಜುಂಡಸ್ವಾಮಿ, ಸುನಿತಾ ಪುಟ್ಟಣ್ಣಯ್ಯ ಹಾಗೂ ನಂದಿನಿ ಜಯರಾಮ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.