ಉತ್ತರ ಭಾರತೀಯರೇ ಕರ್ನಾಟಕವನ್ನು ಪ್ರೀತಿಸಿ: ನಾರಾಯಣಗೌಡ ಕರೆ
ಬೆಂಗಳೂರು ನವೆಂಬರ್ 25: ಉತ್ತರ ಭಾರತೀಯರು ತಮ್ಮ ರಾಜ್ಯಗಳಷ್ಟೇ ತಮ್ಮ ಕರ್ಮಭೂಮಿಯಾಗಿರುವ ಕರ್ನಾಟವನ್ನು ಪ್ರೀತಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಅವರು ಕರೆ ನೀಡಿದರು.
ರಾಜ್ಯದಲ್ಲಿ ನೆಲೆಸಿರುವ ಉತ್ತರ ಭಾರತೀಯ ಜನರು ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನಾ ಸಂಸ್ಥೆಯ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ 64 ನೇ ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕ ರಾಜ್ಯದ ಮೊದಲ ಮಹಿಳಾ ಸೇನಾಧಿಕಾರಿ ಸೀಮಾ ಗೌಡ ಅವರಿಗೆ ಶ್ರೀ ಗಂಧಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ, ಕನ್ನಡಿಗರು ಹೃದಯ ಶ್ರೀಮಂತಿಕೆಯ ಜನರು. ಇಲ್ಲಿನ ಜನ ನೀರು ಕೇಳಿದರೆ ಮಜ್ಜಿಗೆ ಕೊಡುತ್ತಾರೆ. ಅಲ್ಲದೆ, ಕನ್ನಡ ನಮ್ಮ ದೇಶದ ಪ್ರಮುಖ ಭಾಷೆಗಳಲ್ಲೊಂದು. ಬೇರೆ ಬೇರೆ ರಾಜ್ಯಗಳಿಂದ ಈ ರಾಜ್ಯಕ್ಕೆ ಆಗಮಿಸಿರುವ ನೀವುಗಳು ನಿಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದೀರಿ.
ಈ ಕರ್ಮಭೂಮಿ ಕರ್ನಾಟವನ್ನೂ ಪ್ರೀತಿಸುವಂತವಹರಾಗಬೇಕು. ಉತ್ತರ ಭಾರತದ ಜನರು ಇಷ್ಟು ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಕನ್ನಡ ಭಾಷೆಯನ್ನು ಕಲಿಯುವ ಮೂಲಕ ಇದನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಕನ್ನಡಕ್ಕೆ ಪ್ರಥಮ ಸ್ಥಾನಮಾನ ಕೊಡಿ, ಕೇವಲ ಪ್ರೀತಿ ಅಷ್ಟೇ ಅಲ್ಲದೆ ಕನ್ನಡವನ್ನು ಗೌರವಿಸಿ ಎಂದರು.
ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಮಾತನಾಡಿ, ಉತ್ತರ ಭಾರತದ ಜನರು ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಿರುವುದು ಬಹಳ ಸಂತಸದ ವಿಷಯವಾಗಿದೆ. ಕನ್ನಡವನ್ನು ಪ್ರೀತಿಸುವ ಜೊತೆಯಲ್ಲಿಯೇ ಅದನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸೈನಿಕರು ಹಾಗೂ ಹಲವಾರು ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉತ್ತರ ಭಾರತೀಯ ಜನರು ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಕ ರ ವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡ, ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಡಾ|| ಜಫ್ರುಲ್ಲಾ ಖಾನ್, ಸಮಾಜ ಸೇವಕ ಮಹೇಂದ್ರ ಮುನ್ಹೋತ್, ಎ.ಸಿ.ಬಿ ಎಸ್ ಪಿ ಐಪಿಎಸ್ ಜಿನೇಂದ್ರ ಖಣಗಾವಿ, ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ ರಾಕೇಶ್ ಎಂ ದೇಶರ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.