ಕರ್ನಾಟಕದ ಮೊದಲ ವಿಶೇಷ ಚೇತನರ ಉದ್ಯಾನ ಲೋಕಾರ್ಪಣೆ
ಬೆಂಗಳೂರು ಜೂ. 26: ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಕಲಚೇತನರಿಗಾಗಿ ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿ ವಿಶೇಷ ಉದ್ಯಾನವನ ತಲೆ ಎತ್ತಿದೆ. ವಿಕಲ ಚೇತನ ಮಕ್ಕಳ ಮತ್ತು ಅವರ ಪೋಷಕರ ಖಿನ್ನತೆ ಕಡಿಮೆಗೊಳಿಸುವಲ್ಲಿ ನೆರವಾಗುವ ಈ ಪಾರ್ಕ್ ಅನ್ನು ಜವಾಹರ್ ಬಾಲ ಭವನ ಆಮೆ ಆಕಾರದಲ್ಲಿ ವಿನ್ಯಾಸಗೊಳಿಸಿದೆ.
ಸರ್ಕಾರ ಮತ್ತು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಕಾರದಲ್ಲಿ ಮೈಂಡಟ್ರಿ ಸಂಸ್ಥೆ ನಿರ್ಮಿಸಿ ಮತ್ತು ನವೀಕರಿಸಿದ ವಿಕಲಚೇತನ ಸ್ನೇಹಿ ಈ ಬಾಲ ಭವನಕ್ಕೆ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಶನಿವಾರದಿಂದ ಸಾರ್ವಜನಿಕರಿಗೆ ವಿಶೇಷವಾಗಿ ಮಕ್ಕಳಿಗೆ ಮುಕ್ತವಾದ ಉದ್ಯಾನ ಶೇ.90ರಷ್ಟು ಕೆಲಸಗಳು ಮುಗಿದಿವೆ. ಉಳಿದ ಕೆಲಸಗಳು ನಡೆಯಲಿದ್ದು, ಇದೇ ವೇಳೆ ಸಾರ್ವಜನಿಕರರ ಭೇಟಿಗೂ ಅವಕಾಶ ನೀಡಲಾಗಿದೆ. ಮುಂದಿನ ಎರಡು ವಾರದಲ್ಲಿ ಬಾಕಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ ಎಂದು ಜೆಬಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉದ್ಯಾನದಲ್ಲಿ ಏನೇನಿದೆ?
ಈ ಬಾಲ ಭವನ(ಉದ್ಯಾನ)ದಲ್ಲಿ ಮಕ್ಕಳಿಗೆ ಆಟವಾಡಲು ಜಾರುಬಂಡೆ, ಜೋಕಾಲಿ, ಚಕ್ರಗಳು, ಅಗತ್ಯ ಸಲಕರಣೆ ಅಳವಡಿಸಲಾಗಿದೆ. ತಿಂಡಿಗಾಗಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಅಡತಡೆಯಿಲ್ಲದೆ ಆಟವಾಡಲು ವಿಶಾಲ ಮೈದಾನವಿದೆ. ಬೋಟಿಂಗ್, ಸೇತುವೆ, ರೈಲು ಸುರಂಗ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಮುಂದಿನ ಎರಡು ವಾರದಲ್ಲಿ ಅವುಗಳು ಮಕ್ಕಳಿಗಾಗಿ ಸಿದ್ಧವಾಗಲಿವೆ.
ವಿಕಲ ಚೇತನ ಸ್ನೇಹಿ ಬಾಲ ಭವನ
ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರ, ವಿಕಲಚೇತನರ ಸಂಸ್ಥೆಗಳು ಇಂತದ್ದೊಂದು ಪ್ರಯ್ನಕ್ಕೆ ಕೈ ಹಾಕಿ ಸುಮಾರು ಒಂದೂವರೆ ವರ್ಷವಾಗಿತ್ತು. ಕೋವಿಡ್ ಹಾಗೂ ಮಳೆಯ ಕಾರಣದಿಂದ ಕಾಮಗಾರಿಗೆ ತೊಂದರೆ ಉಂಟಾಗಿತ್ತು. ಇದೀಗ ವಿಕಲ ಚೇತನರು ಸ್ವಚ್ಚಂದವಾಗಿ ಆಡವಾಡಲು ಪಾರ್ಕ್ ಲೋಕಾರ್ಪಣೆಯಾಗಿದೆ.
ತಮ್ಮಂತೆ ಬೇರೆ ಬೇರೆಡೆಯಿಂದ ಉದ್ಯಾನಕ್ಕೆ ಬಂದ ಮಕ್ಕಳೊಂದಿಗೆ ಅವರು ಬೆರೆಯಬಹುದು. ಇದರಿಂದ ವಿಕಲ ಚೇತನ ಮಕ್ಕಳಲ್ಲಿ ತಾವು ಸಾಮಾನ್ಯರಂತಿಲ್ಲ ಎಂಬ ಒಂಟಿ ಭಾವನೆ ದೂರವಾಗಲು ಸಾಧ್ಯವಾಗುತ್ತದೆ. ದೈಹಿಕ ಕೊರತೆ, ಮಾನಸಿಕ ಖಿನ್ನತೆ, ಚಿಂತೆಗಳಿಂದ ದೂರವಾಗಲು ಉದ್ಯಾನ ಸಹಾಯ ಮಾಡುತ್ತದೆ.
ರಾಜ್ಯಪಾಲರಿಂದ ಬಾಲಭವನ ಉದ್ಘಾಟನೆ
ಬಾಲ ಭವನಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, "ಸರ್ಕಾರ ಮತ್ತು ಸ್ಮಾರ್ಟ್ ಸಿಟಿ ಸಹಕಾರದಲ್ಲಿ ಮೈಂಡ್ ಟ್ರಿ ಸಂಸ್ಥೆ ಮಕ್ಕಳಿಗೆ ಅಂತರ್ಗತ ಹಾಗೂ ಭೌತಚಿಕಿತ್ಸೆ ಒದಗಿಸುವ ಅನನ್ಯವಾದ ಉದ್ಯಾನ ನಿರ್ಮಿಸಿದೆ. ದಿವ್ಯಾಂಗರಿಗೆ ಅಗತ್ಯ ಅಗತ್ಯವುಳ್ಳ ಉದ್ಯಾನ ಕರ್ನಾಟಕದಲ್ಲಿ ಸಿದ್ಧವಾಗಿರುವುದು ನಮ್ಮ ಹೆಮ್ಮೆ. ಲಕ್ಷಾಂತರ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ವಿಶೇಷ ಚೇತನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅದರ ಹಾದಿಯಲ್ಲಿ ಇದೊಂದು ಮೊದಲ ಹೆಜ್ಜೆ ಎನ್ನಬಹದು" ಎಂದು ಶ್ಲಾಘಿಸಿದರು.
ಪ್ರಕೃತಿ ಮಡಿಲ್ಲಲ್ಲಿ ಕಾಲ ಕಳೆಯಬಹುದು.
ಮೈಂಡ್ ಟ್ರಿ ಸಂಸ್ಥೆ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, "ಸಾಮಾನ್ಯ ಮಕ್ಕಳಂತೆ ವಿಶೇಷ ಮಕ್ಕಳು ಸಹ ತಮಗಾಗೇ ಇರುವ ಉದ್ಯಾನದಲ್ಲಿ ಆಟವಾಡಬಹುದು. ಮಕ್ಕಳ ಜತೆಗೆ ವಿಶೇಷ ಚೇತನರು ಇಲ್ಲಿ ಕಾಲ ಕಳೆಯಬಹುದು. ತಮ್ಮ ಬಾಲ್ಯ ಕುರಿತು ಸ್ಮರಿಸಲು, ವಿಶ್ರಾಂತಿ ಪಡೆಯಲು ಜೆಬಿಬಿ ಸೂಕ್ತ ಸ್ಥಳವಾಗಿದೆ. ಕಬ್ಬನ್ ಉದ್ಯಾನವು ಭೌಗೋಳಿಕವಾಗಿ ಜೌಗು ಪ್ರದೇಶವಾಗಿದೆ. ಅದನ್ನು ಬಾಲಭವನಕ್ಕೆ ಪೂರಕವಾಗಿ ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಲಾಗಿದೆ" ಎಂದು ವಿವರಿಸಿದರು.