ನೆಲಮಂಗಲದಲ್ಲಿ ತಯಾರಾಗಿದೆ ಅಕ್ರಮ ವಲಸಿಗರನ್ನಿಡುವ ಮೊದಲ ಡಿಟೆನ್ಶನ್ ಕ್ಯಾಂಪ್
ಬೆಂಗಳೂರು, ಡಿಸೆಂಬರ್ 18: ಎನ್ಆರ್ಸಿ, ಪೌರತ್ವ ಕಾಯ್ದೆಯ ಕುರಿತು ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಅಕ್ರಮ ವಲಸಿಗರನ್ನು ಹೊರಗಟ್ಟಲು ತಯಾರಿ ಆರಂಭಿಸಿದೆ.
ಅಕ್ರಮ ವಲಸಿಗರನ್ನು ಬಂಧಿಸಿ ಇಡಲು ವಿಶೇಷ ಜೈಲು ಗುರಿತಿಸಲಾಗಿದ್ದು, ಜನವರಿ ವೇಳೆಗೆ ಅಕ್ರಮ ವಲಸಿಗರ ಶಿಬಿರ (ಡಿಟೆನ್ಷನ್ ಸೆಂಟರ್) ಉದ್ಘಾಟನೆಯಾಗಲಿದೆ.
ರಾಜ್ಯದ ಮೊತ್ತ ಮೊದಲ ಡಿಟೆನ್ಷನ್ ಕ್ಯಾಂಪ್ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ನೆಲಮಂಗಲದಲ್ಲಿ ಆರಂಭವಾಗಲಿದೆ.
'ಡಿಟೆನ್ಷನ್ ಸೆಂಟರ್ ನಿರ್ಮಾಣಕ್ಕೆ ಎಲ್ಲ ಅಡೆ-ತಡೆಗಳು ನಿವಾರಣೆ ಆಗಿದ್ದು, ಜನವರಿಯಿಂದ ಅದು ಕಾರ್ಯಾರಂಭ ಮಾಡಲಿದೆ' ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹೇಳಿದ್ದಾರೆ.
ನೆಲಮಂಗಲದಲ್ಲಿ ನಿರ್ಮಾಣವಾಗುತ್ತಿರುವ ಡಿಟೆನ್ಷನ್ ಕ್ಯಾಂಪ್ ನಲ್ಲಿ, ಅಕ್ರಮ ವಲಸಿಗರನ್ನು, ಭಾರತಕ್ಕೆ ಬಂದು ಅವಧಿ ಮೀರಿದ್ದರೂ ಇಲ್ಲಿಯೇ ಇರುವವರನ್ನು ಬಂಧಿಸಿ ಇಡಲಾಗುತ್ತದೆ. ನಂತರ ಇಲ್ಲಿಂದ ಅವರನ್ನು ಮೂಲ ದೇಶಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ನೆಲಮಂಗಲದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ ಅನ್ನು ಖಾಲಿ ಮಾಡಲಾಗಿದ್ದು, ಇದೇ ರಾಜ್ಯದ ಮೊದಲ ಡಿಟೆನ್ಷನ್ ಕ್ಯಾಂಪ್ ಆಗಲಿದೆ. ಹಾಸ್ಟೆಲ್ ಗೆ ಅಲ್ಪ ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಎರಡು ದೊಡ್ಡ ವಾಚ್ ಟವರ್ (ವೀಕ್ಷಣಾ ಗೋಪುರ) ನಿರ್ಮಾಣ ಸಹ ಮಾಡಲಾಗುತ್ತಿದೆ.
'ಡಿಟೆನ್ಶನ್ ಕ್ಯಾಂಪ್ ಈಗಾಗಲೇ ಉದ್ಘಾಟನೆಗೆ ತಯಾರಾಗಿದೆ. ಆದರೆ ಈ ಹೊಸ ಕ್ಯಾಂಪ್ ಯಾರ ಸುಪರ್ಧಿಯೊಳಗೆ ಬರುತ್ತದೆ ಎಂಬುದು ನಿರ್ಧರಿಸುವುದು ತಡವಾದ ಕಾರಣ ಉದ್ಘಾಟನೆ ತಡವಾಗುತ್ತಿದೆ. ಈ ಕ್ಯಾಂಪ್ ಗೃಹ ಇಲಾಖೆ ವ್ಯಾಪ್ತಿಯೊಳಗೆ ಬರುತ್ತದೆ. ಕ್ಯಾಂಪ್ ಅನ್ನು ಸಮಾಜ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
24 ಜನರು ಮಾತ್ರವೇ ವಾಸಮಾಡಬಹುದಾದ ಹಾಸ್ಟೆಲ್ ಅನ್ನು ಕ್ಯಾಂಪ್ ಆಗಿ ಬದಲಾಯಿಸಲಾಗಿದೆ. ಆದರೆ ಬೆಂಗಳೂರು ಒಂದರಲ್ಲೇ ಸಾವಿರಾರು ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಗೃಹ ಮಂತ್ರಿಗಳೇ ಇತ್ತೀಚೆಗೆ ಹೇಳಿದ್ದರು. ಒಂದರಲ್ಲಿಯೇ ಎಲ್ಲರನ್ನೂ ಇಡುತ್ತಾರೆಯೇ ಅಥವಾ ಹೊಸ ಡಿಟೆನ್ಶನ್ ಕ್ಯಾಂಪ್ ಸ್ಥಾಪಿಸುತ್ತಾರೆಯೇ ನೋಡಬೇಕಿದೆ.