ಕೇರಳಕ್ಕೆ ಸಾರಿಗೆ ನಿಗಮದ ಯಾವ ಬಸ್ ತೆರಳುತ್ತಿಲ್ಲ, ಖಾಸಗಿ ವ್ಯವಸ್ಥೆಯೂ ಇಲ್ಲ
ಬೆಂಗಳೂರು, ಜನವರಿ 3: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಗುರುವಾರ ಕೇರಳಕ್ಕೆ ತೆರಳುವ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಆದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಕೇರಳ ರಾಜ್ಯ ಬಂದ್ ನಡೆಸುತ್ತಿವೆ. ಆ ಕಾರಣಕ್ಕೆ ಕೇರಳಕ್ಕೆ ಬಸ್ ಸೇವೆ ನಿಲ್ಲಿಸಲಾಗಿದೆ.
ಮಂಗಳೂರು ವಿಭಾಗದ ಎರಡು ಕೆಎಸ್ಸಾರ್ಟೀಸಿ ಬಸ್ ಗಳಿಗೆ ಕೇರಳದಲ್ಲಿ ಪ್ರತಿಭಟನಾನಿರತರು ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಎರಡು ಬಸ್ ಗಳನ್ನು ಕಾಸರಗೋಡು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಗುರುವಾರ ಬೆಳಗ್ಗೆ ಪ್ರತಿಭಟನಾನಿರತರು ಕಲ್ಲುತೂರಾಟ ನಡೆಸಿದ್ದಾರೆ.
ಬೆಂಗಳೂರು ಕೇಂದ್ರ ವಲಯ, ಮೈಸೂರು, ಮಂಗಳೂರು ಹಾಗೂ ಚಿಕ್ಕಮಗಳೂರಿನಿಂದ ಕೇರಳಕ್ಕೆ ತೆರಳಬೇಕಿದ್ದ ಎಲ್ಲ ಬಸ್ ಗಳ ಸೇವೆಯನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪೊಲೀಸರಿಂದ ಒಪ್ಪಿಗೆ ದೊರೆತ ನಂತರವಷ್ಟೇ ಪುನರಾರಂಭ ಮಾಡಲಾಗುವುದು. ಸಂಜೆ ಹೊತ್ತಿಗೆ ಮತ್ತೆ ಬಸ್ ಗಳ ಸಂಚಾರ ಆರಂಭ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಮೂಲದವರೂ ಸೇರಿ ಶಬರಿಮಲೆಗೆ ತೆರಳಬೇಕಿದ್ದ ಹಲವು ಭಕ್ತರಿಗೆ ಬೆಂಗಳೂರಿನಿಂದ ಯಾವುದೇ ಖಾಸಗಿ ಬಸ್ ಅಥವಾ ಟ್ಯಾಕ್ಸಿಗಳು ಸಹ ದೊರೆತಿಲ್ಲ. ಈಗಾಗಲೇ ನಿಗದಿ ಆಗಿದ್ದ ಪ್ರವಾಸಗಳನ್ನು ಸಹ ಖಾಸಗಿ ಟೂರಿಸ್ಟ್ ಆಪರೇಟರ್ ಗಳು ರದ್ದು ಮಾಡುತ್ತಿದ್ದಾರೆ.