ಕರ್ನಾಟಕ ರಾಷ್ಟ್ರ ಸಮಿತಿ "ಗಾಂಧಿಗಿರಿ" ಹೋರಾಟಕ್ಕೆ ಹೆದರಿದ ಪೊಲೀಸ್ !
ಬೆಂಗಳೂರು, ಮಾರ್ಚ್ 19: ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಭ್ರಷ್ಟಾಚಾರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ನಡೆಸಿದ "ಗಾಂಧಿಗಿರಿ" ಹೋರಾಟ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಭೂ ವ್ಯವಹಾರ ಕುದುರಿಸಲು ವ್ಯಕ್ತಿಯೊಬ್ಬರನ್ನು ಎರಡು ದಿನ ಅಕ್ರಮ ಬಂಧನದಲ್ಲಿದ್ದ ಕೆಂಪೇಗೌಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚೇತನ್ ಕುಮಾರ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಡೆದ ಗಾಂಧಿಗಿರಿ ಹೋರಾಟದ ವಿಡಿಯೋ ವೈರಲ್ ಆಗಿದೆ.
ಎರಡು ದಶಕದಿಂದ ವಾಸವಿದ್ದ ಕುಟುಂಬವನ್ನು ಹೆದರಿಸಿ ಕೆಂಪೇಗೌಡ ಪೊಲೀಸ್ ಠಾಣೆ ಪೊಲೀಸರು ಹೊರ ಹಾಕಿದ್ದಾರೆ. ಮನೆ ಮಾಲೀಕ ಎನ್ನಲಾದ ರಮೇಶ್ ಎಂಬಾತನನ್ನು ಪೊಲೀಸರೇ ವಶಕ್ಕೆ ಪಡೆದು ಎರಡು ದಿನ ಅಕ್ರಮ ಬಂಧನದಲ್ಲಿಟ್ಟಿದ್ದಾರೆ. ಈ ಮೂಲಕ ಮನೆಯೊಂದನ್ನು ಖಾಲಿ ಮಾಡಿಸುವ ಪ್ರಯತ್ನಕ್ಕೆ ಕೆಂಪೇಗೌಡ ನಗರ ಪೊಲೀಸರು ಕೈ ಹಾಕಿದ್ದರು ಎನ್ನಲಾಗಿದೆ. ಪೊಲೀಸ್ ಠಾಣೆಗೆ ವಕೀಲರೊಬ್ಬರನ್ನು ಕರೆಸಿ, ಬಂಧನದಲ್ಲಿದ್ದ ರಮೇಶ್ ಜತೆ ಮಾತುಕತೆ ನಡೆಸಲು ಒತ್ತಡ ಹಾಕಿರುವ ಆರೋಪ ಕೇಳಿ ಬಂದಿತ್ತು. ಮಾತ್ರವಲ್ಲದೇ ಪೊಲೀಸರೇ ಸ್ವತಃ ಲಾರಿ ಬಾಡಿಗೆಗೆ ಪಡೆದು ಮನೆಯಲ್ಲಿದ್ದ ಸಾಮಾನು ಸಾಗಿಸಲು ಪ್ರಯತ್ನ ಮಾಡಿದ್ದರು.
Recommended Video
ಭೂ ವ್ಯಾಜ್ಯಗಳಲ್ಲಿ ಪೊಲೀಸರು ಮೂಗು ತೋರಿಸಬಾರದು ಎಂಬ ನಿಯಮವಿದ್ದರೂ ಮನೆ ಖಾಲಿ ಮಾಡಿಸಲು ಯತ್ನಿಸಿದ ಕೆಂಪೇಗೌಡನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಅವರ ಅಮಾನತಿಗೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸ್ ಠಾಣೆ ಮುಂದೆ ಕೂತು ಅಮಾನತಿಗೆ ಆಗ್ರಹಿಸಿದರು. ಕರ್ನಾಟಕ ರಾಷ್ಟ್ರ ಸಮಿತಿ ಹೋರಾಟದ ವಿಡಿಯೋ ಇದೀಗ ಬೆಂಗಳೂರಿನಾದ್ಯಂತ ವೈರಲ್ ಆಗಿದೆ. ಪೊಲೀಸರ ಕಾರ್ಯ ಶೈಲಿಗೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಘಟನಾ ಸ್ಥಳಕ್ಕೆ ಎಸಿಪಿ ಆಗಮಿಸಿ ಶಿಸ್ತು ಕ್ರಮದ ಭರವಸೆ ನೀಡಿದ ಬಳಿಕ ಹೋರಾಟ ಕೈ ಬಿಡಲಾಗಿದೆ.