ರಾಜ್ಯೋತ್ಸವದ ದಿನ ರಾಜಭವನದಲ್ಲಿ ಗುಜರಾತಿ ಉತ್ಸವ!
ಬೆಂಗಳೂರು, ನ.02: ರಾಜ್ಯಪಾಲ ವಜುಭಾಯಿ ವಾಲಾ ಅವರು ಮತ್ತೊಮ್ಮೆ ಕರ್ನಾಟಕ ರಕ್ಷಣಾ ವೇದಿಕೆ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನಾಚರಣೆ ದಿನ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸಿದ್ದಾರೆ. ಪ್ರವೀಣ್ ಶೆಟ್ಟಿ ಬಳಗದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ.
ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಯುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಅದರೆ, ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇಡೀ ನಾಡು, ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸುವುದು ಎಷ್ಟು ಸರಿ ಎಂದು ಕರವೇ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಅದರೆ, ಕರವೇ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಯಾರಿಂದಲೂ ಸಿಗಲಿಲ್ಲ. ಪ್ರತಿಭಟನೆ ನಡೆಸಲು ಪೊಲೀಸರು ಬಿಡಲಿಲ್ಲ.
ರಾಜ್ಯಪಾಲ ವಜುಬಾಯ್ ವಾಲಾ ಮುಂದಾಳತ್ವದಲ್ಲೇ ಗುಜರಾತಿ ಉತ್ಸವ ನಡೆದಿದ್ದು, ಬೆಂಗಳೂರಿನ ಸಾವಿರಾರು ಗುಜರಾತ್ ಕುಟುಂಬಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯ ಹಿನ್ನೆಲೆಯಿಂದಲೇ ಬಂದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಹಿಂದೆ ಕರ್ನಾಟಕದ ಆಡಳಿತ ಭಾಷೆ ಕನ್ನಡದಲ್ಲೂ ಮಾತನಾಡದೇ, ತಮ್ಮ ತಾಯ್ನುಡಿ ಗುಜರಾತಿಯಲ್ಲೂ ಮಾತನಾಡದೇ ಹಿಂದಿ ಭಾಷೆಯ ಪ್ರಚಾರಕರಂತೆ ವರ್ತಿಸುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿತ್ತು. ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.