ಹಿಂದಿವಾದಿ ವಜುಭಾಯಿ ವಿರುದ್ಧ ಕರವೇ ಪ್ರತಿಭಟನೆ
ಬೆಂಗಳೂರು, ಜ.30: ಕರ್ನಾಟಕ ವಿಧಾನಮಂಡಲದ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುವುದಾಗಿ ತಿಳಿಸಿರುವ ರಾಜ್ಯಪಾಲರಾದ ವಾಜುಬಾಯಿವಾಲಾ ಅವರ ನಿಲುವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ಪ್ರತಿಭಟನೆ ನಡೆಸಿದೆ. [ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರಿಂದ ಹಿಂದಿಯಲ್ಲಿ ಭಾಷಣ]
ಫೆಬ್ರವರಿ ಎರಡರಿಂದ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುವುದಾಗಿ ತಿಳಿಸಿದ್ದಾರೆ. ಕನ್ನಡ ಕಲಿಯಲು ಸಾಕಷ್ಟು ಸಮಯ ಸಿಕ್ಕರೂ ರಾಜ್ಯಪಾಲರು ಆಸಕ್ತಿ ತೋರಿಲ್ಲ. ಹಿಂದಿ ಬದಲು ಇಂಗ್ಲೀಷ್ ಬಳಸಬಹುದಿತ್ತು ಎಂದು ಕರವೇ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಹೇಳಿದ್ದಾರೆ. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ರಾಜ್ಯಪಾಲರಾಗಿ ಐದು ತಿಂಗಳು ಕಳೆದರೂ ಕನ್ನಡ ಕಲಿಯುವ ಯಾವುದೇ ಪ್ರಯತ್ನ ಮಾಡದೇ ಎಲ್ಲ ಸಾರ್ವಜನಿಕ ಸಭೆಗಳಲ್ಲೂ ಹಿಂದಿಯಲ್ಲೇ ಮಾತನಾಡುತ್ತ, ಹಿಂದಿ ಕಲಿತು ಸುಸಂಸ್ಕೃತರಾಗಿ ಎಂದು ಕನ್ನಡಿಗರಿಗೆ ಪಾಠ ಮಾಡುತ್ತ ಬಂದಿರುವ ರಾಜ್ಯಪಾಲರು ಈಗ ಇನ್ನೊಂದು ಹೆಜ್ಜೆ ಮುಂದುವರೆದು ಕನ್ನಡ ನಾಡಿನ ಅಧಿಕಾರ ಕೇಂದ್ರದಲ್ಲೇ ಹಿಂದಿಯಲ್ಲಿ ಮಾತನಾಡುತ್ತೇನೆ ಅನ್ನುವ ಮೂಲಕ ಕರ್ನಾಟಕದಲ್ಲಿ ಹಿಂಬಾಗಿಲಿನಿಂದ ನಿರಂತರವಾಗಿ ನಡೆಯುತ್ತಿರುವ ಹಿಂದಿ ಹೇರಿಕೆಯ ಪ್ರಯತ್ನಗಳಿಗೆ ಈಗ ರಾಜಮಾರ್ಗದಲ್ಲೇ ಇನ್ನಷ್ಟು ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ.
ಆಳ್ವಾ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು
ಈ ಹಿಂದೆ ಕನ್ನಡತಿ ಮಾರ್ಗರೇಟ್ ಆಳ್ವಾ ಉತ್ತರಾಖಂಡ ರಾಜ್ಯದ ರಾಜ್ಯಪಾಲರಾಗಿದ್ದಾಗ ಇಂಗ್ಲಿಷಿನಲ್ಲಿ ಮಾತನಾಡಲು ಯತ್ನಿಸಿದಾಗ ಅವರ ವಿರುದ್ಧ ಅಲ್ಲಿನ ಬಿಜೆಪಿ ನಾಯಕರು ಪ್ರತಿಭಟಿಸಿದ್ದರಲ್ಲದೇ ಉತ್ತರಾಖಂಡ ರಾಜ್ಯದ ಆಡಳಿತ ಭಾಷೆಯಾದ ಹಿಂದಿಯಲ್ಲೇ ಮಾತನಾಡಬೇಕೆಂದು ಒತ್ತಾಯಿಸಿದ್ದರು.
ಅದರೆ, ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ಬೇಸರ ವ್ಯಕ್ತಪಡಿಸಿದರೂ ಬಿಜೆಪಿ ನಾಯಕರು ಮಾತ್ರ ಯಾವುದೇ ಹೇಳಿಕೆ ನೀಡಿಲ್ಲ
ಬೇಕಿದ್ದರೆ ತಾಯ್ನುಡಿಯನ್ನು ಆಯ್ಕೆ ಮಾಡಿಕೊಳ್ಳಲಿ
ಹಿಂದಿವಾದಿ ಬಿಜೆಪಿಯ ಹಿನ್ನೆಲೆಯಿಂದಲೇ ಬಂದ ಕರ್ನಾಟಕದ ರಾಜ್ಯಪಾಲರು ಕರ್ನಾಟಕದ ಆಡಳಿತ ಭಾಷೆ ಕನ್ನಡದಲ್ಲೂ ಮಾತನಾಡದೇ, ತಮ್ಮ ತಾಯ್ನುಡಿ ಗುಜರಾತಿಯಲ್ಲೂ ಮಾತನಾಡದೇ ಹಿಂದಿ ಭಾಷೆಯ ಪ್ರಚಾರಕರಂತೆ ವರ್ತಿಸುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಹೇಳಿದ್ದಾರೆ.
ಮೂರು ಪಕ್ಷಗಳ ಜನಪ್ರತಿನಿಧಿಗಳು ಏನ್ಮಾಡ್ತಿದ್ದಾರೆ?
ವಿಧಾನಸಭೆಯಲ್ಲೇ ಕನ್ನಡದ ಸಾರ್ವಭೌಮತ್ವಕ್ಕೆ ಕುತ್ತು ಬರುತ್ತಿರುವ ಹೊತ್ತಿನಲ್ಲೂ ಮೌನ ತಳೆದಿರುವ ಕರ್ನಾಟಕದ ಮೂರು ಪಕ್ಷಗಳ ಜನಪ್ರತಿನಿಧಿಗಳ ನಿಲುವನ್ನು ವೇದಿಕೆ ವಿರೋಧಿಸುತ್ತದೆ. ಈ ಕೂಡಲೇ ರಾಜ್ಯಪಾಲರು ಹಿಂದಿ ಹೇರಿಕೆಯ ಕ್ರಮವನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತದೆ.
ಸ್ಥಳೀಯ ಭಾಷೆಗೆ ಬೆಲೆ ಇಲ್ಲದ್ದಂತಾಗಿದೆ
ಭಾರತ ಪ್ರಜಾಪ್ರಭುತ್ವ ರಾಷ್ಟವಾದರೂ ಹಿಂದಿ ಹೇರಿಕೆ ನಿರಂತರವಾಗಿ ನಡೆಯುತ್ತಿದೆ. 13 ರಾಜ್ಯಗಳಲ್ಲಿ ಹೊರತು ಪಡಿಸಿದರೆ ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಪ್ರಭಾವ ಇಲ್ಲ. ಸ್ಥಳೀಯ ಭಾಷೆಯಲ್ಲೇ ಬಳಸಲಾಗುತ್ತದೆ. ಸಂವಹನ ಮಾಧ್ಯಮವಾಗಿ ಆಂಗ್ಲ ಭಾಷೆ ಬಳಸಬಹುದಾಗಿದೆ. ಅದರೆ, ಹಿಂದಿ ರಾಷ್ಟ್ರಭಾಷೆ ಎಂಬ ಪೊಳ್ಳು ಮಾತನ್ನಾಡುತ್ತಾ ಸ್ಥಳೀಯ ಭಾಷೆಗೆ ಅಪಮಾನ ಎಸಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ಕರವೇ ಹೇಳಿದೆ.
ಚಿತ್ರಗಳ ಕೃಪೆ: ಕರ್ನಾಟಕ ರಕ್ಷಣಾ ವೇದಿಕೆ ಫೇಸ್ ಬುಕ್ ಪುಟ