ರಸ್ತೆ ತೆರಿಗೆ ವಿನಾಯ್ತಿ ಕೋರಿದ ಖಾಸಗಿ ಬಸ್ ಮಾಲೀಕರು!
ಬೆಂಗಳೂರು, ಮೇ 22: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿರುವ ಲಾಕ್ಡೌನ್ ನಿಂದಾಗಿ ರಾಜ್ಯದಲ್ಲಿ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಸರ್ಕಾರಿ ಸ್ವಾಮ್ಯದ ಬಸ್ ಸಂಚಾರ ಆರಂಭವಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸಾರಿಗೆ ಸಂಚಾರ ಜಾರಿಯಲ್ಲಿದೆ.
Recommended Video
ಈ ನಡುವೆ ಶುಕ್ರವಾರದಂದು ರಾಜ್ಯ ಖಾಸಗಿ ಬಸ್ ಗಳ ಮಾಲೀಕರ ನಿಯೋಗವು ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿತು. ಮುಖ್ಯವಾಗಿ ಲಾಕ್ಡೌನ್ ನಿಂದಾಗಿ ಭಾರಿ ನಷ್ಟ ಉಂಟಾಗಿದ್ದು, ಖಾಸಗಿ ಬಸ್ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೋರಿದರು.
ಖಾಸಗಿ ಬಸ್ ಟಿಕೆಟ್ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿ
ಮೊದಲ ಆರು ತಿಂಗಳು ಸಂಪೂರ್ಣ ರಸ್ತೆ ತೆರಿಗೆ ವಿನಾಯ್ತಿ ಹಾಗೂ ಮುಂದಿನ ಆರು ತಿಂಗಳು ರಸ್ತೆ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟರೆ ಮಾತ್ರ ಬಸ್ ಗಳನ್ನು ರಸ್ತೆಗೆ ಇಳಿಸಲು ಸಾಧ್ಯ, ತೆರಿಗೆ ವಿನಾಯಿತಿ ಕೊಡದಿದ್ರೆ ಬಸ್ ಓಡಿಸೋಕ್ಕೆ ಕಷ್ಟ. ರಾಜ್ಯದಲ್ಲಿ ಸುಮಾರು 1.5 ಲಕ್ಷ ಖಾಸಗಿ ಬಸ್ ಗಳಿವೆ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಖಾಸಗಿ ಬಸ್ ಮಾಲೀಕರು ಕೋರಿದರು.
ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ, ತೆರಿಗೆ ವಿನಾಯತಿ ಬಗ್ಗೆ ಪರಿಶೀಲನೆ ಮಾಡಿ ತಿಳಿಸುವುದಾಗಿ ಭರವಸೆ ನೀಡಿದರು.