ಶಶಿಕಲಾ ಪೆರೋಲ್ ಅರ್ಜಿ ತಿರಸ್ಕರಿಸಿದ ಕಾರಾಗೃಹ ಇಲಾಖೆ
ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರ ಪೆರೋಲ್ ಅರ್ಜಿಯನ್ನು ಕರ್ನಾಟಕ ಕಾರಾಗೃಹ ಇಲಾಖೆಯು ಮಂಗಳವಾರ ತಿರಸ್ಕರಿಸಿದೆ. ಪತಿ ಎಂ.ನಟರಾಜನ್ ಗೆ ಅನಾರೋಗ್ಯ ಆಗಿರುವ ಕಾರಣ ಭೇಟಿ ಮಾಡಲು ಅವಕಾಶ ಕೋರಿ ಪೆರೋಲ್ ಗಾಗಿ ಶಶಿಕಲಾ ಅರ್ಜಿ ಹಾಕಿದ್ದರು.
ಪತಿ ಆರೋಗ್ಯ ಸ್ಥಿತಿ ಗಂಭೀರ: ಜಾಮೀನಿಗಾಗಿ ಶಶಿಕಲಾ ಪ್ರಯತ್ನ?
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಾಲ್ಕು ವರ್ಷದ ಜೈಲು ಶಿಕ್ಷೆಯನ್ನು ಶಶಿಕಲಾ ಅನುಭವಿಸುತ್ತಿದ್ದಾರೆ. ಅವರ ಪತಿ ನಟರಾಜನ್ ಗೆ ಚೆನ್ನೈ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಶಿಕಲಾ ಪರ ವಕೀಲರು ಹದಿನೈದು ದಿನಗಳ ಪೆರೋಲ್ ಗಾಗಿ ಕೇಳಿದ್ದಾರೆ. ಆದರೆ ಶಶಿಕಲಾ ಅವರಿಗೆ ಎಷ್ಟು ದಿನಗಳ ಪೆರೋಲ್ ಸಿಗಬಹುದು ಎಂಬ ಬಗ್ಗೆ ಗೊತ್ತಿಲ್ಲ ಎಂದು ಆಕೆಯ ಸಹೋದರ ಟಿಟಿವಿ ದಿನಕರನ್ ತಿಳಿಸಿದ್ದಾರೆ.
ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಅದಕ್ಕಾಗಿ ಆಕೆ ಕೋಟ್ಯಂತರ ರುಪಾಯಿ ಲಂಚ ನೀಡಿದ್ದಾರೆ ಎಂಬ ದೂರು ಒಳಗೊಂಡ ವರದಿ ಕರ್ನಾಟಕ ರಾಜ್ಯ ಸರಕಾರಕ್ಕೆ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್ ಸಲ್ಲಿಸಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.